ಸಂಜೀವಿನಿ ಸ್ವಸಹಾಯ ಗುಂಪುಗಳಿಂದ ಅರ್ಜಿ ಆಹ್ವಾನ
ಉಡುಪಿ : ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋ ಪಾಯ ಸಂವರ್ಧನಾ ಸಂಸ್ಥೆ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆ ಯೋಜನೆ ಸಂಜೀವಿನಿ ಸ್ವ ಸಹಾಯ ಗುಂಪುಗಳಿಗೆ ಮೂಲ ಬಂಡವಾಳ ನಿಧಿಯನ್ನು ವಿತರಿಸಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಜೂ.೧೫ರೊಳಗೆ ಎಲ್ಲಾ ಗ್ರಾಮ ಪಂಚಾಯತ್ಗಳ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಪ್ರಧಾನ ಮಂತ್ರಿಗಳ ಸಣ್ಣ ಆಹಾರ ಸಂಸ್ಕರಣಾ ಉದ್ದಿಮೆಗಳ ಮೂಲಧನದಡಿ ಕಿರು ಆಹಾರ ಉತ್ಪಾದನೆ ಮಾಡುವ ಸಂಜೀವಿನಿ ಮಹಿಳಾ ಸ್ವಸಹಾಯ ಗುಂಪಿನ ಸದಸ್ಯರಿಗೆ ಈ ಯೋಜನೆಯಿಂದ ಹಣಕಾಸಿನ ನೆರವನ್ನು ನೀಡಲಾಗುತ್ತದೆ. ಪ್ರತೀ ಫಲಾನುಭವಿಗೆ ೪೦೦೦೦ರೂ.ವರೆಗೆ ಶೇ.೬ರಷ್ಟು ಬಡ್ಡಿಯಂತೆ ಸಾಲ ಪಡೆಯ ಬಹುದು.
ಕಿರುಧಾನ್ಯಗಳಿಂದ ತಯಾರಿಸಿದ ಆಹಾರ ಉತ್ಪನ್ನಗಳು, ಹಪ್ಪಳ, ಉಪ್ಪಿನ ಕಾಯಿ, ಸಂಡಿಗೆ, ಜೋಳದ ರೊಟ್ಟಿ, ಶಾವಿಗೆ, ಸಾಂಬಾರು ಪದಾರ್ಥಗಳು, ಚಟ್ನಿಪುಡಿ, ಬಿಸ್ಕತ್ಗಳು, ವಿವಿಧ ಬಗೆಯ ಚಿಪ್ಸ್, ಚಕ್ಕುಲಿ, ನಿಪ್ಪಟ್ಟು, ಚಾಕಲೇಟ್, ಹೋಳಿಗೆ, ವಿವಿಧ ಬಗೆಯ ಮಾಲ್ಟ್, ತೆಂಗಿನಕಾಯಿ ಉತ್ಪನ್ನಗಳು, ವಿವಿಧ ಬಗೆಯ ಸಿಹಿ ತಿಂಡಿಗಳ ತಯಾರಿಕೆ, ಹಿಟ್ಟಿನ ತುರಿ, ಖಾದ್ಯ ತೈಲ, ಹಾಲಿನ ಉತ್ಪನ್ನಗಳು, ಬೆಲ್ಲ, ಸಕ್ಕರೆ, ಕಾಫಿ ಪುಡಿ, ಟೀ ಪುಡಿ ಇತ್ಯಾದಿಗಳನ್ನು ಕೈಗೊಂಡಿರುವ ವೈಯಕ್ತಿಕ ಮತ್ತು ಗುಂಪುಗಳ ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕೂಡಲೇ ಗ್ರಾಪಂ ಅಥವಾ ಸಂಜೀವಿನಿ ಗ್ರಾಪಂ ಮಟ್ಟದ ಒಕ್ಕೂಟಗಳನ್ನು ಸಂಪರ್ಕಿಸುವಂತೆ ಜಿಪಂ ಮುಖ್ಯ ಕಾರ್ಯನಿರ್ವ ಹಣಾಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.







