ಕೈಗಾರಿಕಾ ಪ್ರದೇಶಕ್ಕಾಗಿ ಭೂಸ್ವಾಧೀನತೆಗೆ ಸಂಬಂಧಿಸಿದಂತೆ ದ.ಕ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ

ಮಂಗಳೂರು: ಮುಲ್ಕಿ ತಾಲೂಕು ಬಳ್ಕುಂಜೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೈಗಾರಿಕಾ ಪ್ರದೇಶಕ್ಕಾಗಿ ಭೂಸ್ವಾಧೀನತೆಗೆ ಸಂಬಂಧಿಸಿದಂತೆ ನಾಗರಿಕರು ಬಳ್ಕುಂಜೆ ಚರ್ಚ್ ಸಭಾಂಗಣದಲ್ಲಿ ನಡೆಸಿದ ಪತ್ರಿಕಾಗೋಷ್ಠಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ .ವಿ. ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ವಿಶೇಷ ಭೂಸ್ವಾಧೀನಾಧಿಕಾರಿಯವರು ಬಳ್ಕುಂಜೆ ಕೈಗಾರಿಕಾ ವಲಯ ಸ್ಥಾಪನೆಯ ಸಂಬಂಧ ಸ್ಪಷ್ಟನೆ ನೀಡಿದರು.
ಬಳ್ಕುಂಜೆ, ಕೊಲ್ಲೂರು ಮತ್ತು ಉಳೆಪಾಡಿ ಗ್ರಾಮಗಳಲ್ಲಿ 1091.57 ಎಕರೆ ಜಮೀನನ್ನು ಕೈಗಾರಿಕಾ ಪ್ರದೇಶ ಕ್ಕಾಗಿ ಭೂಸ್ವಾಧೀನಪಡಿಸುವ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ 1966 ರ ಕಲಂ 28(1) ರಡಿ ಪ್ರಾಥಮಿಕ ಅಧಿಸೂಚನೆಯನ್ನಷ್ಟೇ ಹೊರಡಿಸಲಾಗಿದೆ ಎಂದು ಸ್ಪಷ್ಟನೆ ನೀಡಿದರು.
ಈ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಎಲ್ಲಾ ಭೂಮಾಲಕರಿಗೂ ಈ ಕಾಯ್ದೆಯ ಕಲಂ 28(2) ರಡಿ ವೈಯಕ್ತಿಕ ನೋಟಿಸ್ ಜಾರಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಕಲಂ 28 (2) ರ ನೋಟಿಸ್ ನಲ್ಲಿ ಪ್ರತಿಯೊಬ್ಬ ಭೂಮಾಲ ಕರಿಗೂ ಕಲಂ 28(3) ರ ವಿಚಾರಣೆಗೆ ಹಾಜರಾಗುವ ದಿನಾಂಕ ಮತ್ತು ಸಮಯವನ್ನು ತಿಳಿಸಲಾಗುತ್ತಿದೆ ಎಂದರು.
ವಿಚಾರಣೆ ದಿನಾಂಕದಂದು ಪ್ರತಿಯೊಬ್ಬ ಭೂಮಾಲಕರಿಗೂ ಅವರವರ ಅಹವಾಲನ್ನು ಮಂಡಿಸಲು ವಿಚಾರಣೆ ಸಮಯದಲ್ಲಿ ಅವಕಾಶ ಕಲ್ಪಿಸಲಾಗುವುದು, ಅಲ್ಲದೇ ಪ್ರಾಥಮಿಕ ಅಧಿಸೂಚನೆಯಲ್ಲಿ ಧಾರ್ಮಿಕ ಸಂಸ್ಥೆಗಳಿರುವ ಜಮೀನುಗಳು ಮತ್ತು ಗುಂಪು ಮನೆಗಳು ಒಳಗೊಂಡಿದ್ದಲ್ಲಿ ಕಲಂ 28(3) ರಲ್ಲಿ ವಿಚಾರಣೆ ನಡೆಸಿ ಆದೇಶ ಹೊರಡಿಸುವಾಗ ಈ ಅಧಿಸೂಚನೆಯಲ್ಲಿ ಧಾರ್ಮಿಕ ಸಂಸ್ಥೆಗಳು ಮತ್ತು ಗುಂಪು ಮನೆಗಳನ್ನು ಒಳಗೊಂಡಿರುವ ಜಮೀನುಗಳನ್ನು, ಭೂಸ್ವಾಧೀನತೆಯಿಂದ ಕೈಬಿಡುವ ಕ್ರಮ ಕೈಗೊಳ್ಳಲಾಗುವುದು.
ಈ ಭೂಸ್ವಾಧೀನತೆಗೆ ಸಂಬಂಧಿಸಿದಂತೆ ಜಿ.ಎಂ.ಸಿ ಕಾರ್ಯವನ್ನು ತೋಟಗಾರಿಕೆ, ಅರಣ್ಯ ಮತ್ತು ಇಂಜಿನಿಯ ರಿಂಗ್ ಇಲಾಖೆಗಳ ಅಧಿಕಾರಿಗಳ ಉಪಸ್ಥಿತಿಯಲ್ಲಿ ಜರಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ತದ ನಂತರ 28(4) ರಡಿ ಅಂತಿಮ ಅಧಿಸೂಚನೆ ಹೊರಡಿಸುವಾಗ ಕಲಂ 28(1) ರ ಪ್ರಾಥಮಿಕ ಅಧಿಸೂಚನೆಯಲ್ಲಿ ಒಳಗೊಂಡ ಜಮೀನುಗಳ ಪೈಕಿ ಅಂತಿಮವಾಗಿ ಭೂಸ್ವಾಧೀನವಾಗಲಿರುವ ವಿಸ್ತೀರ್ಣದ ಬಗ್ಗೆ, ಮಾತ್ರ ಅಧಿಸೂಚನೆ ಹೊರಡಿಸಲು ಕ್ರಮ ಕೈಗೊಳ್ಳಲಾಗುವುದು.
ಕಲಂ 28(4) ರಡಿ ಅಂತಿಮ ಅಧಿಸೂಚನೆಯಾದ ನಂತರ ಕಲಂ 29(2) ರಡಿ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯ ಭೂದರ ಸಲಹಾ ಸಮಿತಿಯ ಮೂಲಕ ಭೂದರವನ್ನು ನಿಗದಿಪಡಿಸಲು ಕ್ರಮ ಜರಗಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಈ ಭೂದರವು ಮಂಡಳಿಯಿಂದ ಅನುಮೋದನೆಗೊಂಡ ನಂತರ ನಿಗದಿಪಡಿಸಿದ ದರದಲ್ಲಿ ಭೂಮಾಲಕರಿಗೆ ಪರಿಹಾರ ಧನ ವಾವತಿಸಲು ಕ್ರಮ ಕೈಗೊಳ್ಳಲಾಗುವುದು. ಪರಿಹಾರ ಧನ ನಿಗದಿಪಡಿಸುವಾಗ 2013 ರ ಹೊಸ ಭೂಸ್ವಾಧೀನ ಕಾಯ್ದೆಯನ್ನಯ ಭೂ ದರ ನಿಗದಿಪಡಿಸಲಾಗುವುದು. ಅಲ್ಲದೆ ಜಮೀನಿನಲ್ಲಿರುವ ಮರ - ಮಾಲ್ಕಿಗಳಿಗೆ ಮತ್ತು ಕೃತಾವಳಿಗಳಿಗೆ ಸಂಬಂಧಪಟ್ಟ ಇಲಾಖೆಯವರು ನಿಗದಿಪಡಿಸಿದ ಪರಿಹಾರ ಮೊತ್ತವನ್ನು ಪಾವತಿಸಲಾಗುವುದು ಹಾಗೂ ತದ ನಂತರ ಜಮೀನನ್ನು ಸರಕಾರದ ಸುಪರ್ದಿಗೆ ತೆಗೆದುಕೊಳ್ಳಲಾಗುವುದು ಎಂದು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ವಿಶೇಷ ಭೂಸ್ವಾಧೀನಾಧಿಕಾರಿ ಸಭೆಯಲ್ಲಿ ಸ್ಪಷ್ಟನೆ ನೀಡಿದರು.
ಒಂದು ವರ್ಷದ ಹಿಂದೆಯೇ ಕೈಗಾರಿಕೆ ವಲಯ ಸ್ಥಾಪನೆಯ ಮಾಹಿತಿ ನೀಡಲಾಗಿದೆ
ಮುಲ್ಕಿ ತಾಲೂಕು ಬಳ್ಕುಂಜೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೈಗಾರಿಕಾ ಪ್ರದೇಶಕ್ಕಾಗಿ ಭೂಸ್ವಾಧೀನ ವಾಗಲಿದೆ ಎಂಬ ಬಗ್ಗೆ ಒಂದು ವರ್ಷದ ಹಿಂದೆ ಅಂದಿನ ಕೈಗಾರಿಕಾ ಸಚಿವರಾಗಿದ್ದ ಜಗದೀಶ್ ಶೆಟ್ಟರ್ ಅವರು ಹೇಳಿಕೆ ನೀಡಿರುವುದು ದಿನಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ನಂತರ ಇಂದಿನ ಕೈಗಾರಿಕಾ ಸಚಿವರು ಕೂಡ ಬಳ್ಕುಂಜೆ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೈಗಾರಿಕಾ ಪ್ರದೇಶಕ್ಕಾಗಿ ಜಮೀನನ್ನು ಭೂಸ್ವಾಧೀನಪಡಿಸುವ ಸಂಬಂಧ ನೀಡಿರುವ ಮಾಹಿತಿ ಕೂಡ ಪತ್ರಿಕೆಗಳಲ್ಲಿ ಪ್ರಕಟಗೊಂಡಿರುತ್ತದೆ ಎಂದು ವಿಶೇಷ ಭೂಸ್ವಾಧೀನಾಧಿಕಾರಿ ಸಭೆಗೆ ಮಾಹಿತಿ ನೀಡಿದರು.







