ಮಂಗಳೂರು: ಬೈಕ್ - ಕಾರ್ ಮಧ್ಯೆ ಅಪಘಾತ; ಓರ್ವ ಮೃತ್ಯು

ಮಂಗಳೂರು, ಜೂ. 12: ಬೈಕ್ ಮತ್ತು ಕಾರು ಮಧ್ಯೆ ಅಪಘಾತ ಸಂಭವಿಸಿ ಓರ್ವ ಮೃತಪಟ್ಟಿರುವ ಘಟನೆ ಮಂಗಳೂರು ಮೂಡಬಿದ್ರೆ ಹೆದ್ದಾರಿಯ ಕೈಕಂಬ ಪೊಳ್ಯ ಹೋಟೆಲ್ ಬಳಿ ರವಿವಾರ ವರದಿಯಾಗಿದೆ.
ಮೃತರನ್ನು ಮುಲ್ಕಿ ಕೆರೆಕಾಡು ನಿವಾಸಿ ಪ್ರವೀಣ್ ಎಂದು ಗುರುತಿಸಲಾಗಿದೆ.
ಪ್ರವೀಣ್ ಅವರು ಮೂಡಬಿದ್ರೆಯಿಂದ ವಾಮಂಜೂರಿನ ತನ್ನ ಸಂಬಂಧಿಕರ ಮನೆಯಲ್ಲಿ ನಡೆಯುತ್ತಿದ್ದ ಔತಣಕೂಟಕ್ಕೆ ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಅಪಘಾತದ ರಭಸಕ್ಕೆ ಪ್ರವೀಣ್ ಅವರು ಕಾರಿನ ಬಾಗಿಲಿಗೆ ಢಿಕ್ಕಿ ಹೊಡೆದಿದ್ದು ತಲೆ ಮತ್ತು ಕಣ್ಣಿಗೆ ಗಾಯಗಳಾಗಿದ್ದವು. ತಕ್ಷಣ ಸ್ಥಳೀಯರು ಅವರನ್ನು ಕೈಕಂಬದ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಅಲ್ಲಿನ ವೈದ್ಯರು ಮಂಗಳೂರಿಗೆ ಸಾಗಿಸುವಂತೆ ಸೂಚನೆ ನೀಡಿದ್ದರು. ಅದರಂತೆ ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿತ್ತು. ಆಸ್ಪತ್ರೆಯಲ್ಲಿ ಪ್ರವೀಣ್ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Next Story