ಮಂಗಳೂರು; ಪೌರ ಕಾರ್ಮಿಕರಿಗೆ ಮೀಸಲಿಟ್ಟ ಜಾಗದಲ್ಲಿ ಅಕ್ರಮ ಮನೆ ನಿರ್ಮಾಣ ಆರೋಪ
ತೆರವುಗೊಳಿಸಲು ತೆರಳಿದ ಅಧಿಕಾರಿಗಳಿಗೆ ಅಡ್ಡಿ: ದೂರು

ಮಂಗಳೂರು : ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಪಚ್ಚನಾಡಿ ಬಳಿ ಪೌರ ಕಾರ್ಮಿಕರಿಗೆ ಮೀಸಲಿಟ್ಟ ಸ್ಥಳದಲ್ಲಿ ಅಕ್ರಮ ಮನೆ ನಿರ್ಮಿಸಿರುವುದಾಗಿ ಆರೋಪಿಸಿ ತೆರವುಗೊಳಿಸಲುಶನಿವಾರ ತೆರಳಿದ ಪಾಲಿಕೆ ಅಧಿಕಾರಿಗಳಿಗೆ ಸ್ಥಳೀಯ ಪಾಲಿಕೆ ಸದಸ್ಯೆ ಸ್ಥಳೀಯರೊಂದಿಗೆ ಸೇರಿ ತಡೆಯೊಡ್ಡಿದ್ದಾರೆ ಎನ್ನಲಾದ ಘಟನೆ ನಡೆದಿದೆ.
ಈ ಬಗ್ಗೆ ಅಧಿಕಾರಿಗಳು ಪಾಲಿಕೆ ಸದಸ್ಯೆ ಸೇರಿದಂತೆ ಮೂರು ಮಂದಿ ವಿರುದ್ಧ ದೂರು ದಾಖಲಿಸಿರುವ ಘಟನೆ ನಡೆದಿದೆ.
ಅಕ್ರಮ ಮನೆಗಳ ತೆರವಿಗೆ ಪಾಲಿಕೆ ಕಮಿಷನರ್ ಆದೇಶ ಪತ್ರದೊಂದಿಗೆ ಪಾಲಿಕೆ ಅಧಿಕಾರಿಗಳು ಪೊಲೀಸ್ ರಕ್ಷಣೆಯೊಂದಿಗೆ ಇಂದು ತೆರಳಿದ್ದರು. ಪಚ್ಚನಾಡಿ ವಾರ್ಡ್ ಸದಸ್ಯೆ ಸಂಗೀತಾ ನಾಯಕ್ ಹಾಗೂ ಅಲ್ಲಿದ್ದ ಕೆಲವರು ಅಕ್ರಮ ಮನೆ ತೆರವಿಗೆ ತಡೆ ಒಡ್ಡಿದ್ದರು ಎನ್ನಲಾಗಿದೆ. ಶನಿವಾರ ಬೆಳಗ್ಗೆ 7 ಗಂಟೆಗೆ ಕಾರ್ಯಾಚರಣೆಗೆ ಸಿದ್ಧತೆ ನಡೆಸಿದ್ದು, ಈ ವಿಷಯ ಗೊತ್ತಾಗಿ ಮನೆಯೊಳಗೆ ಮಹಿಳೆಯರು ಸೇರಿದಂತೆ ಮನೆ ಮಂದಿಯನ್ನು ಮಲಗಿಸಿ ಕಾರ್ಯಾಚರಣೆಗೆ ಅಡ್ಡಿಪಡಿಸಲಾಗಿದೆ.
ಈ ನಡುವೆ ಪಾಲಿಕೆ ಸದಸ್ಯ ಸಂಗೀತಾ ನಾಯಕ್, ಸ್ಥಳೀಯರು ಹಾಗೂ ದಲಿತ ಮುಖಂಡರ ಜತೆ ಮಾತಿನ ಚಕಮಕಿಯೂ ನಡೆಯಿತು. ಇದೇ ವೇಳೆ ಕಾರ್ಯಾಚರಣೆ ನಡೆಸಲು ಅಡ್ಡಪಡಿಸಿದ್ದಾಗಿ ಪಾಲಿಕೆಯ ನಗರ ಯೋಜನಾ ಅಧಿಕಾರಿ ಬಾಲಕೃಷ್ಣ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ.
ಪಚ್ಚನಾಡಿ ಪ್ರದೇಶದಲ್ಲಿ ಪೌರ ಕಾರ್ಮಿಕರಿಗೆ ಹಲವು ವರ್ಷಗಳ ಹಿಂದೆಯೇ ಜಾಗ ಮೀಸಲಿರಿಸಲಾಗಿತ್ತು. ಅಲ್ಲಿ ಈ ಹಿಂದೆ ಪಾಲಿಕೆ ಸದಸ್ಯರ ನೆರವಿನಲ್ಲಿ ಅಕ್ರಮ ಮನೆ ನಿರ್ಮಿಸಲಾಗಿದ್ದು, ಅದರಲ್ಲಿ ಒಂದು ಮನೆಯ ಗೃಹಪ್ರವೇಶ ಕೂಡ ಆಗಿದೆ ಎಂದು ಆರೋಪಿಸಲಾಗಿದೆ.
ಅಲ್ಲಿ ಸುಮಾರು 2 ಎಕರೆ ಭೂಮಿ ಇದ್ದು, ಈ ಹಿಂದೆ ಅದರಲ್ಲಿ ಕೆಲವು ಪೌರ ಕಾರ್ಮಿಕರು ಸಕ್ರಮವಾಗಿ ಮನೆ ನಿರ್ಮಿಸಿ ವಾಸಿಸುತ್ತಿದ್ದಾರೆ. ಉಳಿದ ಶೇ. 75ರಷ್ಟು ಖಾಲಿ ನಿವೇಶನವಿದ್ದು, ಅದನ್ನು ಕೂಡ ಪೌರ ಕಾರ್ಮಿಕರಿಗೆ ಮೀಸಲಿಡಲಾಗಿದೆ. ಆದರೆ ಪೌರ ಕಾರ್ಮಿಕರಿಗೆ ಮೀಸಲಿಟ್ಟ ಈ ಜಾಗದಲ್ಲಿ 2020ರಲ್ಲಿ ಅಪರಿಚಿತರು ಅಕ್ರಮವಾಗಿ 9 ಮನೆ ನಿರ್ಮಾಣಕ್ಕೆ ಅಡಿಪಾಯ ನಿರ್ಮಿಸುವಾಗ ಸ್ಥಳೀಯರು ಪಾಲಿಕೆಯ ಗಮನಕ್ಕೆ ತಂದಿದ್ದರು. ಇದೀಗ ಅಲ್ಲಿ ಒಂದು ಮನೆ ಗೃಹ ಪ್ರವೇಶವಾಗಿ, 10 ಮನೆಗಳು ಪೂರ್ಣಗೊಳ್ಳುವ ಹಂತದಲ್ಲಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆ ಆಯುಕ್ತರ ಸೂಚನೆ ಮೇರೆಗೆ ಪಾಲಿಕೆ ಅಧಿಕಾರಿಗಳು ತೆರವು ಕಾರ್ಯಾಚರಣೆಗೆ ತೆರಳಿದ್ದರು.
‘‘ಅಕ್ರಮ ಮನೆ ನಿರ್ಮಿಸಿರುವುದನ್ನು ತೆರವುಗೊಳಿಸಲು ಶನಿವಾರ ತೆರಳಿದ ಪಾಲಿಕೆ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಮುಂದೆ ಸೂಕ್ತ ಬಂದೋಬಸ್ತ್ನೊಂದಿಗೆ ಅಕ್ರಮ ಮನೆಗಳನ್ನು ತೆರವುಗೊಳಿಸಲಾಗುವುದು.’’
-ಅಕ್ಷಯ್ ಶ್ರೀಧರ್, ಆಯುಕ್ತರು, ಮಂಗಳೂರು ಮಹಾನಗರ ಪಾಲಿಕೆ.
‘‘ಪೌರ ಕಾರ್ಮಿಕರ ಜಾಗದಲ್ಲಿ ಈ ಒಂದು ಮನೆಯಲ್ಲದೆ, 28 ಮನೆಗಳು ಇವೆ. ಪೌರ ಕಾರ್ಮಿಕರು ಅಲ್ಲದವರು ಈ ಹಿಂದೆ ಕಟ್ಟಿ ವಾಸಿಸುತ್ತಿದ್ದಾರೆ. ಆವಾಗ ಇದ್ದಿದ್ದು, ಕಾಂಗ್ರೆಸ್ ಸರಕಾರ. ಇಲ್ಲಿ ಈಗ ಇಂದಿನ ಪರಿಸ್ಥಿತಿಯಲ್ಲಿ ಇದೀಗ ಕಟ್ಟಿಕೊಂಡು ಕುಳಿತಿದ್ದಾರೆ. ಇದೀಗ ಒಂದು ಮನೆಯ ತೆರವಿಗೆ ಆದೇಶವಾಗಿದೆ. ಇದರ ಬಗ್ಗೆ ಜನಪ್ರತಿನಿಧಿಯಾಗಿ ನನಗೆ ಆಕ್ಷೇಪವಿದೆ. ಕಾನೂನಾತ್ಮಕವಾಗಿ ಅವರೇನು ಕ್ರಮ ಕೈಗೊಳ್ಳುತ್ತಾರೋ ಅದರ ಬಗ್ಗೆ ಯಾವುದೇ ಆಕ್ಷೇಪ ಇಲ್ಲ. ಪೌರ ಕಾರ್ಮಿಕರಿಗಾಗಿ ಮೀಸಲಿಟ್ಟ ಜಾಗದಲ್ಲಿ ಇಷ್ಟು ಮನೆಗಳಾಗಿರುವಾಗ ಆವಾಗ ಮಾತನಾಡದವರು ಈವಾಗ ಬಂದು ತೆರವುಗೊಳಿಸುವ ಬಗ್ಗೆ ನನ್ನ ಆಕ್ಷೇಪವಿದೆ. ಪೌರ ಕಾರ್ಮಿಕರಿಗೆ ಅನ್ಯಾಯ ಆಗಲು ನಾನು ಬಿಡುವುದಿಲ್ಲ. ಆದರೆ ಈಗಾಗಲೇ ಕಟ್ಟಿರುವ ಮನೆಯನ್ನು ತೆರವುಗೊಳಿಸಲು ಅವಕಾಶ ನೀಡುವುದಿಲ್ಲ.’
-ಸಂಗೀತ ಆರ್. ನಾಯಕ್, ಸದಸ್ಯೆ, ಮನಪಾ.
"ಪೌರ ಕಾರ್ಮಿಕರಿಗೆ ಮೀಸಲಿಟ್ಟ ಜಾಗ ಹಲವು ಸಲ ಅತಿಕ್ರಮಣವಾಗಿದೆ. ಈ ಹಿಂದೆ ಐದು ಮನೆಗಳನ್ನು ಅಲ್ಲಿ ಅಕ್ರಮವಾಗಿ ಕಟ್ಟಲಾಗಿತ್ತು. ಆಗ ಆಕ್ಷೇಪವನ್ನು ವ್ಯಕ್ತಪಡಿಸಿ ಇಲಾಖಾ ಮಟ್ಟದ ತನಿಖೆ ನಡೆಸುವ ನಿಟ್ಟಿನಲ್ಲಿ ಹೋರಾಟ ನಡೆಸಿದ್ದೇವೆ. ಇದೀಗ ಹೊಸತಾಗಿ ಮನೆ ಅಕ್ರಮವಾಗಿ ಮನೆ ಕಟ್ಟಲಾಗಿದೆ. ಇದು ಪೌರ ಕಾರ್ಮಿಕರಿಗೆ ಮಾಡುವ ಅನ್ಯಾಯ. ಸಂಬಂಧಪಟ್ಟ ಇಲಾಖೆಯವರು ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು".
-ಅನಿಲ್ ಕುಮಾರ್, ಅಧ್ಯಕ್ಷರು, ಪೌರ ಕಾರ್ಮಿಕರು ಮತ್ತು ನಾಲ್ಕನೆ ದರ್ಜೆ ನೌಕರರ ಸಂಘ, ದ.ಕ. ಜಿಲ್ಲೆ.
‘‘ಪೌರ ಕಾರ್ಮಿಕರಿಗೆ ಮನಪಾ ವತಿಯಿಂದ ಮನೆ ನಿರ್ಮಿಸುವುದಾಗಿ ಹೇಳುತ್ತಾ ಬರಲಾಗಿದೆ. ಇತ್ತೀಚೆಗೆ ಇಲ್ಲಿ ಅಕ್ರಮವಾಗಿ ಮನೆ ನಿರ್ಮಾಣವಾಗಿದೆ. ಮನಪಾ ವ್ಯಾಪ್ತಿಯಲ್ಲಿ ಯಾವುದೇ ಪರವಾನಿಗೆ, ಸಿಂಗಲ್ ಸೈಟ್, ಮನೆ ನಂಬ್ರ ಇಲ್ಲದೆ ಮನೆ ನಿರ್ಮಾಣವಾಗಿದೆ. ಇದು ಹೇಗೆ ಸಾಧ್ಯ? ಇದು ಸರಕಾರಕ್ಕೆ ಮಾಡಿರುವ ದ್ರೋಹ. ದಲಿತರಿಗೆ ಮೀಸಲಿಟ್ಟಿರುವ ಜಾಗವನ್ನು ಕೂಡಲೇ ತೆರವುಗೊಳಿಸಬೇಕು.’’
- ಎಸ್.ಪಿ. ಆನಂದ, ಮುಖಂಡರು, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ವಾದ)








