ವರ್ತೂರು ಮೇಲ್ಸೇತುವೆ ಕೈಬಿಡಲು ಅಭಿಯಾನ
ಬೆಂಗಳೂರು, ಜೂ.4: ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಅನಾನುಕೂಲವಾಗುತ್ತಿರುವ ವರ್ತೂರು ಮೇಲ್ಸೇತುವೆ ಯೋಜನೆಯನ್ನು ಕೈಬಿಡಬೇಕು. ಆದ್ದರಿಂದ `ನಮ್ಮ ಊರು ನಮ್ಮ ಹಕ್ಕು' ಎಂಬ ಅಭಿಯಾನವನ್ನು ಆರಂಭಿಸಲಾಗಿದೆ ಎಂದು ವರ್ತೂರು ನಾಗರಿಕ ಹಿತರಕ್ಷಣಾ ವೇದಿಕೆ ಒತ್ತಾಯಿಸಿತು.
ಶನಿವಾರ ಪ್ರೆಸ್ಕ್ಲಬ್ನಲ್ಲಿ ಮಾತನಾಡಿದ ವೇದಿಕೆ ಅಧ್ಯಕ್ಷ ಜಗದೀಶ್ ರೆಡ್ಡಿ ಅವರು, ಮಹದೇವಪುರ ವಿಧಾನಸಭಾ ಕ್ಷೇತ್ರದ ವರ್ತೂರಿನ ಕೆರೆ ಕೋಡಿ ಭಾಗದಿಂದ ವರ್ತೂರಿನ ವಿಶಾಲ್ ಮಾರ್ಟ್ವರೆಗೆ ನಿರ್ಮಿಸುವ ಉದ್ದೇಶಿಸಿರುವ 482 ಕೋಟಿ ರೂಪಾಯಿ ಮೊತ್ತದ ಎಲಿವೇಟೆಡ್ ಕಾರಿಡಾರ್ ಯೋಜನೆಯಿಂದ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗುತ್ತಿದೆ ಎಂದು ಹೇಳಿದರು.
ವೇದಿಕೆಯ ಮುಖಂಡ ಮಧುಸೂದನ್ ವರ್ತೂರು ಅವರು ಮಾತನಾಡಿ, ಈ ಮೇಲ್ಸೇತುವೆಯಿಂದ ವರ್ತೂರಿನ ಜನರ ವ್ಯಾಪಾರ, ವಹಿವಾಟು, ದೈನಂದಿನ ಬದುಕಿಗೆ ತೀವ್ರ ತೊಂದರೆಯಾಗಲಿದೆ. ತಲತಲಾಂತರದಿಂದ ನಡೆಸಿಕೊಂಡು ಬರುತ್ತಿರುವ ರಥೋತ್ಸವ, ಕರಗ ಮತ್ತಿತರ ಧಾರ್ಮಿಕ ಭಾವನೆಗಳ ಮೇಲೆ ಪ್ರಹಾರ ಮಾಡಿದಂತಾಗುತ್ತದೆ. ಆದ್ದರಿಂದ ಜನವಿರೋಧಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಕೈಬಿಟ್ಟು ಆದಷ್ಟು ಮಟ್ಟಿಗೆ ರಸ್ತೆ ಅಗಲೀಕರಣದಂತಹ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಮೇಲ್ಸೇತುವೆ ನಿರ್ಮಾಣದಿಂದ ಅಲ್ಲಿನ ಜಂಕ್ಷನ್ಗಳಲ್ಲಿ ಉಸಿರುಗಟ್ಟಿದ ವಾತಾವರಣ ನಿರ್ಮಾಣವಾಗಲಿದ್ದು, ವರ್ತೂರು, ಸೊರಹುಣಸೆ, ಬಳಗೆರೆ, ವಾಲೇಪುರ, ಮಧುರಾನಗರ, ಹಲಸಹಳ್ಳಿ, ಕತ್ರಿಗುಪ್ಪೆ ಗ್ರಾಮಗಳು ಆರ್ಥಿಕವಾಗಿ ಶಾಶ್ವತವಾಗಿ ತೊಂದರೆಗೆ ಒಳಗಾಗಲಿವೆ. ಮೆಟ್ರೋದಂತಹ ಪರಿಸರ ಸ್ನೇಹಿ ಸಮೂಹ ಸಾರಿಗೆ ವ್ಯವಸ್ಥೆಯಿಂದ ವಂಚಿತರಾಗುತ್ತೇವೆ. ಹೀಗಾಗಿ ಸರಕಾರವು ಗ್ರಾಮಸ್ಥರ ಮನವಿಗೆ ಮನ್ನಣೆ ನೀಡಿ ಜನಪರವಾದ ನಿರ್ಧಾರಗಳನ್ನು ಕೈಗೊಳ್ಳಬೇಕು.
-ಮಧುಸೂದನ್, ವರ್ತೂರು ನಾಗರಿಕ ಹಿತರಕ್ಷಣಾ ವೇದಿಕೆಯ ಮುಖಂಡ







