ವಿ.ಪ. ಪಶ್ಚಿಮ ಶಿಕ್ಷಕರ ಕ್ಷೇತ್ರ; ಬಸವರಾಜ್ ಗುರಿಕಾರ್ ಗುರಿಮುಟ್ಟುವುದು ನಿಶ್ಚಿತ: ಜಂಬೂರಮಠ

ಭಟ್ಕಳ: ವಿಧಾನ ಪರಿಷತ್ತಿನ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಕ್ಷಣಗಣನೆ ಆರಂಭಗೊಡಿದ್ದು ಕಾಂಗ್ರೆಸ್ ಅಭ್ಯರ್ಥಿ ಬಸವರಾಜ್ ಗುರಿಕಾರರ ಪರ ಭಟ್ಕಳದಲ್ಲಿ ಪ್ರಚಾರ ನಡೆದಿದೆ. ಪಕ್ಷಾತೀತವಾಗಿ ಗುರಿಕಾರರ ಅಭಿಮಾನಿಗಳು ಈ ಬಾರಿ ಅವರನ್ನು ವಿಧಾನಪರಿಷತ್ತಿಗೆ ಕಳುಹಿಸುತ್ತಿದ್ದು ಅವರು ಗುರಿಮುಟ್ಟುವ ಗುರಿಕಾರರಾಗಿದ್ದಾರೆ ಎಂದು ಸರ್ಕಾರಿ ಶಾಸಕರ ಮಾದರಿ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯಾಧ್ಯಾಪಕ ಹಾಗೂ ಸರ್ಕಾರಿ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಶ್ರೀಧರ್ ಜಂಬೂರ್ಮಠ ಹೇಳಿದರು.
ಅವರು ಶನಿವಾರ ತಾಲೂಕಿ ಮುಂಡಳಿ, ಗೊರ್ಟೆ, ಅಳ್ವೇಕೋಡಿ, ಚಿತ್ರಾಪುರ, ಶಿರಾಲಿ ಮುಂತಾದ ಪ್ರೌಢ ಶಾಲೆಗಳಿಗೆ ಭೇಟಿ ನೀಡಿ ಬಸವರಾಜ್ ಗುರಿಕಾರರ ಪರ ಮತಯಾಚಿಸಿದ್ದು ತಾಲೂಕಿನಲ್ಲಿ ಎಲ್ಲ ಶಾಲಾ ಕಾಲೇಜುಗಳ ಶಿಕ್ಷಕರು ಈ ಬಾರಿ ಬದಲಾವಣೆಯನ್ನು ಬಯಸುತ್ತಿದ್ದಾರೆ. ಹಾಗಾಗಿ ಈ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದ್ದು ಮುಂದಿನ ದಿನಗಳಲ್ಲಿ ಬಸವರಾಜ ಗುರಿಕಾರರು ಶಿಕ್ಷಕರ ಸಮಸ್ಯೆಗಳ ಕುರಿತಂತೆ ತಮ್ಮ ಹೋರಾಟವನ್ನು ತೀವ್ರಗೊಳಿಸಲಿದ್ದಾರೆ. ಶಿಕ್ಷಕ ಸಮುದಾಯದಲ್ಲಿ ಖಾಸಗಿ, ಸರ್ಕಾರಿ, ಅನುದಾನಿತ ಎಂಬ ಬೇಧವಿಲ್ಲದೆ ಎಲ್ಲ ಶಿಕ್ಷಕರಿಗೂ ಸಮಾನ ಹಕ್ಕು ಸಿಗಬೇಕೆಂಬ ನೆಲೆಯಲ್ಲಿ ಯೋಜನೆಗಳನ್ನು ರೂಪಿಸಿದ್ದಾರೆ ಎಂದರು.
ಈಗ ಶಿಕ್ಷಕ ಸಮುದಾಯವನ್ನು ಮುನ್ನೆಡೆಸಲು ಸಮರ್ಥ ವ್ಯಕ್ತಿಯೊಬ್ಬರು ಸಿಕ್ಕಿದ್ದಾರೆ. ಬಸವರಾಜ್ ಗುರಿಕಾರರನ್ನು ವಿಧಾನಪರಿಷತ್ತಿಗೆ ಕಳುಹಿಸುವುದರ ಮೂಲಕ ಶಿಕ್ಷಕರು ತಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಿ ದ್ದಾರೆ ಎಂದರು.





