ದೇಶದ ಜನರ ಮುಂದೆ ಬೆತ್ತಲಾಗಲು ಹೊರಟ ಕಾಂಗ್ರೆಸ್: ಬಿಜೆಪಿ ಟೀಕೆ
‘ಚಡ್ಡಿ ಸುಡುವ ಅಭಿಯಾನ'

ಬೆಂಗಳೂರು, ಜೂ. 5: ‘ದೇಶಾದ್ಯಂತ ಸೋತು ಸುಣ್ಣವಾಗಿರುವ ವಿಪಕ್ಷ ಕಾಂಗ್ರೆಸ್ ನಾಯಕರಿಗೆ ಈಗ ಉದ್ಯೋಗವಿಲ್ಲ. ‘ಚಡ್ಡಿ ಸುಡುವ ಅಭಿಯಾನ' ನಡೆಸಿ ಮತ್ತೆ ದೇಶದ ಜನರ ಮುಂದೆ ಬೆತ್ತಲಾಗಲು ಹೊರಟಿದ್ದಾರಷ್ಟೆ!' ಎಂದು ಬಿಜೆಪಿ, ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
ರವಿವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಪಂಚೆ ಬಿದ್ದ ನಂತರ ಮಾನ ಕಾಪಾಡಿದ್ದೇ ಚಡ್ಡಿ! ಚಡ್ಡಿ ಸುಟ್ಟ ಬಳಿಕ ಪಂಚೆ ಗಟ್ಟಿಯಾಗಿರಲಿ!. ತುಂಡುಬಟ್ಟೆ ಇದ್ದರೆ ಸಾಕು ಮಾನ ಮುಚ್ಚೋಕೆ...! ಅದನ್ನೇ ಸುಟ್ಟು ಏನು ಸಾಧಿಸಲು ಹೊರಟಿದ್ದೀರಿ ಸಿದ್ದರಾಮಯ್ಯನವರೇ?' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕಿಡಿಕಾರಿದೆ.
‘ಸಿದ್ದರಾಮಯ್ಯನವರೇ, ‘ಚಡ್ಡಿ ಸುಡುವ ಅಭಿಯಾನ' ಆರಂಭಿಸುವುದಕ್ಕೆ ಮುನ್ನ ನಿಮ್ಮ ಕಾರ್ಯಕರ್ತರಿಗೆ ಒಂದು ಎಚ್ಚರಿಕೆ ನೀಡಿ. ಮೊಹಮ್ಮದ್ ನಲಪಾಡ್ ಅವನಂತಂಹ ಬೀದಿ ರೌಡಿಗಳು ಬೇರೆಯವರ ‘ಚಡ್ಡಿ' ಕದ್ದು ಸುಡುವ ಅಪಾಯವಿದೆ' ಎಂದು ಬಿಜೆಪಿ ಎಚ್ಚರಿಕೆ ನೀಡಿದೆ.
‘ಚಡ್ಡಿ ಸುಡುವುದು ಸಾಂಕೇತಿಕ ಪ್ರತಿಭಟನೆ ಎಂದು ವ್ಯಾಖ್ಯಾನಿಸುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೇ, ಜವಾಹರ್ ಲಾಲ್ ನೆಹರೂ ಅವರೂ ಚಡ್ಡಿ ತೊಟ್ಟಿದ್ದು ಗೊತ್ತೇ? ಹಾಗಾದರೆ ನಿಮ್ಮ ಪ್ರತಿಭಟನೆ ವ್ಯಾಪ್ತಿಯಲ್ಲಿ ನೆಹರೂ ಅವರೂ ಇದ್ದಾರಾ? ಸಿದ್ದರಾಮಯ್ಯನವರೇ, ಚಡ್ಡಿ ಮಾನದ ಸಂಕೇತ. ಶ್ರಮಿಕ ವರ್ಗದ ಸಂಕೇತ. ನೀವು ‘ಚಡ್ಡಿ ಸುಡುವ ಅಭಿಯಾನ' ನಡೆಸಿ ನಿಮ್ಮ ಮಾನವನ್ನು ನೀವೇ ಸುಟ್ಟುಕೊಳ್ಳಲು ಹೊರಟಿದ್ದೀರಿ' ಎಂದು ಬಿಜೆಪಿ ಲೇವಡಿ ಮಾಡಿದೆ.







