ಪಡುಬಿದ್ರಿ; ಕಂಚಿನಡ್ಕ ಮಿಂಚಿನಬಾವಿ ತಗಡು ಚಪ್ಪರ ವಿವಾದ : ಆಕ್ಷೇಪ ಹಿಂಪಡೆದ ಕುಟುಂಬಗಳು

ಪಡುಬಿದ್ರಿ: ಇಲ್ಲಿನ ಕಂಚಿನಡ್ಕದ ಮಿಂಚಿನಬಾವಿ ಶ್ರೀ ಕೋಡ್ದಬ್ಬು ದೇವಸ್ಥಾನದ ಎದುರಲ್ಲಿ ಪಂಚಾಯತ್ ರಸ್ತೆಗೆ ತಗಡು ಚಪ್ಪರ ನಿರ್ಮಾಣಕ್ಕೆ ಸಂಬಂಧಿಸಿ ಸಮೀಪದಲ್ಲಿರುವ ಎರಡು ಮನೆಯವರು ಪಡುಬಿದ್ರಿ ಗ್ರಾಮ ಪಂಚಾಯತ್ಗೆ ಈ ಹಿಂದೆ ನೀಡಿರುವ ಆಕ್ಷೇಪಣೆಗಳನ್ನು ವಾಪಾಸು ಪಡೆದಿದ್ದಾರೆ.
ಮಿಂಚಿನಬಾವಿ ದೇವಸ್ಥಾನಕ್ಕೆ ಸಂಬಂಧಿಸಿ ತಗಡು ಚಪ್ಪರ ನಿರ್ಮಾಣಕ್ಕೆ ಸಮೀಪದಲ್ಲಿರುವ ಎರಡು ಕುಟುಂಬ ಸಾರ್ವಜನಿಕ ರಸ್ತೆಯಲ್ಲಿ ತಗಡು ಚಪ್ಪರ ನಿರ್ಮಾಣಕ್ಕೆ ಪಂಚಾಯಿತಿಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಆ ಬಳಿಕ ಕಂಚಿನಡ್ಕದಲ್ಲಿ ಉಂಟಾಗಿರುವ ಬೆಳವಣಿಗೆ ಸಂಬಂಧಿಸಿ ಶನಿವಾರ ಮಿಂಚಿನ ಬಾವಿ ಕ್ಷೇತ್ರದ ಬಳಿಯ ನಿವಾಸಿಗಳಾದ ಕಲಂದರ್ ಹಾಗೂ ರೆಹಾನಾ ಅವರು ತಗಡು ಚಪ್ಪರ ನಿರ್ಮಾಣದ ಕುರಿತಾಗಿ ನೀಡಿರುವ ಆಕ್ಷೇಪಣೆಗಳನ್ನು ವಾಪಾಸು ಪಡೆಯುವ ಮನವಿಯನ್ನು ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷ ರವಿ ಶೆಟ್ಟಿ ಅವರಿಗೆ ನೀಡಿದ್ದಾರೆ.
ಆಕ್ಷೇಪ ಹಿಂಪಡೆದ ನಂತರ ಮಾತನಾಡಿದ ರೆಹಾನಾ, ಈ ಕ್ಷೇತ್ರದ ಬಳಿಯ ನಿವಾಸಿಗಳಾದ ನಾವು 2004ರಿಂದ ಇಂದಿನವರೆಗೂ ಸೌಹರ್ದತೆಯನ್ನು ಕಾಪಾಡಿಕೊಂಡು ಬಂದಿದ್ದೇವೆ. ದೇವಸ್ಥಾನಕ್ಕೆ ಮೇಲ್ಛಾವಣಿ ಹಾಕುವುದಕ್ಕೆ ನಮ್ಮ ಆಕ್ಷೇಪ ಏನೂ ಇಲ್ಲ. ಸಾರ್ವಜನಿಕ ಹಿತಾಸಕ್ತಿ, ಮನೆ ಮಕ್ಕಳ ಸುರಕ್ಷತೆ, ವಿಶೇಷವಾಗಿ ಆ ಪ್ರದೇಶದಲ್ಲಿ ಬೀಸುವ ಬಲವಾದ ಗಾಳಿಯ ಒತ್ತಡಗಳನ್ನು ಪರಿಗಣಿಸಿ ಹಾಗೂ ಆ ರಸ್ತೆಯಲ್ಲಿ ಸಾಗುವ ಶಾಲಾ ವಾಹನ, ಘನವಾಹನಗಳನ್ನು ಗಮನದಲ್ಲಿಟ್ಟುಕೊಂಡು ಚಪ್ಪರದ ನಿರ್ಧಾರವನ್ನು ಆಕ್ಷೇಪ ವ್ಯಕ್ತಪಡಿಸಿದ್ದೇವೆ. ಇದರಲ್ಲಿ ಮುಸ್ಲಿಂ ಸಮುದಾಯವೆಲ್ಲವನ್ನೂ ಎಳೆದು ತರಬೇಡಿ. ಸಾರ್ವಜನಿಕ ರಸ್ತೆಯಾಗಿರುವುದರಿಂದ ಪಂಚಾಯತ್ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಪಂಚಾಯತ್ ಏನು ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಅದು ಅವರಿಗೆ ಬಿಟ್ಟ ವಿಚಾರ. ನಾಳೆ ಏನಾದರೂ ಅನಾಹುತ ಆದಲ್ಲಿ ಪಂಚಾಯಿತಿ ಹೊಣೆ ಎಂದು ರೆಹಾನಾ ಹೇಳಿದರು.
ಮನವಿಯನ್ನು ಸ್ವೀಕರಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿ ಶೆಟ್ಟಿ ಪಾದೆಬೆಟ್ಟು ಅವರು, ಚಪ್ಪರದ ಕುರಿತಾಗಿ ಆಕ್ಷೇಪಣೆಗಳನ್ನು ಮಿಂಚಿನಬಾವಿ ಕೋಡ್ದಬ್ಬು ದೇವಸ್ಥಾನದ ಬಳಿಯ ನಿವಾಸಿಗಳಾದ ಕಲಂದರ್ ಹಾಗೂ ರೆಹಾನಾ ವಾಪಾಸು ಪಡೆದಿರುವುದು ಸಂತಸ ತಂದಿದೆ. ಆಕ್ಷೇಪ ಮಾಡಿದರೆ ಯಾವುದೇ ಅನುಮತಿ ಕೊಡಲು ಆಗುವುದಿಲ್ಲ. ಪರಸ್ಪರ ಅನ್ಯೋನ್ಯತೆಯಿಂದ ಎಲ್ಲರೂ ತೀರ್ಮಾಣಕ್ಕೆ ಬಂದಿದ್ದು, ಗ್ರಾಮ ಪಂಚಾಯಿತಿ ಸಂತೋಷ ಪಡುತ್ತದೆ. ಪರಸ್ಪರ ಸಹಮತದಿಂದಲೇ ತಗಡು ಚಪ್ಪರದ ನಿರ್ಮಾಣವಾಗಲಿ. ಡೋರ್ ನಂಬರ್ ಇಲ್ಲವಾದ್ದರಿಂದ ಪಂಚಾಯತ್ ಮೂಲಕ ಯಾವುದೇ ಪರವಾನಿಗೆಯನ್ನು ನೀಡಲಾಗದು. ಪಡುಬಿದ್ರಿಯಲ್ಲಿ ಈ ಹಿಂದಿನಿಂದಲೂ ಮತೀಯ ಸಾಮರಸ್ಯ, ಸೌಹಾರ್ದತೆಯನ್ನು ಕಾಪಾಡಿಕೊಂಡು ಬಂದವರು ನಾವಾಗಿದ್ದೇವೆ ಎಂದು ಹೇಳಿದರು.
ಗ್ರಾಮ ಪಂಚಾಯತ್ ಕಾರ್ಯದರ್ಶಿ ರೂಪಲತಾ, ಸದಸ್ಯರಾದ ಸಂದೇಶ್ ಶೆಟ್ಟಿ ಪಾದೆಬೆಟ್ಟು, ಶೋಭಾ ಶೆಟ್ಟಿ ಪಾದೆಬೆಟ್ಟು, ಅಬ್ದುಲ್ ರಝಾಕ್, ನಝೀರ್, ಯೂಸುಫ್ ಕಂಚಿನಡ್ಕ, ಶೆಹನಾಝ್, ಆಸ್ಮಾ, ಆಶಾಬಿ ಮತ್ತಿತರರಿದ್ದರು.