ಯಾವುದೇ ಪರಿಣಾಮವಿಲ್ಲ, ಗಲ್ಫ್ ದೇಶಗಳೊಂದಿಗೆ ನಮ್ಮ ಉತ್ತಮ ಸಂಬಂಧ ಮುಂದುವರಿಯುತ್ತದೆ: ಪಿಯೂಶ್ ಗೋಯಲ್
![ಯಾವುದೇ ಪರಿಣಾಮವಿಲ್ಲ, ಗಲ್ಫ್ ದೇಶಗಳೊಂದಿಗೆ ನಮ್ಮ ಉತ್ತಮ ಸಂಬಂಧ ಮುಂದುವರಿಯುತ್ತದೆ: ಪಿಯೂಶ್ ಗೋಯಲ್ ಯಾವುದೇ ಪರಿಣಾಮವಿಲ್ಲ, ಗಲ್ಫ್ ದೇಶಗಳೊಂದಿಗೆ ನಮ್ಮ ಉತ್ತಮ ಸಂಬಂಧ ಮುಂದುವರಿಯುತ್ತದೆ: ಪಿಯೂಶ್ ಗೋಯಲ್](https://www.varthabharati.in/sites/default/files/images/articles/2022/06/8/338138-1654709754.jpg)
PTI
ತಿರುವನಂತಪುರ,ಜೂ.8: ಪ್ರವಾದಿ ಮುಹಮ್ಮದ್ ರ ಕುರಿತು ವಿವಾದಾತ್ಮಕ ಹೇಳಿಕೆಗಳಿಗಾಗಿ ಬಿಜೆಪಿಯು ಪಕ್ಷದ ಪದಾಧಿಕಾರಿಯ ವಿರುದ್ಧ ಅಗತ್ಯ ಕ್ರಮವನ್ನು ತೆಗೆದುಕೊಂಡಿದೆ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯವೂ ಅಗತ್ಯ ಸ್ಪಷ್ಟೀಕರಣವನ್ನು ನೀಡುತ್ತಿದೆ ಎಂದು ಹೇಳಿದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಶ್ ಗೋಯಲ್ ಅವರು, ಭಾರತವು ಗಲ್ಫ್ ದೇಶಗಳೊಂದಿಗಿನ ಉತ್ತಮ ಸಂಬಂಧಗಳನ್ನು ಮುಂದುವರಿಸುತ್ತದೆ ಎಂದು ಒತ್ತಿ ಹೇಳಿದರು.
ಗಲ್ಫ್ ದೇಶಗಳಲ್ಲಿ ವಾಸವಾಗಿರುವ ಎಲ್ಲ ಭಾರತೀಯರು ಸುರಕ್ಷಿತರಾಗಿದ್ದಾರೆ ಮತ್ತು ಎಲ್ಲಿಯೂ ಉದ್ವಿಗ್ನತೆಯಿಲ್ಲ ಎಂದರು.
ಬಿಜೆಪಿಯ ರಾಷ್ಟ್ರೀಯ ವಕ್ತಾರರಾಗಿದ್ದ ನೂಪುರ್ ಶರ್ಮಾರ ವಿವಾದಾತ್ಮಕ ಹೇಳಿಕೆಗಳನ್ನು ಪ್ರಸ್ತಾಪಿಸಿದ ಗೋಯಲ್, ಸರಕಾರದ ಯಾವುದೇ ಅಧಿಕಾರಿ ಈ ಹೇಳಿಕೆಗಳನ್ನು ನೀಡಿಲ್ಲ ಮತ್ತು ಸರಕಾರದ ಮೇಲೆ ಯಾವುದೇ ಪರಿಣಾಮವಿಲ್ಲ ಎಂದು ಹೇಳಿದರು. ‘ನಾವು ಜಗತ್ತನ್ನು ಮುನ್ನಡೆಸುತ್ತಿದ್ದೇವೆ ಮತ್ತು ಅದನ್ನು ನಾವು ಮುಂದುವರಿಸುತ್ತೇವೆ. ಗಲ್ಫ್ ದೇಶಗಳೊಂದಿಗೆ ನಾವು ಉತ್ತಮ ಸಂಬಂಧಗಳನ್ನು ಹೊಂದಿದ್ದೇವೆ ಮತ್ತು ಅದು ಮುಂದುವರಿಯುತ್ತದೆ’ ಎಂದರು.