ನಾವು ಅಧಿಕಾರಕ್ಕೆ ಬಂದರೆ ಆರ್ಥಿಕ ಸಮೀಕ್ಷಾ ವರದಿ ಸ್ವೀಕಾರ: ಸಿದ್ದರಾಮಯ್ಯ

ಬೆಂಗಳೂರು, ಜೂ. 12: ‘ನಾವು ಮತ್ತೆ ಅಧಿಕಾರಕ್ಕೆ ಬಂದರೆ ಜಾತಿಗಣತಿ ವರದಿಯನ್ನು ಸ್ವೀಕಾರ ಮಾಡುತ್ತೇವೆ. ಹಿಂದುಳಿದ ಜಾತಿಗಳಿಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಮಾಹಿತಿ ಇಲ್ಲ ಎಂದು ಸುಪ್ರೀಂ ಕೋರ್ಟ್ ಪದೇ ಪದೇ ಹೇಳಿದೆ. ಹೀಗಾಗಿ ನಾವು ಸಮೀಕ್ಷೆ ನಡೆಸಿದ್ದು. ಈ ವರದಿ ಸ್ವೀಕಾರ ಆಗಬೇಕೋ ಬೇಡವೋ?' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ರವಿವಾರ ಬನ್ನೇರುಘಟ್ಟದಲ್ಲಿ ಏರ್ಪಡಿಸಿದ್ದ ಭೋವಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘1931ರ ಬಳಿಕ ಜನ ಸಮುದಾಯಗಳ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿ ಅಧ್ಯಯನವೇ ನಡೆದಿಲ್ಲ. ಹೀಗಾಗಿ ನಮ್ಮ ಅವಧಿಯಲ್ಲಿ 162 ಕೋಟಿ ರೂ.ಗಳನ್ನು ಖರ್ಚು ಮಾಡಿ ಸಮೀಕ್ಷೆ ನಡೆಸಲಾಗಿತ್ತು. ಆದರೆ, ಆ ವರದಿಯನ್ನು ಸರಕಾರ ಸ್ವೀಕಾರ ಮಾಡಿಲ್ಲ. ಸಮುದಾಯಗಳ ಸ್ಥಿತಿಗತಿಯನ್ನು ಅರಿತು ಯೋಜನೆಗಳನ್ನು ರೂಪಿಸಬೇಕು' ಎಂದು ಪ್ರತಿಪಾದಿಸಿದರು.
‘ಸಂವಿಧಾನದ ಬಗ್ಗೆ ಚರ್ಚೆ ನಡೆದು, ಅದರ ಆಶಯಗಳು ಎಷ್ಟು ಈಡೇರಿವೆ ಎಂಬುದರ ಸಮಾಲೋಚನೆ ನಡೆಯಬೇಕು. ಸಾಮಾಜಿಕ ನ್ಯಾಯದ ಈಡೇರಿಕೆ ಆಗಿದೆಯಾ ಎಂಬ ಬಗ್ಗೆ ಮೇಲಿಂದ ಮೇಲೆ ಸಮಾವೇಶಗಳು ನಡೆದು ಚರ್ಚೆ ಆಗಬೇಕು' ಎಂದ ಸಿದ್ದರಾಮಯ್ಯ, ‘ದೇಶ ಹಲವು ಜಾತಿ, ಧರ್ಮದ ಜನರಿಂದ ಕೂಡಿದ್ದು, ಜಗತ್ತಿನ ಬೇರೆಲ್ಲಾ ದೇಶಗಳಿಗಿಂತ ಭಿನ್ನವಾಗಿದೆ. ಹೀಗಾಗಿ ಅಂಬೇಡ್ಕರ್ ಜಗತ್ತಿನ ವಿವಿಧ ದೇಶಗಳ ಸಂವಿಧಾನವನ್ನು ಆಳವಾಗಿ ಅಧ್ಯಯನ ನಡೆಸಿ, ಅರಿತು ಈ ದೇಶಕ್ಕೆ ಅಗತ್ಯವಾದ ಸಂವಿಧಾನ ರಚನೆ ಮಾಡಿದ್ದಾರೆ. ಒಂದು ವೇಳೆ ಅಂಬೇಡ್ಕರ್ ಸಂವಿಧಾನದ ಕರಡು ರಚನಾ ಸಮಿತಿ ಅಧ್ಯಕ್ಷರಾಗದಿದ್ದರೆ ಇಂತಹ ಶ್ರೇಷ್ಟ ಸಂವಿಧಾನ ನಮಗೆ ಸಿಗುತ್ತಿರಲಿಲ್ಲ' ಎಂದರು.
‘ಈಗಿನ ಬಿಜೆಪಿ ಸರಕಾರದ ಅವಧಿಯಲ್ಲಿ ಪಠ್ಯಪುಸ್ಕಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ಚಕ್ರತೀರ್ಥ ಎಂಬುವವರು ಅಂಬೇಡ್ಕರ್ ಬಗೆಗಿನ ಪಠ್ಯದಲ್ಲಿದ್ದ ‘ಸಂವಿಧಾನ ಶಿಲ್ಪಿ' ಎಂಬ ಪದವನ್ನೇ ತೆಗೆದುಹಾಕಿದ್ದಾರೆ. ಎಂತಹ ಅನ್ಯಾಯ ಅಲ್ವಾ ಇದು? ಕುವೆಂಪು ಅವರು ಭಾರತವನ್ನು ಸರ್ವಜನಾಂಗದ ಶಾಂತಿಯ ತೋಟ ಎಂದು ಕರೆದಿದ್ದಾರೆ. ಅವರ ಪಠ್ಯವನ್ನು ತಿರುಚಿದ್ದಾರೆ. ನಾರಾಯಣ ಗುರು, ಭಗತ್ ಸಿಂಗ್ ವಿಷಯವನ್ನು ಕೈಬಿಡಲಾಗಿದೆ. ಮಕ್ಕಳಿಗೆ ಹಿಂದಿನ ಚರಿತ್ರೆ ತಿಳಿಸೋದು ಬೇಡವೇ? ಚರಿತ್ರೆ ಓದಿ, ಹಿಂದಿನ ತಪ್ಪುಗಳನ್ನು ನಾವು ತಿದ್ದಿಕೊಳ್ಳಬೇಕು. ಇದಕ್ಕಾಗಿ ಇತಿಹಾಸದ ಜ್ಞಾನ ಮುಖ್ಯ. ಹೀಗಾಗಿಯೇ ಅಂಬೇಡ್ಕರ್ ಅವರು ಯಾರಿಗೆ ಚರಿತ್ರೆ ಗೊತ್ತಿಲ್ಲ ಅವರು ಭವಿಷ್ಯ ರೂಪಿಸಲಾರರು ಎಂದು ಹೇಳಿದ್ದರು' ಎಂದು ಸಿದ್ದರಾಮಯ್ಯ ಉಲ್ಲೇಖಿಸಿದರು.
‘ಆರ್ಯರು ಮಧ್ಯಪ್ರಾಚ್ಯದಿಂದ ಬಂದವರು ಎಂಬುದನ್ನು ನಾವು ನೀವೆಲ್ಲಾ ಓದಿದ್ದೇವೆ, ಇದೇ ಸತ್ಯವನ್ನು ನಾನು ಹೇಳಿದ್ದಕ್ಕೆ ನನ್ನನ್ನು ಹಿಂದೂ ವಿರೋಧಿ, ಆರೆಸ್ಸೆಸ್ ವಿರೋಧಿ ಎಂದರು. ಸತ್ಯವನ್ನು ಯಾವಾಗಲೂ ಗಟ್ಟಿ ಧ್ವನಿಯಲ್ಲಿ ಹೇಳಬೇಕು. ಮಿಲ್ಲರ್ ಆಯೋಗ ರಚನೆ ಮಾಡಿ, ದೇಶದಲ್ಲೇ ಮೊದಲು 1917ರಲ್ಲಿ ಬ್ರಾಹ್ಮಣೇತತರಿಗೆ ಮೀಸಲಾತಿ ನೀಡಿದ್ದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು. ಆಗ ದಿವಾನರಿಂದಲೂ ವಿರೋಧ ವ್ಯಕ್ತವಾಗಿತ್ತು. ಶೇ.25ರಷ್ಟು ಬ್ರಾಹ್ಮಣರಿಗೆ, ಶೇ.75ರಷ್ಟು ಬ್ರಾಹ್ಮಣೇತರರಿಗೆ ಮೀಸಲಾತಿ ನೀಡಿದ್ದರು' ಎಂದು ಅವರು ನುಡಿದರು.
‘ಭೋವಿ ಸಮಾಜದ ಜನ ಬಹಳ ನಿಯತ್ತಿನ, ನಂಬಿಕಸ್ಥ ಜನ. ನಾನು ಸುಮಾರು 13 ಚುನಾವಣೆ ನೋಡಿದ್ದೇನೆ, ಈ ಎಲ್ಲ ಚುನಾವಣೆಗಳಲ್ಲಿ ನನಗೆ ಸಹಾಯ ಮಾಡಿದವರು ಭೋವಿ ಸಮಾಜದ ಜನರು. ನಾನು, ಶಿವರಾಜ್ ತಂಗಡಗಿ ಸೇರಿ ಬೆಂಗಳೂರಿನಲ್ಲಿ ಭೋವಿ ಸಮಾವೇಶ ಮಾಡಿದ್ದೆವು, ಅಂದಿನ ಸಮಾವೇಶದಲ್ಲಿ ಶ್ರೀಗಳು ಭೋವಿ ನಿಗಮ ಸ್ಥಾಪನೆ ಮಾಡಿಕೊಡಿ ಎಂದು ಹೇಳಿದರು. ಅವರ ಮನವಿಯನ್ನು ಪುರಸ್ಕರಿಸಿ ನಿಗಮ ಸ್ಥಾಪನೆ ಮಾಡಿಕೊಟ್ಟಿದ್ದು ನಮ್ಮ ಸರಕಾರ' ಎಂದು ತಿಳಿಸಿದರು.
‘ನಾನು ಸಿಎಂ ಆಗಿದ್ದಾಗ ಸರಕಾರಿ ಕಾಮಗಾರಿ ಗುತ್ತಿಗೆಯಲ್ಲಿ ಮೀಸಲಾತಿಯನ್ನು ಮೊದಲ ಬಾರಿಗೆ ಜಾರಿಗೆ ತಂದಿದ್ದೆ. ಭಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಿರ್ಣಯದಿಂದ ಆಗುತ್ತಿದ್ದ ಅನ್ಯಾಯವನ್ನು ತಪ್ಪಿಸಲು ಕಾನೂನು ರೂಪಿಸಿದ ಮೊದಲ ರಾಜ್ಯ ನಮ್ಮದು, ಈ ಕೆಲಸವನ್ನು ನಮ್ಮ ಸರಕಾರ ಮಾಡಿದೆ ಎಂದ ಅವರು, ‘ಎಲ್ಲಿ ಜಾತಿ ವ್ಯವಸ್ಥೆಗೆ ಜಡತ್ವ ಇರುತ್ತದೆ ಅಲ್ಲಿ ಬದಲಾವಣೆ ಸಾಧ್ಯವಿಲ್ಲ, ಹಾಗಾಗಿ ಎಲ್ಲ ಜನರಿಗೆ ಶಿಕ್ಷಣ, ಸಂಪತ್ತು ಮತ್ತು ಅಧಿಕಾರ ಸಮಾನವಾಗಿ ಹಂಚಿಕೆಯಾಗಬೇಕು. ಆಗ ಮಾತ್ರ ಬದಲಾವಣೆ ಸಾಧ್ಯ. ಜನರಲ್ಲಿ ಜಾಗೃತಿ ಮೂಡಬೇಕು' ಎಂದು ಕರೆ ನೀಡಿದರು.
ಸಮಾವೇಶದಲ್ಲಿ ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಸಂಸದ ಡಿ.ಕೆ.ಸುರೇಶ್, ಮಾಜಿ ಸಚಿವ ಶಿವರಾಜ ತಂಗಡಗಿ, ಶಾಸಕರಾದ ಗೂಳಿಹಟ್ಟಿ ಶೇಖರ್, ಶಿವಣ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







