ಪಿರಿಯಾಪಟ್ಟಣದಲ್ಲಿ ಯುವತಿಯ ಹತ್ಯೆ ಪ್ರಕಣ: ಮೃತ ಯುವತಿಯ ಆಡಿಯೋ ಬಹಿರಂಗ

ಮೈಸೂರು,ಜೂ.9: ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ಗ್ರಾಮದಲ್ಲಿ ನಡೆದಿದ್ದ ಮರ್ಯಾದ ಹತ್ಯೆ ಪ್ರಕರಣ ಹೊಸ ತಿರುವು ಪಡೆಯುತ್ತಿದ್ದು, ತನ್ನ ಸಾವಿಗೆ ಕಾರಣ ಯಾರೆಂದು ಬಹಿರಂಗ ಪಡಿಸಿರುವ ಆಡಿಯೋ ಒಂದು ಲಭ್ಯವಾಗಿದೆ.
ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದ ಅಪ್ರಾಪ್ತ ಮಗಳನ್ನು ತಂದೆ ಮತ್ತು ತಾಯಿ ಇಬ್ಬರು ಸೇರಿ ಕೊಲೆ ಮಾಡಿದ್ದರು. ದ್ವಿತೀಯ ಪಿಯು ವಿದ್ಯಾರ್ಥಿನಿ ಶಾಲಿನಿ (17) ಮಂಜುನಾಥ್ ಅವರನ್ನು ಪ್ರೀತಿಸುತ್ತಿದ್ದಳು. ಈ ವಿಚಾರ ತಿಳಿದು ತಂದೆ ಸುರೇಶ್ ಹಾಗೂ ತಾಯಿ ಬೇಬಿ ಮಗಳನ್ನು ಹತ್ಯೆಗೈದಿದ್ದರು. ಬಳಿಕ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಇದೀಗ ಶಾಲಿನಿ ಸಾಯುವ ಮುನ್ನ ತನ್ನ ಪ್ರಿಯಕರನೊಂದಿಗೆ ಮಾತನಾಡಿರುವ ಆಡಿಯೋ ಪೊಲೀಸರಿಗೆ ಲಭ್ಯವಾಗಿದ್ದು, 'ನಾನೇನಾದರೂ ಸತ್ತರೆ ಅದಕ್ಕೆ ನಮ್ಮ ಅಪ್ಪ ಅಮ್ಮನೇ ಕಾರಣ. ನನ್ನನ್ನ ಕಿಡ್ನಾಪ್ ಮಾಡಿಸುವ ಪ್ಲ್ಯಾನ್ ಮಾಡಿದ್ದಾರೆ. ಬಾಲ ಮಂದಿರದಿಂದ ನೀನು ನಿನ್ನಿಷ್ಟದ ಹಾಗೇ ಇರು ಎಂದು ಕರೆದುಕೊಂಡು ಬಂದರು. ಆದರೆ ಪಾಂಡವಪುರದಲ್ಲಿ ಕೆಲಸಕ್ಕೆ ಕಳುಹಿಸುತ್ತಿದ್ದಾರೆ' ಎಂದು ಈ ಕುರಿತಂತೆ ಪಿರಿಯಾಪಟ್ಟಣ ಪೊಲೀಸರಿಗೆ ಮೂರು ಪುಟಗಳ ಸುದೀರ್ಘ ಪತ್ರವನ್ನು ಯುವತಿ ಬರೆದಿದ್ದಾಳೆ. ಅಲ್ಲದೇ ತಾನು ಮಾತನಾಡಿರುವುದನ್ನು ರೆಕಾರ್ಡ್ ಮಾಡಿ ಪಿರಿಯಾಪಟ್ಟಣ ಪೊಲೀಸರಿಗೆ ಕೊಡುವಂತೆ ಪ್ರಿಯಕರ ಮಂಜುನಾಥ್ಗೂ ಕೂಡ ತಿಳಿಸಿದ್ದಾಳೆ.







