ಒಂದು ಮರ ಕಡಿದರೆ 5 ಗಿಡ ನೆಡುವ ಶಪಥ: ನ್ಯಾ.ದಿನೇಶ್ ಹೆಗ್ಡೆ
ಉಡುಪಿ ಜಿಲ್ಲೆಯ ವಿವಿಧೆಡೆ ವಿಶ್ವ ಪರಿಸರ ದಿನಾಚರಣೆ

ಉಡುಪಿ : ಹಸಿರು ಇಲ್ಲದಿದ್ದರೆ ಬದುಕೇ ಇಲ್ಲ. ಒಳ್ಳೆಯ ಮಳೆ ಬೆಳೆಯಾಗಲು ಗಿಡ ನೆಡಬೇಕು. ಮರ ಕಡಿಯುವು ದನ್ನು ನಾವು ನೋಡುತ್ತೇವೆ. ಆದರೆ ಗಿಡವನ್ನು ಯಾಕೆ ನೆಡಬೇಕು ಎಂಬ ಭಾವನೆ ನಮ್ಮದು. ಒಂದು ಮರ ಕಡಿದರೆ ಐದು ಗಿಡ ನೆಡುವ ಶಪಥ ಮಾಡಬೇಕು ಎಂದು ಉಡುಪಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ದಿನೇಶ್ ಹೆಗ್ಡೆ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಉಡುಪಿ ಮತ್ತು ಅರಣ್ಯ ಇಲಾಖೆ ಉಡುಪಿ ವಲಯಗಳ ಸಂಯುಕ್ತ ಆಶ್ರಯದಲ್ಲಿ ಉಡುಪಿ ನ್ಯಾಯಾಲಯದ ಆವರಣದಲ್ಲಿ ರವಿವಾರ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಗಿಡ ನೆಟ್ಟು ಅವರು ಮಾತನಾಡುತಿದ್ದರು.
ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಶಕುಂತಲ ಎಸ್., ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್., ೨ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಸೋಮನಾಥ, ವಕೀಲರ ಸಂಘದ ಅಧ್ಯಕ್ಷ ನಾಗರಾಜ ಬಿ., ಪ್ರಧಾನ ಕಾರ್ಯದರ್ಶಿ ರೊನಾಲ್ಡ್ ಪ್ರವೀಣ್ ಕುಮಾರ್, ನ್ಯಾಯಾಧೀಶರಾದ ದೀಪ, ಶ್ಯಾಮ್ ಪ್ರಕಾಶ್, ನಿರ್ಮಲಾ ಎಸ್., ವಿನಾಯಕ ವಾನಖಂಡೆ, ಜೀತು ಆರ್.ಎಸ್., ಉಡುಪಿ ವಲಯ ಅರಣ್ಯ ಅಧಿಕಾರಿ ಸುಬ್ರಹ್ಮಣ್ಯ ಆಚಾರ್ಯ, ಉಪ ವಲಯ ಅರಣ್ಯ ಅಧಿಕಾರಿಗಳಾದ ಗುರುರಾಜ್ ಕಾವ್ರಾಡಿ, ನವೀನ್, ರಶ್ಮಿ, ಕೇಶವ ಪೂಜಾರಿ, ವಿತೇಶ್, ಮನೀಶ್, ಅಶ್ವಿನ್ ಮೊದಲಾದವರು ಉಪಸ್ಥಿತರಿದ್ದರು.
ಉಡುಪಿ ನಗರಸಭೆ: ಉಡುಪಿ ನಗರಸಭೆ ಹಾಗೂ ಸಿತರಾ ಸಂಸ್ಥೆಯ ಸಹ ಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸ್ವಚ್ಛ ಸರ್ವೇಷಣ್ ಅಡಿಯಲ್ಲಿ ಸ್ವಚ್ಛತಾ ಜಾಥವನ್ನು ರವಿವಾರ ಉಡುಪಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಜಾಥಕ್ಕೆ ನಗರಸಭೆ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಹಾಗೂ ಪೌರಾಯುಕ್ತ ಡಾ.ಉದಯ ಶೆಟ್ಟಿ ನಗರಸಭೆ ಕಚೇರಿ ಎದುರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಜಾಥವು ಸರ್ವಿಸ್ ಬಸ್ ನಿಲ್ದಾಣದ ಕ್ಲಾಕ್ಟವರ್ ವೃತ್ತದಿಂದ ಅಜ್ಜರಕಾಡು ಭುಜಂಗ ಪಾರ್ಕ್ವರೆಗೆ ಸಾಗಿತು. ಅಲ್ಲಿ ಗಿಡ ನೆಡುವ ಮೂಲಕ ಸಮಾಪ್ತಿಗೊಂಡಿತು.
ಸಂಪನ್ಮೂಲ ವ್ಯಕ್ತಿ ಜೋಸೆಫ್ ಜಿ.ಎಂ. ರೆಬೆಲ್ಲೊ ಪರಿಸರ ಹಾಗೂ ಸ್ವಚ್ಛತೆ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ನಗರಸಭೆ ಸದಸ್ಯರು, ಪರಿಸರ ಅಭಿಯಂತರೆ ಸ್ನೇಹಾ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ, ಸಿತರಾ ಸಂಸ್ಥೆಯ ರವಿ ಕುಮಾರ್ ಪ್ರಭು ಮೊದಲಾದವರು ಉಪಸ್ಥಿತರಿದ್ದರು.
ಉಡುಪಿ ಮಲಬಾರ್ ಗೋಲ್ಡ್: ಉಡುಪಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ಮಳಿಗೆಯಲ್ಲಿ ಅರಣ್ಯ ಅಧಿಕಾರಿ ಅಕ್ಷಿತಾ ಕೆ.ಶೆಟ್ಟಿ ಗ್ರಾಹಕರಾದ ಅಕ್ಷಿತಾ ಪೂಜಾರಿಗೆ ಗಿಡ ನೀಡುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಶಾಖಾ ಮುಖ್ಯಸ್ಥ ಹಫೀಝ್ ರೆಹಮಾನ್, ಪುರಂದರ ತಿಂಗಳಾಯ, ರಾಘವೇಂದ್ರ ನಾಯಕ್ ಹಾಗೂ ಸಿಬ್ಬಂದಿ ವರ್ಗದವರು, ಗ್ರಾಹಕರು ಉಪಸ್ಥಿತರಿದ್ದರು. ತಂಝೀಮ್ ಶಿರ್ವ ಸ್ವಾಗತಿಸಿ, ವಂದಿಸಿದರು.
ಕರಂಬಳ್ಳಿ ಬ್ರಹ್ಮಸ್ಥಾನ: ವಿಶ್ವ ಪರಿಸರ ದಿನದ ಅಂಗವಾಗಿ ಇಂದು ಕರಂಬಳ್ಳಿ ರಾಜಾಚಾರ್ಯ ಮಾರ್ಗದಲ್ಲಿರುವ ಬ್ರಹ್ಮಸ್ಥಾನದಲ್ಲಿ ಶಾಸಕ ಕೆ.ರಘುಪತಿ ಭಟ್ ಅಶ್ವತ್ಥ ಗಿಡವನ್ನು ನೆಟ್ಟು ನೀರೆರೆಯುವ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಿದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಗಿರಿಧರ್ ಆಚಾರ್ಯ, ಸ್ಥಳೀಯರಾದ ರಮೇಶ್ ಬಾರಿತ್ತಾಯ, ಸದಾನಂದ ನಾಯಕ್, ಹರೀಶ್ ಆಚಾರ್ಯ, ಪ್ರೇಮಾನಂದ ಆಚಾರ್ಯ, ಶ್ರೀನಿವಾಸ ಆಚಾರ್ಯ, ಲಕ್ಷ್ಮಣ ಸೇರಿಗಾರ್, ಮಂಜುಳಾ ಪ್ರಸಾದ್, ಗಿರೀಶ್ ದೇವಾಡಿಗ, ವೈಭವ್ ತೆಂಕಿಲ್ಲಾಯ, ಪ್ರಣಮ್ ಆಚಾರ್ಯ ಉಪಸ್ಥಿತರಿದ್ದರು.
ಉಡುಪಿ ನಾರ್ತ್ ಶಾಲೆ: ಉಡುಪಿಯ ನಾರ್ತ್ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಕೆ.ರಘುಪತಿ ಭಟ್ ಉದ್ಘಾಟಿಸಿ, ಮಕ್ಕಳಿಗೆ ಉಚಿತ ಪುಸ್ತಕ, ಪೆನ್ನು, ಕೋಡೆಗಳನ್ನು ವಿತರಿಸಿದರು. ಬಳಿಕ ಶಾಲಾ ಆವರಣದಲ್ಲಿ ಗಿಡ ನೆಡಲಾಯಿತು.
ಈ ಸಂದರ್ಭದಲ್ಲಿ ಮೀನು ಮಾರಾಟ ಫೇಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ದಾನಿಗಳಾದ ಡಾ.ವಾಸಪ್ಪ, ನಗರಸಭಾ ಸಸ್ಯರಾದ ಮಾನಸ ಚಿದಾನಂದ ಪೈ, ಗಿರೀಶ್ ಅಂಚನ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀನಾಥ್ ರಾವ್, ಕ್ಷೇತ್ರ ಶಿಕ್ಷಣ ಕಚೇರಿಯ ಗುರುಪ್ರಸಾದ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಸುನಿತಾ ಮೊದಲಾದವರು ಉಪಸ್ಥಿತರಿದ್ದರು.
ರೂರಲ್ ಡೆವಲಪ್ಮೆಂಟ್: ಆರ್ಗನೈಸೇಷನ್ ಫಾರ್ ರೂರಲ್ ಡೆವಲಪ್ಮೆಂಟ್ ಆಂಡ್ ರಿಸರ್ಚ್, ಚೈಲ್ಡ್ ಲೈನ್ ೧೦೯೮ ಉಡುಪಿ, ಇಂಟರಾಕ್ಟ್ ಕ್ಲಬ್ ಮತ್ತು ಶ್ರೀಕೃಷ್ಣ ಬಾಲನಿಕೇತನ ಜಂಟಿ ಆಶ್ರಯದಲ್ಲಿ ವಿಶ್ವ ಪರಿಸರ ದಿನವನ್ನು ಕುಕ್ಕಿಕಟ್ಟೆಯ ಕೃಷ್ಣ ಬಾಲನಿಕೇತನದ ವಠಾರದಲ್ಲಿ ರವಿವಾರ ಆಚರಿಸಲಾಯಿತು.
ಪರಿಸರ ತಜ್ಞ ಪ್ರೊ.ಎನ್.ಎ.ಮಧ್ಯಸ್ಥ ಸಸಿಗಳನ್ನು ನೆಡುವ ಮೂಲಕ ಅಭಿ ಯಾನಕ್ಕೆ ಚಾಲನೆ ನೀಡಿದರು. ಆರ್ಗನೈಸೇಷನ್ ಫಾರ್ ರೂರಲ್ ಡೆವಲ ಪ್ಮೆಂಟ್ ಆಂಡ್ ರಿಸರ್ಚ್ ಸದಸ್ಯ ಗಣೇಶ್ಪ್ರಸಾದ್ ನಾಯಕ್ ಪ್ರಸ್ತಾವಿಕವಾಗಿ ಮಾತನಾಡಿದರು.
ಕೃಷ್ಣ ಬಾಲನಿಕೇತನ ಕಾರ್ಯಕಾರಿ ಸಮಿತಿ ಸದಸ್ಯರಾದ ಗುರುರಾಜ ಭಟ್, ಕೆ. ಸುಬ್ರಹ್ಮಣ್ಯ ಕಾರಂತ್, ಇಂಜಿನಿಯರ್ ರಾಜೇಂದ್ರ ಮಯ್ಯ, ಚೈಲ್ಡ್ ಲೈನ್ ಸಂಯೋಜಕಿ ಜ್ಯೋತಿ ಮೊದಲಾದವರು ಉಪಸ್ಥಿತರಿದ್ದರು. ಚೈಲ್ಡ್ ಲೈನ್ ನಿರ್ದೇಶಕ ರಾಮಚಂದ್ರ ಉಪಾಧ್ಯಾಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ದರು. ಪಡಿ ಸಂಸ್ಥೆಯ ಉಡುಪಿ ಜಿಲ್ಲಾ ಸಂಯೋಜಕ ವಿವೇಕ್ ವಂದಿಸಿದರು.
ಬೈಂದೂರು ಅರಣ್ಯ ಇಲಾಖೆ: ಅರಣ್ಯ ಇಲಾಖೆ ಕುಂದಾಪುರ ವಿಭಾಗದ ಬೈಂದೂರು ವಲಯದ ವತಿಯಿಂದ ’ಹಸಿರು ಕರ್ನಾಟಕ’ ಕಾರ್ಯಕ್ರಮದ ಭಾಗವಾಗಿ ವಾರಗಳ ಕಾಲ ನಡೆಯುವ ಬೀಜ ಬಿತ್ತನೆ ಅಭಿಯಾನಕ್ಕೆ ರವಿವಾರ ಚಾಲನೆ ನೀಡಲಾಯಿತು.
ಇದೇ ವೇಳೆ ಬೈಂದೂರು ವಲಯ ಅರಣ್ಯ ಕಛೇರಿ ಆವರಣದಲ್ಲಿ ಬೈಂದೂರು ಗಿಡ ನೆಟ್ಟು ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಬೈಂದೂರು ವಲಯ ಅರಣ್ಯಧಿಕಾರಿ ಸಿದ್ದೇಶ್ವರ ಕೆ., ಉಪ ವಲಯ ಅರಣ್ಯಧಿಕಾರಿಗಳಾದ ಬಂಗಾರಪ್ಪ, ರವಿರಾಜ್, ಸಚಿನ್, ಅರಣ್ಯ ರಕ್ಷಕರು, ಸಿಬ್ಬಂದಿ ಮೊದಲಾದವರು ಇದ್ದರು.







