ತಮ್ಮದ್ದಲ್ಲದ ತಪ್ಪಿಗೆ ಬ್ಯಾಂಕಿನವರಿಂದಾಗಿ ಬೀದಿಪಾಲು: ಹೇಮರಾಜ್ ಕೋಟ್ಯಾನ್ ಆರೋಪ
![ತಮ್ಮದ್ದಲ್ಲದ ತಪ್ಪಿಗೆ ಬ್ಯಾಂಕಿನವರಿಂದಾಗಿ ಬೀದಿಪಾಲು: ಹೇಮರಾಜ್ ಕೋಟ್ಯಾನ್ ಆರೋಪ ತಮ್ಮದ್ದಲ್ಲದ ತಪ್ಪಿಗೆ ಬ್ಯಾಂಕಿನವರಿಂದಾಗಿ ಬೀದಿಪಾಲು: ಹೇಮರಾಜ್ ಕೋಟ್ಯಾನ್ ಆರೋಪ](https://www.varthabharati.in/sites/default/files/images/articles/2022/06/8/338091-1654694845.jpg)
ಹೇಮರಾಜ್ ಕೋಟ್ಯಾನ್
ಉಡುಪಿ : ಕಳೆದ 28 ವರ್ಷಗಳಿಂದ ವಾಸವಾಗಿದ್ದ ಜಾಗವನ್ನು ಅಧಿಕಾರಿಗಳು ಬೇರೆಯವರ ಹೆಸರಿಗೆ ಬದಲಾಯಿಸಿದ್ದು, ಈ ಜಾಗದ ಹೆಸರಿನಲ್ಲಿ ಮಾಡಿರುವ ಸಾಲ ಮರುಪಾವತಿಸದ ಕಾರಣಕ್ಕೆ ಬ್ಯಾಂಕಿನವರು ಲಾಕ್ಡೌನ್ ಸಮಯದಲ್ಲಿ ನಮ್ಮನ್ನು ಮನೆಯಿಂದ ಹೊರಹಾಕಿದ್ದಾರೆ. ಇದರಿಂದ ನಾನು, ನನ್ನ ಪತ್ನಿ ಮನೆಯ ಹೊರಗಡೆ ಟರ್ಪಾಲ್ ಹಾಕಿಕೊಂಡು ಕಷ್ಟದ ಬದುಕು ನಡೆಸುತ್ತಿದ್ದೇವೆ ಎಂದು ಕೊಡವೂರಿನ ಹೇಮರಾಜ್ ಕೋಟ್ಯಾನ್ ಆರೋಪಿಸಿದ್ದಾರೆ.
ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡವೂರು ಗ್ರಾಮದ ಸರ್ವೆ ನಂಬರ್ ೨೯೩-೧ಎ ಇದರ ನಿವೇಶನ ನಂಬರ್ ೪೮ರ ೦-೦೫ ಸೆಂಟ್ಸ್ ಜಾಗದಲ್ಲಿ ನಾವು ಕಳೆದ ೨೮ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸ ಮಾಡಿಕೊಂಡಿದ್ದು, ಈ ಜಾಗಕ್ಕೆ ಮಂಜೂರಾತಿ ಕೋರಿ ಅರ್ಜಿ ಸಲ್ಲಿಸಿದ್ದೇವು. ಆದರೆ ಹಕ್ಕುಪತ್ರ ನೀಡುವಾಗ ಈ ಸ್ಥಳದ ಸರ್ವೆ ನಂಬರ್ ನಮೂದಿಸದೆ ನಮಗೆ ಸಂಬಂಧಪಟ್ಟಿರದ ಬೇರೆ ಒಂದೂವರೆ ಸೆಂಟ್ಸ್ ಜಾಗದ ಹಕ್ಕುಪತ್ರವನ್ನು ನೀಡಲಾಗಿದೆ ಎಂದರು.
ಆ ಸ್ಥಳ ಯಾವುದು ಎಂಬುದು ನಮಗೆ ಗೊತ್ತಿಲ್ಲ. ನಾವು ವಾಸ ಮಾಡಿಕೊಂಡ ಸ್ಥಳದ ಪಹಣಿ ನಳಿನಿ ದಯಾನಂದ ಎಂಬವರ ಹೆಸರಿನಲ್ಲಿದೆ. ನಾವು ಈ ಮೊದಲು ಸಿಂಡಿಕೇಟ್ ಬ್ಯಾಂಕಿನಲ್ಲಿ 3.75 ಲಕ್ಷ ರೂ. ಸಾಲವನ್ನು ಪಡೆದಿದ್ದು, ಆದರೆ ನಾವು ವಾಸಿಸುತ್ತಿರುವ ಸ್ಥಳದ ಪಹಣಿ ನಳಿನಿ ದಯಾನಂದ ಪಾಲನ್ ಹೆಸರಿನಲ್ಲಿದ್ದ ಕಾರಣ ನಾವು ಬ್ಯಾಂಕ್ ನಿಂದ ಪಡೆದ ಸಾಲದ ಎಲ್ಲವನ್ನು ಮರುಪಾವತಿ ಮಾಡಿರುವುದಿಲ್ಲ. ಆದರೆ ಈ ವಿಷಯ ತಿಳಿಯುವ ಮೊದಲೇ ಬ್ಯಾಂಕಿಗೆ 2.15 ಲಕ್ಷ ರೂ.ವನ್ನು ಎರಡು ವರ್ಷ ದಲ್ಲಿ ಪಾವತಿಸಲಾಗಿತ್ತು ಎಂದು ಅವರು ತಿಳಿಸಿದರು.
ಸಾಲ ಪೂರ್ಣ ಮರು ಪಾವತಿ ಮಾಡದ ಕಾರಣಕ್ಕಾಗಿ ಬ್ಯಾಂಕಿನವರು ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ಅಂದರೆ 2021ರ ಡಿ.20ರಂದು ಮನೆಯನ್ನು ಸೀಝ್ ಮಾಡಿ, ನಮ್ಮನ್ನು ಹೊರಗೆ ಹಾಕಲಾಯಿತು. ಸೀಲ್ಡೌನ್ ಸಮಯದಲ್ಲಿ ಬಲವಂತವಾಗಿ ಸಾಲ ವಸೂಲು ಮಾಡಬಾರದೆಂಬ ನಿಯಮ ಇದ್ದರೂ ಬ್ಯಾಂಕಿನವರು ಸ್ಥಳೀಯ ನಗರಸಭಾ ಸದಸ್ಯ ವಿಜಯ ಕೊಡವೂರು ಎಂಬವರ ಕುಮ್ಮಕ್ಕಿನಿಂದ ಮನೆಯನ್ನು ಸೀಝ್ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ನಮ್ಮ ಸಾಲದ ಬದ್ಯತೆಗಾಗಿ ನೀಡಿದ ಜಾಗ ಕೂಡ ಇದಾಗಿರುವುದಿಲ್ಲ. ನಾವು ಈಗ ವಾಸಕ್ಕೆ ಸರಿಯಾಗಿ ನೆಲೆ ಇಲ್ಲದೆ ತುಂಬಾ ಸಮಸ್ಯೆ ಎದುರಿಸುತ್ತಿದ್ದೇವೆ. ನನ್ನ ಅನಾರೋಗ್ಯದ ಪತ್ನಿಯನ್ನು ಇಟ್ಟುಕೊಂಡು ಮನೆಯ ಹೊರಗಡೆ ಟಾರ್ಪಲ್ ಹಾಕಿ ಬದುಕು ನಡೆಸುತ್ತಿದ್ದೇವೆ. ಮಳೆಯಿಂದಾಗಿ ಇಲ್ಲಿ ಬದುಕುವುದೇ ಕಷ್ಟವಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ನಾವು ವಾಸ ಮಾಡಿಕೊಂಡಿರುವ ಕೊಡವೂರು ಗ್ರಾಮದ ಜಾಗವನ್ನು ನಮ್ಮ ಹೆಸರಿಗೆ ವರ್ಗಾವಣೆ ಮಾಡಿ ಖಾತೆ ಬದಲಾವಣೆ ಮಾಡಿಕೊಡಬೇಕು ಎಂದು ಅವರು ಮನವಿ ಮಾಡಿದರು.