ಆರೆಸ್ಸೆಸ್ ಚಡ್ಡಿ ವಿಚಾರಕ್ಕೆ ಬಂದರೆ ಕಾಂಗ್ರೆಸ್ಸಿನವರು ಸರ್ವನಾಶ: ಸಚಿವ ಭೈರತಿ ಬಸವರಾಜ್
ಸಚಿವ ಭೈರತಿ ಬಸವರಾಜ್
ದಾವಣಗೆರೆ: ಆರೆಸ್ಸೆಸ್ ಚಡ್ಡಿ ವಿಚಾರಕ್ಕೆ ಬಂದರೆ ಕಾಂಗ್ರೆಸ್ಸಿನವರು ಸರ್ವನಾಶವಾಗ್ತಾರಷ್ಟೇ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಎಚ್ಚರಿಕೆ ನೀಡಿದರು.
ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಈಗಾಗಲೇ ಕಾಂಗ್ರೆಸ್ ಪಕ್ಷ ಹೇಗೆ ಹೇಳುವುದಕ್ಕೆ ಹೆಸರಿಲ್ಲದಂತೆ ಸರ್ವನಾಶ ಆಗಿದೆಯೋ ಅದೇ ಪರಿಸ್ಥಿತಿಯೇ ಕಾಂಗ್ರೆಸ್ಸಿಗೆ ರಾಜ್ಯದಲ್ಲೂ ಬರಲಿದೆ ಎಂದರು.
ನೀವು ಚಡ್ಡಿ ಸುಟ್ಟರೆ ನಾವೇನು ಸುಮ್ಮನೇ ಕೂಡುತ್ತೇವೆಂದುಕೊಂಡಿದ್ದೀರಾ? ಚಡ್ಡಿ ಅಭಿಯಾನದ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಅವರಿಗೆ ತಲೆಯಲ್ಲಿ ಬುದ್ಧಿ ಇಲ್ಲ. ಆರೆಸ್ಸೆಸ್ ದೇಶ ಸೇವೆಗೆ, ಸಮಾಜಮುಖಿ ಕಾರ್ಯಕ್ಕೆ ಹೆಸರಾದ ಸಂಸ್ಥೆ ಎಂದರು.
ದೇಶಭಕ್ತ ಸಂಘಟನೆಯಾದ ಆರೆಸ್ಸೆಸ್ ಬಗ್ಗೆ ಮಾತನಾಡುವುದನ್ನು ನೋಡಿದರೆ ಕಾಂಗ್ರೆಸ್ಸಿನವರಿಗೆ ಬುದ್ಧಿಭ್ರಮಣೆಯಾಗಿದೆ. ಚಡ್ಡಿ ಅಂತೆಲ್ಲಾ ಮಾತನಾಡುವುದು ಮುಖ್ಯಮಂತ್ರಿ ಆಗಿದ್ದಂತಹ ಸಿದ್ದರಾಮಯ್ಯ ವ್ಯಕ್ತಿತ್ವಕ್ಕೂ ಸರಿಯಲ್ಲ. ಇಂತಹ ಮಾತುಗಳು ಸಿದ್ದರಾಮಯ್ಯ ಅವರಿಗೆ ಶೋಭೆ ತರುವುದಿಲ್ಲ ಎಂದು ಹೇಳೀದರು.
ಶಾಲಾ ಪಠ್ಯ ಪರಿಷ್ಕರಣಾ ಸಮಿತಿ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಪಷ್ಟಪಡಿಸಿದ್ದಾರೆ. ಕೆಲವು ತಿದ್ದುಪಡಿ ಮಾಡಿಕೊಂಡು, ಮಕ್ಕಳಿಗೆ ಪಠ್ಯಪುಸ್ತಕ ನೀಡಲಾಗುವುದು. ರೋಹಿತ್ ಚಕ್ರತೀರ್ಥ ಅವರಿಗೆ ಪಿಯುಸಿ ಪಠ್ಯ ಪರಿಷ್ಕರಣೆ ಜವಾಬ್ಧಾರಿ ನೀಡಿದ್ದು ನನ್ನ ಗಮನಕ್ಕೆ ಬಂದಿಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.