ನಿಗದಿಯಂತೆ ಮುಂಬೈ ತಲುಪಿದ ಮುಂಗಾರು ಮಾರುತ: ಹವಾಮಾನ ಇಲಾಖೆ
![ನಿಗದಿಯಂತೆ ಮುಂಬೈ ತಲುಪಿದ ಮುಂಗಾರು ಮಾರುತ: ಹವಾಮಾನ ಇಲಾಖೆ ನಿಗದಿಯಂತೆ ಮುಂಬೈ ತಲುಪಿದ ಮುಂಗಾರು ಮಾರುತ: ಹವಾಮಾನ ಇಲಾಖೆ](https://www.varthabharati.in/sites/default/files/images/articles/2022/06/12/338510-1654999589.jpg)
ಫೈಲ್ ಫೋಟೊ
ಮುಂಬೈ: ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಗೆ ಅನುಗುಣವಾಗಿ ಜೂನ್ 11ರಂದು ನೈರುತ್ಯ ಮುಂಗಾರು ಮುಂಬೈಗೆ ಆಗಮಿಸಿದೆ.
"ನೈರುತ್ಯ ರೈಲ್ವೆ ಕೇಂದ್ರೀಯ ಅರಬ್ಬಿ ಸಮುದ್ರದ ಉಳಿದ ಭಾಗಗಳಿಗೆ ಮುನ್ನಡೆದಿದ್ದು, ಕೊಂಕಣದ ಬಹುತೇಕ ಭಾಗಗಳು, ಮಧ್ಯ ಮಹಾರಾಷ್ಟ್ರದ ಭಾಗಗಳು ಹಾಗೂ ಕರ್ನಾಟಕದ ಬಹುತೇಕ ಭಾಗಗಳನ್ನು ವ್ಯಾಪಿಸಿದೆ ಎಂದು ಹವಾಮಾನ ಇಲಾಖೆ ಹೇಳಿಕೆ ನೀಡಿದೆ.
ಮಾಮೂಲಿನಂತೆ ಜೂನ್ 11ರಂದು ಮುಂಗಾರು ಮಾರುತ ಮುಂಬೈ ತಲುಪಿದೆ ಎಂದು ಹವಾಮಾನ ಇಲಾಖೆಯ ಹಿರಿಯ ವಿಜ್ಞಾನಿ ಆರ್.ಕೆ.ಜೇನಮನಿ ಹೇಳಿದ್ದಾರೆ. ಆದರೆ ಮಹಾರಾಷ್ಟ್ರದ ರಾಜಧಾನಿಗೆ ಮುಂಗಾರು ಆಗಮಿಸಿರುವ ಬಗೆಗಿನ ಐಎಂಡಿ ಹೇಳಿಕೆಯನ್ನು ಕೆಲ ತಜ್ಞರು ಅಲ್ಲಗಳೆದಿದ್ದಾರೆ.
ಶನಿವಾರ ಮುಂಜಾನೆ 8.30ಕ್ಕೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ ಸಾಂತಾಕ್ರೂಜ್ ಮಾಪನ ಕೇಂದ್ರದಲ್ಲಿ 41.33 ಮಿಲಿಮೀಟರ್ ಮಳೆ ದಾಖಲಾಗಿದೆ. ಮುಂಗಾರು ಪೂರ್ವ ಮಳೆ ಅಸ್ಥಿರ ಹವಾಮಾನ ಪರಿಸ್ಥಿತಿಯಲ್ಲಿ ತೀವ್ರಗೊಂಡಿದೆ ಎಂದು ಹೇಳಲಾಗಿದೆ.
ಮುಂಬೈನಲ್ಲಿ ರವಿವಾರ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಗುಡುಗು ಸಹಿತ ಮಳೆ ಹಾಗೂ 35 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಜೂನ್ 15ರ ಬಳಿಕ ಒಣ ಹವೆ ಮುಂದುವರಿಯುವ ನಿರೀಕ್ಷೆ ಇದೆ ಎಂದು ವಿವರಿಸಿದೆ.
ಮುಂದಿನ 48 ಗಂಟೆಗಳ ಅವಧಿಯಲ್ಲಿ ನೈರುತ್ಯ ಮುಂಗಾರು ಮಹಾರಾಷ್ಟ್ರದ ಬಹುತೇಕ ಎಲ್ಲ ಭಾಗಗಳು, ತಮಿಳುನಾಡು ಹಾಗೂ ಕರ್ನಾಟಕದ ಎಲ್ಲ ಭಾಗಗಳು, ಭಾಗಶಃ ಗುಜರಾತ್, ಮಧ್ಯಪ್ರದೇಶ, ತೆಲಂಗಾಣ ಮತ್ತು ಆಂಧ್ರಪ್ರದೇಶವನ್ನು ವ್ಯಾಪಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಂಗಾರು ಮಾರುತ ಮೇ 16ರಂದು ಅಂಡಮಾನ್ ನಿಕೋಬಾರ್ ದ್ವೀಪ ತಲುಪಿತ್ತು. ಆದರೆ ಮೇ 20 ಬಳಿಕ ಪ್ರಗತಿ ಕುಂಠಿತಗೊಂಡಿತ್ತು.