ಎವರೆಸ್ಟ್ ಶಿಖರವನ್ನೇರಿದ್ದಾಗಿ ಸುಳ್ಳು ಪ್ರತಿಪಾದಿಸಿದ್ದಕ್ಕಾಗಿ ನಿಷೇಧಿಸಲ್ಪಟ್ಟ ಆರು ವರ್ಷಗಳ ಬಳಿಕ ಅದನ್ನು ಸಾಧಿಸಿದ
![ಎವರೆಸ್ಟ್ ಶಿಖರವನ್ನೇರಿದ್ದಾಗಿ ಸುಳ್ಳು ಪ್ರತಿಪಾದಿಸಿದ್ದಕ್ಕಾಗಿ ನಿಷೇಧಿಸಲ್ಪಟ್ಟ ಆರು ವರ್ಷಗಳ ಬಳಿಕ ಅದನ್ನು ಸಾಧಿಸಿದ ಎವರೆಸ್ಟ್ ಶಿಖರವನ್ನೇರಿದ್ದಾಗಿ ಸುಳ್ಳು ಪ್ರತಿಪಾದಿಸಿದ್ದಕ್ಕಾಗಿ ನಿಷೇಧಿಸಲ್ಪಟ್ಟ ಆರು ವರ್ಷಗಳ ಬಳಿಕ ಅದನ್ನು ಸಾಧಿಸಿದ](https://www.varthabharati.in/sites/default/files/images/articles/2022/06/4/337669-1654364358.jpeg)
ಕಠ್ಮಂಡು,ಜೂ.4: ಈ ಹಿಂದೆ ವಿಶ್ವದ ಅತ್ಯಂತ ಎತ್ತರದ ಪರ್ವತ ಶಿಖರ ಎವರೆಸ್ಟ್ನ್ನು ಹತ್ತಿದ್ದಾಗಿ ಸುಳ್ಳು ಪ್ರತಿಪಾದಿಸಿದ್ದ ಆರೋಪದಲ್ಲಿ ಪರ್ವತಾರೋಹಣದಿಂದ ನಿಷೇಧಿಸಲ್ಪಟ್ಟಿದ್ದ ಭಾರತೀಯ ಪರ್ವತಾರೋಹಿ ನರೇಂದರ್ ಸಿಂಗ್ ಯಾದವ ಆರು ವರ್ಷಗಳ ಬಳಿಕ ಶಿಖರವನ್ನು ಯಶಸ್ವಿಯಾಗಿ ಏರಿದ್ದಾರೆ.
ಮೇ 2016ರಲ್ಲಿ 29,032 (8,849 ಮೀ.) ಅಡಿ ಎತ್ತರದ ಎವರೆಸ್ಟ್ ಶಿಖರವನ್ನು ತಾನು ತಲುಪಿದ್ದಾಗಿ 26ರ ಹರೆಯದ ಯಾದವ ಹೇಳಿಕೊಂಡಿದ್ದರು. ಆದರೆ ಅವರು ಶಿಖರದಲ್ಲಿದ್ದ ಚಿತ್ರಗಳನ್ನು ಡಿಜಿಟಲ್ ವಿಧಾನದಲ್ಲಿ ಮಾರ್ಪಡಿಸಲಾಗಿತ್ತು ಎನ್ನುವುದು ನಂತರ ಬೆಳಕಿಗೆ ಬಂದಿತ್ತು ಮತ್ತು ನೇಪಾಳ ಸರಕಾರವು ಅವರ ಸಾಧನೆಗೆ ಮಾನ್ಯತೆಯನ್ನು ಹಿಂದೆಗೆದುಕೊಂಡಿತ್ತು.
ಯಾದವ ಮತ್ತು ಇತರ ಇಬ್ಬರು ಪರ್ವತಾರೋಹಿಗಳಿಗೆ ಆರು ವರ್ಷಗಳ ನಿಷೇಧವನ್ನು ವಿಧಿಸಲಾಗಿತ್ತು. ನಿಷೇಧ ಅಂತ್ಯಗೊಂಡ ಬೆನ್ನಲ್ಲೇ ಯಾದವ ಎವರೆಸ್ಟ್ ಶಿಖರವನ್ನು ಹತ್ತಿದ ಸಾಧನೆಯನ್ನು ಮಾಡಿದ್ದಾರೆ. 'ಎವರೆಸ್ಟ್ ನಮ್ಮೆಲ್ಲರ ಕನಸಾಗಿದೆ,ಆದರೆ ನನ್ನ ಪಾಲಿಗೆ ಎವರೆಸ್ಟ್ ಜೀವನವಾಗಿದೆ 'ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಯಾದವ ತಿಳಿಸಿದರು.
'ನನ್ನ ವಿರುದ್ಧ ಬಹಳಷ್ಟು ಆರೋಪಗಳಿದ್ದವು,ಹೀಗಾಗಿ ನಾನು ನನ್ನನ್ನು ಸಾಬೀತುಗೊಳಿಸಬೇಕಿತ್ತು ಮತ್ತು ಎವರೆಸ್ಟ್ನ್ನು ಹತ್ತಬೇಕಿತ್ತು 'ಎಂದರು.
ತಾನು ಶಿಖರವನ್ನು ಹತ್ತಿದ್ದೆ,ಆದರೆ 2020ರಲ್ಲಿ ಭಾರತದ ಪ್ರತಿಷ್ಠಿತ ತೆನ್ಜಿಂಗ್ ನೋರ್ಗೆ ಪ್ರಶಸ್ತಿಗೆ ತನ್ನನ್ನು ನಾಮಕರಣ ಮಾಡಿದ ಬಳಿಕ ತಂಡದ ನಾಯಕ ಚಿತ್ರಗಳನ್ನು ತಿರುಚಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದ ಎಂದರು.
ಬಳಿಕ ಪ್ರಶಸ್ತಿಯನ್ನು ತಡೆಹಿಡಿಯಲಾಗಿತ್ತು. ಇದು ತನಗೆ ಮತ್ತು ತನ್ನ ಕುಟುಂಬಕ್ಕೆ ತೀವ್ರ ನೋವನ್ನುಂಟು ಮಾಡಿತ್ತು ಎಂದು ಯಾದವ ಹೇಳಿದರು.
ಮೇ 20ರಂದು ಯಾದವ ಮೇಲಿನ ನಿಷೇಧ ಅಂತ್ಯಗೊಂಡಿತ್ತು ಮತ್ತು ಏಳು ದಿನಗಳ ಬಳಿಕ ಅವರು ಎವರೆಸ್ಟ್ ಶಿಖರದ ತುದಿಯಲ್ಲಿದ್ದರು. ಈ ಸಲ ತನ್ನ ಸಾಧನೆಗೆ ಪುರಾವೆಯಾಗಿ ಬಹಳಷ್ಟು ಫೋಟೊಗಳು ಮತ್ತು ವೀಡಿಯೊಗಳೊಂದಿಗೆ ಅವರು ಸಜ್ಜಾಗಿದ್ದರು.
ನೇಪಾಳ ಪ್ರವಾಸೋದ್ಯಮ ಇಲಾಖೆಯು ಬುಧವಾರ ಯಾದವಗೆ ಪ್ರಮಾಣಪತ್ರವನ್ನು ಪ್ರದಾನಿಸಿದೆ.
ಯಾವುದೇ ವಿವಾದಕ್ಕೆಡೆಯಾಗದಂತೆ ಮಾಮೂಲಾಗಿ ಓರ್ವ ಮಾರ್ಗದರ್ಶಿಯ ಬದಲು ಇಬ್ಬರು ಮಾರ್ಗದರ್ಶಿಗಳನ್ನು ಯಾದವ ಜೊತೆಯಲ್ಲಿ ಕಳುಹಿಸಲಾಗಿತ್ತು ಎಂದು ಪರ್ವತಾರೋಹಣ ಸಂಘಟಕ ಸಂಸ್ಥೆ ಪಯನಿಯರ್ ಅಡ್ವೆಂಚರ್ನ ಮಾರ್ಗದರ್ಶಿ ಪೆಂಬಾ ರೀಟಾ ಶೆರ್ಪಾ ಹೇಳಿದರು.