ಜೂ.6ರವರೆಗೆ ದೇಶಾದ್ಯಂತ ಶೇ.31ರಷ್ಟು ಮಳೆ ಕೊರತೆ:ಹವಾಮಾನ ಇಲಾಖೆ
![ಜೂ.6ರವರೆಗೆ ದೇಶಾದ್ಯಂತ ಶೇ.31ರಷ್ಟು ಮಳೆ ಕೊರತೆ:ಹವಾಮಾನ ಇಲಾಖೆ ಜೂ.6ರವರೆಗೆ ದೇಶಾದ್ಯಂತ ಶೇ.31ರಷ್ಟು ಮಳೆ ಕೊರತೆ:ಹವಾಮಾನ ಇಲಾಖೆ](https://www.varthabharati.in/sites/default/files/images/articles/2022/06/7/338001-1654616847.jpeg)
ಹೊಸದಿಲ್ಲಿ,ಜೂ.7: ಅರಬಿ ಸಮುದ್ರದಲ್ಲಿ ನೈರುತ್ಯ ಮುಂಗಾರು ದುರ್ಬಲಗೊಂಡಿದ್ದು,ಜೂ.6ರವರೆಗೆ ದೇಶಾದ್ಯಂತ ಮಳೆ ಕೊರತೆಯ ಪ್ರಮಾಣವು ಕನಿಷ್ಠ ಶೇ.31ರಷ್ಟಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯು ಮಂಗಳವಾರ ತಿಳಿಸಿದೆ.
ಮುಂಗಾರು ಮಳೆಯು ಇನ್ನೂ ನೈರುತ್ಯ ಕರ್ನಾಟಕ ಮತ್ತು ಉತ್ತರ ಪ.ಬಂಗಾಳದಾಚೆಗೆ ಚಲಿಸಿಲ್ಲ ಎಂದು ತಿಳಿಸಿರುವ ಐಎಂಡಿ,ತಮಿಳುನಾಡು,ಪುದುಚೇರಿ ಮತ್ತು ಕಾರೈಕಲ್ನ ಕೆಲವು ಭಾಗಗಳಲ್ಲಿ ಮಳೆಯಲ್ಲಿ ಇನ್ನಷ್ಟು ಪ್ರಗತಿಯಾಗಿದೆ ಎಂದಿದೆ.
ಮುಂದಿನ ಐದು ದಿನಗಳಲ್ಲಿ ಈಶಾನ್ಯ ಭಾರತ,ಉಪ ಹಿಮಾಲಯನ್ ಪ.ಬಂಗಾಳ ಮತ್ತು ಸಿಕ್ಕಿಮ್ಗಳಲ್ಲಿ ತೀವ್ರ ಮಳೆಯು ಮುಂದುವರಿಯಲಿದೆ. ಆದಾಗ್ಯೂ ಮುಂದಿನ ಮೂರು ದಿನಗಳ ಕಾಲ ವಾಯುವ್ಯ,ಮಧ್ಯ ಮತ್ತು ಪೂರ್ವ ಭಾರತದ ಅಲ್ಲಲ್ಲಿ ಉಷ್ಣ ಮಾರುತದ ಪ್ರಭಾವವಿರಲಿದೆ ಎಂದು ಅದು ತಿಳಿಸಿದೆ.
ಸೋಮವಾರ ದಿಲ್ಲಿಯ ಹಲವಾರು ಕಡೆಗಳಲ್ಲಿ ಗರಿಷ್ಠ ತಾಪಮಾನವು 45 ಡಿ.ಸೆ.ಗಿಂತ ಮೇಲೆಯೇ ಇತ್ತು. ರಾಷ್ಟ್ರ ರಾಜಧಾನಿಯ ನಜಫ್ಗಡದಲ್ಲಿ ತಾಪಮಾನ 46.4 ಡಿ.ಸೆ.ನಷ್ಟು ಗರಿಷ್ಠ ಮಟ್ಟದಲ್ಲಿದ್ದು,ಇದು ಸಾಮಾನ್ಯಕ್ಕಿಂತ ಐದು ಡಿ.ಸೆ.ಹೆಚ್ಚಿತ್ತು.
ಸೋಮವಾರ ಆರೆಂಜ್ ಅಲರ್ಟ್ ಹೊರಡಿಸಿದ್ದ ಐಎಂಡಿ,ಮುಂದಿನ ಮೂರ್ನಾಲ್ಕು ದಿನಗಳ ಕಾಲ ದಿಲ್ಲಿ ಮತ್ತು ವಾಯುವ್ಯ ಹಾಗೂ ಮಧ್ಯಭಾರತದ ಇತರ ಭಾಗಗಳಲ್ಲಿ ತೀವ್ರ ಉಷ್ಣ ಮಾರುತವಿರಲಿದೆ ಎಂದು ಎಚ್ಚರಿಕೆ ನೀಡಿತ್ತು.