ಪ್ರವಾದಿ ಅವರ ನಿಂದನೆ: ಪೊಲೀಸರ ಮುಂದೆ ಹಾಜರಾಗಲು ಕಾಲಾವಕಾಶ ಕೋರಿದ ನೂಪುರ್ ಶರ್ಮಾ
Photo: PTI
ಥಾಣೆ, ಜೂ. 13: ಪ್ರವಾದಿ ಮುಹಮ್ಮದ್ ಅವರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿ ಅಮಾನತುಗೊಂಡ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರು ಹೇಳಿಕೆ ದಾಖಲಿಸಲು ಮಹಾರಾಷ್ಟ್ರದ ಭಿವಂಡಿ ಪೊಲೀಸರ ಮುಂದೆ ಹಾಜರಾಗಲು ಕಾಲಾವಕಾಶ ಕೋರಿದ್ದಾರೆ.
ಪ್ರವಾದಿ ಮುಹಮ್ಮದ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ನೂಪುರ್ ಶರ್ಮಾ ವಿರುದ್ಧ ಥಾಣೆ ಜಿಲ್ಲೆಯ ಭಿವಂಡಿ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ನೂಪುರ್ ಶರ್ಮಾ ಅವರಿಗೆ ಹೇಳಿಕೆ ದಾಖಲಿಸಲು ಕಾಲಾವಕಾಶ ನೀಡಲಾಗಿದೆ. ಆದುದರಿಂದ ಅವರು ಭಿವಂಡಿ ಪೊಲೀಸ್ ಠಾಣೆಯಲ್ಲಿ ಹಾಜರಾಗಿಲ್ಲ ಎಂದು ಅವರು ತಿಳಿಸಿದ್ದಾರೆ. ಆದರೆ, ಶರ್ಮಾ ಅವರಿಗೆ ನೀಡಲಾದ ಕಾಲಾವಕಾಶವನ್ನು ಸ್ಪಷ್ಟಪಡಿಸಿಲ್ಲ. ರಝಾ ಅಕಾಡೆಮಿ ಪ್ರತಿನಿಧಿ ಮೇ 30ರಂದು ದಾಖಲಿಸಿದ ದೂರಿನ ಹಿನ್ನೆಲೆಯಲ್ಲಿ ಥಾಣೆ ಜಿಲ್ಲೆಯ ಭಿವಂಡಿ ಪೊಲೀಸರು ನೂಪುರ್ ಶರ್ಮಾ ಅವ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಪ್ರವಾದಿ ಮುಹಮ್ಮದ್ ಅವರ ವಿರುದ್ಧ ವಿವಾದಾತ್ಮಕ ಟ್ವೀಟ್ ಮಾಡಿದ ಹಿನ್ನೆಲೆಯಲ್ಲಿ ವಜಾಗೊಂಡ ಬಿಜೆಪಿ ನಾಯಕ ನವೀನ್ ಜಿಂದಾಲ್ ಅವರ ವಿರುದ್ಧ ಕೂಡ ಪ್ರಕರಣ ದಾಖಲಿಸಲಾಗಿದೆ. ಜೂನ್ 15ರಂದು ಹೇಳಿಕೆ ದಾಖಲಿಸುವಂತೆ ಅವರಿಗೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.