ಭಟ್ಕಳ: ರೋಹಿತ್ ಚಕ್ರತೀರ್ಥ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಮನವಿ

ಭಟ್ಕಳ: ರೋಹಿತ್ ಚಕ್ರತೀರ್ಥ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಶುಕ್ರವಾರದಂದು ವೆಲ್ಪೇರ್ ಪಾರ್ಟಿ ಆಪ್ ಇಂಡಿಯಾ ಜಿಲ್ಲಾ ಘಟಕದ ವತಿಯಿಂದ ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ವಿಸರ್ಜಿಸಬೇಕು ಹಾಗೂ ನಾಡಗೀತೆಗೆ ಅವಮಾನಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಉತ್ತರ ಕನ್ನಡ ಜಿಲ್ಲಾ ಶಾಖೆಯ ವತಿಯಿಂದ ಆಗ್ರಹಿಸಿದರು.
ರಾಷ್ಟ್ರಕವಿ ಕುವೆಂಪು ರಚನೆಯ ನಾಡಗೀತೆ ಇತರ ಕವನಗಳಂತೆ ಒಂದು ಪದ್ಯವಲ್ಲ. ಅದು ಈ ರಾಜ್ಯದ ಅಧಿಕೃತವಾದ ನಾಡಗೀತೆ ಎನ್ನುವುದನ್ನು ತಿಳಿಯದೇ ವಿಕೃತ ಮತ್ತು ಅವಹೇಳನಕಾರಿ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿರುವ ಆಪಾದನೆಗೆ ಒಳಗಾಗುವಂತಹ ವ್ಯಕ್ತಿಗೆ ಪಠ್ಯಪುಸ್ತಕ ಪರಿಷ್ಕರಣೆ ಜವಾಬ್ದಾರಿ ನೀಡಿರುವುದು ತಪ್ಪು.
ಚಕ್ರತೀರ್ಥ ಅವರ ನಾಡದ್ರೋಹ ಕೆಲಸಕ್ಕೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಸಂಸದ ಪ್ರತಾಪ ಸಿಂಹ ಸಮರ್ಥನೆ ನೀಡಿ ತಪ್ಪು ಮಾಡಿದ್ದಾರೆ. ಕಣ್ಣಿಗೆ ಕಾಣುವ ಮತ್ತು ಕಾಣದ ಮತೀಯ ಪರ ಶಕ್ತಿಗಳು ಹಾಗೂ ಸಂವಿಧಾನ ವಿರೋಧಿಗಳು ಮಕ್ಕಳ ಮನಸ್ಸು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ. ಶಾಲಾ ಮಕ್ಕಳಿಗೆ ಬೋಧಿಸಲಾಗುವ ಪಠ್ಯ ಧರ್ಮ, ಜಾತಿ ಅಸಮಾನತೆಗಳನ್ನು ಮೀರಿದ ಸನ್ಮಾರ್ಗ ತೋರುವ ದಿಕ್ಸೂಚಿಯಾಗಬೇಕು.
ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಹಾಲಿ ಪಠ್ಯಪುಸ್ತಕ ಮರುಪರಿಷ್ಕರಣೆಯ ಸಮಿತಿಯನ್ನು ವಿಸರ್ಜಿಸಿ ಅರ್ಹ ಮತ್ತು ಜವಾಬ್ದಾರಿಯುತ ತಜ್ಞರನ್ನು ಒಳಗೊಂಡ ಸಮಿತಿಯನ್ನು ರಚಿಸಬೇಕು. ಅಲ್ಲಿಯವರೆಗೂ ಮಕ್ಕಳ ದೈನಿಕ ಬೋಧನೆಗೆ ತೊಂದರೆಯಾಗದಂತೆ ಈಗಿರುವ ಪಠ್ಯ ವಿಷಯವನ್ನೇ ಮುಂದುವರಿಸಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ರಾಷ್ಟ್ರಕವಿ ಕುವೆಂಪು ಅವರಿಗೆ ಮತ್ತು ಇಡೀ ರಾಜ್ಯದ ಜನರಿಗೆ ಅವಮಾನವಾಗುವಂತೆ ನಡೆದುಕೊಂಡಿರುವ ರೋಹಿತ್ ಚಕ್ರತೀರ್ಥ ಅವರ ಮೇಲೆ ಸರ್ಕಾರವೇ ಮುಂದಾಗಿ ಕಾನೂನು ಕ್ರಮಕ್ಕಾಗಿ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಬೇಕು. ಈ ಪಠ್ಯ ಪುಸ್ತಕ ರಚನೆ ಮತ್ತು ಮುದ್ರಣಕ್ಕೆ ಆಗಿರಬಹುದಾದ ವೆಚ್ಚವನ್ನು ವಸೂಲಿ ಮಾಡಬೇಕು ಎಂದು ಆಗ್ರಹಿಸಿದರು.
ಸಹಾಯಕ ಆಯುಕ್ತರ ಅನುಪಸ್ಥಿತಿಯಲ್ಲಿ ತಹಸೀಲ್ದಾರ ಕಚೇರಿಯ ಶಿರಸೇದ್ದಾರ ಪ್ರವೀಣ ಕುಮಾರ ಮನವಿಯನ್ನು ಸ್ವೀಕರಿಸಿದರು. ಈ ಸಂಧರ್ಭದಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಭಟ್ಕಳ ಹಾಗೂ ಜಿಲ್ಲಾ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.







