ಸಂಘ ಪರಿವಾರದಿಂದ 'ಶ್ರೀರಂಗಪಟ್ಟಣ ಚಲೋ' ಕರೆ: ಜಾಮಿಯ ಮಸೀದಿಯ ಸುತ್ತ ಬಿಗಿ ಬಂದೋಬಸ್ತ್

ಶ್ರೀರಂಗಪಟ್ಟಣ, ಜೂ.4: ಜಾಮಿಯ ಮಸೀದಿಯ ವಿಚಾರ ಮುಂದಿಟ್ಟು ಸಂಘ ಪರಿವಾರದ ಕಾರ್ಯಕರ್ತರು ಶನಿವಾರ(ಜೂ.4) ‘ಶ್ರೀರಂಗಪಟ್ಟಣ ಚಲೋ’ ಕರೆ ನೀಡಿರುವ ಹಿನ್ನೆಲೆಯಲ್ಲಿ ಪಟ್ಟಣದಾದ್ಯಂತ 144 ಸೆಕ್ಷನ್ ಜಾರಿ ಮಾಡಲಾಗಿದ್ದು, ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ಮಸೀದಿಯತ್ತ ಯಾರೂ ಸುಳಿಯದಂತೆ ಮಸೀದಿಯ ಸುತ್ತ 600 ಮೀಟರ್ ಕಬ್ಬಿಣದ ತಾತ್ಕಾಲಿಕ ಬೇಲಿ ನಿರ್ಮಿಸಲಾಗಿದೆ, ಡ್ರೋನ್ ಕ್ಯಾಮೆರಾ ಕಣ್ಗಾವಲು ಇರಿಸಲಾಗಿದೆ. ಪೂರ್ವ ಕೋಟೆ ದ್ವಾರದಿಂದ ಮಸೀದಿಯತ್ತ ಬಂದು ಹೋಗುವವರ ಮೇಲೆ ನಿಗಾ ಇಡಲು ಪೊಲೀಸ್ ಇಲಾಖೆ ಡ್ರೋನ್ ಕ್ಯಾಮೆರಾದ ಕಣ್ಗಾವಲು ವ್ಯವಸ್ಥೆ ಮಾಡಿಕೊಂಡಿದೆ. ಮಸೀದಿಯ ಭದ್ರತೆಗೆ ಡಿಎಆರ್ ಮತ್ತು ಕೆಎಸ್ಆರ್ಪಿ ತುಕಡಿಗಳ ಕೂಡ ನಿಯೋಜಿಸಲಾಗಿದೆ.
ಟಿಪ್ಪು ಮಸೀದಿ (ಜಾಮಿಯಾ ಮಸೀದಿ)ಯು ಮೂಡಲಬಾಗಿಲು ಆಂಜನೇಯಸ್ವಾಮಿ ದೇವಾಲಯದ ಮೂಲ ಸ್ಥಾನ ಎಂಬ ವಾದ ಮುಂದಿಟ್ಟು ಈ ಜಾಥಾ ಹಮ್ಮಿಕೊಂಡಿರುವ ವಿಎಚ್ಪಿ, ಬಜರಂಗದಳ, ಮಸೀದಿಯಲ್ಲಿ ನಡೆಯುತ್ತಿರುವ ಮದ್ರಸವನ್ನು ತೆರವುಗೊಳಿಸಬೇಕು ಮತ್ತು ಹಿಂದೂ ದೇವರ ಮೂರ್ತಿಗಳಿಗೆ ಪೂಜೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸುತ್ತಿವೆ.





