ಮಂಗಳೂರು | ವಿವಿ ಕಾಲೇಜಿನ ತರಗತಿಯಲ್ಲಿ ಸಾವರ್ಕರ್ ಭಾವಚಿತ್ರ ಅಳವಡಿಸಿದ ವಿದ್ಯಾರ್ಥಿಗಳು
*ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ

ಮಂಗಳೂರು, ಜೂ.8: ನಗರದ ಹಂಪನಕಟ್ಟೆಯಲ್ಲಿರುವ ಮಂಗಳೂರು ವಿವಿ ಘಟಕ ಕಾಲೇಜಿನ ತರಗತಿಯೊಂದರಲ್ಲಿ ವಿನಾಯಕ ದಾಮೋದರ ಸಾವರ್ಕರ್ ಭಾವಚಿತ್ರವನ್ನು ಮಂಗಳವಾರ ಅಳವಡಿಸಲಾಗಿದೆ. ಇದನ್ನು ಕಾಲೇಜಿನ ಇತರ ವಿದ್ಯಾರ್ಥಿಗಳು ತಕ್ಷಣ ಪ್ರಾಂಶುಪಾಲೆಯ ಗಮನಕ್ಕೆ ತಂದಿದ್ದು, ಬಳಿಕ ಅದನ್ನು ತೆರವುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ಮಂಗಳವಾರ ತರಗತಿಯಲ್ಲಿ ಸಾವರ್ಕರ್ ಭಾವಚಿತ್ರ ಅಳವಡಿಸುತ್ತಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವ್ಯಾಪಕ ಟೀಕೆ ವ್ಯಕ್ತವಾಗಿದೆ. ಈ ಕಾಲೇಜಿನಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದದ ಮಧ್ಯೆಯೇ ಇಬ್ಬರು ವಿದ್ಯಾರ್ಥಿಗಳು ತರಗತಿಯೊಳಗೆ ಸಾವರ್ಕರ್ ಫೋಟೋವನ್ನು ಅಳವಡಿಸಿದ್ದರು ಎನ್ನಲಾಗಿದೆ.
ಮೊನ್ನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೋಳ ಗ್ರಾಪಂನ ರಸ್ತೆಯೊಂದಕ್ಕೆ ನಾಥೂರಾಮ್ ಗೋಡ್ಸೆಯ ನಾಮಫಲಕವನ್ನು ಅನಧಿಕೃತವಾಗಿ ಅಳವಡಿಸಲಾಗಿತ್ತು. ಮಾಹಿತಿ ಪಡೆದ ಯುವ ಕಾಂಗ್ರೆಸ್ ಕಾರ್ಯಕರ್ತರು ಸ್ಥಳೀಯ ಗ್ರಾಪಂ ಮತ್ತು ಪೊಲೀಸರ ಸಹಕಾರದಿಂದ ಅದನ್ನು ತೆರವುಗೊಳಿಸಿದ್ದರು.
ಇದೀಗ ಕಾಲೇಜು ತರಗತಿಯೊಳಗೆ ಸಾವರ್ಕರ್ ಫೋಟೋ ಅಳವಡಿಸಿ ವಿವಾದ ಸೃಷ್ಟಿಸುವ ಪ್ರಯತ್ನ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಈ ಬಗ್ಗೆ ‘ವಾರ್ತಾಭಾರತಿ’ಗೆ ಪ್ರತಿಕ್ರಿಯೆ ನೀಡಿದ ಕಾಲೇಜಿನ ಪ್ರಾಂಶುಪಾಲೆ ಅನುಸೂಯಾ ರೈ ‘ಸೋಮವಾರ ಇಬ್ಬರು ವಿದ್ಯಾರ್ಥಿಗಳು ಸಾವರ್ಕರ್ ಚಿತ್ರವನ್ನು ಅಳವಡಿಸಿದ ಬಗ್ಗೆ ನನಗೆ ನಿನ್ನೆ (ಮಂಗಳವಾರ) ತಿಳಿಯಿತು. ತಕ್ಷಣ ವಿದ್ಯಾರ್ಥಿಗಳಲ್ಲೇ ಅದನ್ನು ತೆರವುಗೊಳಿಸಿದೆವು. ಅಲ್ಲದೆ ಆ ವಿದ್ಯಾರ್ಥಿಗಳು ತಪ್ಪೊಪ್ಪಿಗೆ ಪತ್ರ ನೀಡಿದ್ದಾರೆ’ ಎಂದು ತಿಳಿಸಿದ್ದಾರೆ.