ಜೂ.24-26: ಪುತ್ತೂರಿನಲ್ಲಿ ರಾಜ್ಯಮಟ್ಟದ ಫಿಡೆ ರೇಟೆಡ್ ಚೆಸ್ ಚಾಂಪಿಯನ್ಶಿಪ್
ಪುತ್ತೂರು: ತಾಲೂಕು ಚೆಸ್ ಎಸೋಸಿಯೇಶನ್ ವತಿಯಿಂದ ಒಕ್ಕಲಿಗ ಗೌಡ ಸೇವಾ ಸಂಘದ ಸಹಕಾರದೊಂದಿಗೆ ಯು-17 ರಾಜ್ಯಮಟ್ಟದ ಫಿಡೆ ರೇಟೆಡ್ ಚೆಸ್ ಚಾಂಪಿಯನ್ಶಿಪ್ ಜೂ.24, 25 ಮತ್ತು 26 ರಂದು ಮೂರು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ತಾಲೂಕು ಚೆಸ್ ಎಸೋಸಿಯೇಶನ್ ಅಧ್ಯಕ್ಷೆ ಉಮಾ ಡಿ. ಪ್ರಸನ್ನ ತಿಳಿಸಿದ್ದಾರೆ.
ಅವರು ಬುಧವಾರ ಪುತ್ತೂರು ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚೆಸ್ ಮಾನಸಿಕ ಖಿನ್ನತೆಯನ್ನು ಹೋಗಲಾಡಿರುವುದರ ಜತೆ ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ. ಪುತ್ತೂರಿನ ಸ್ಪರ್ಧಾಳುಗಳಿಗೆ ಹೆಚ್ಚಿನ ಅವಕಾಶ ದೊರೆಯಬೇಕೆಂಬ ಉದ್ದೇಶದಿಂದ ಈ ಕ್ರೀಡೆಯನ್ನು ಪುತ್ತೂರಿನಲ್ಲಿ ಆಯೋಜಿಸಲಾಗುತ್ತಿದೆ. ಮಂಡ್ಯ, ಮೈಸೂರು, ಶಿವಮೊಗ್ಗ, ಬೆಂಗಳೂರಿನಲ್ಲಿ ನಡೆಯುತ್ತಿದ್ದ ರಾಜ್ಯಮಟ್ಟದ ಚೆಸ್ ಚಾಂಪಿಯನ್ ಶಿಪ್ ಈ ಬಾರಿ ಪೂತ್ತೂರಿನಲ್ಲಿ ನಡೆಯುವ ಮೂಲಕ ಪ್ರಥಮ ಬಾರಿಗೆ ಅವಕಾಶ ಲಭಿಸಿದೆ. ಮೂರು ದಿನಗಳ ಕಾಲ ನಡೆಯುವ ಚಾಂಪಿಯನ್ಶಿಪ್ನಲ್ಲಿ ರಾಜ್ಯದಿಂದ ಸುಮಾರು 200 ಸ್ಪರ್ಧಾಳುಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಈ ಚಾಂಪಿಯನ್ ಶಿಪ್ 15 ವರ್ಷಕ್ಕಿಂತ ಕೆಳಗಿನವರಿಗೆ ನಡೆಯಲಿದ್ದು, ಒಟ್ಟು 9 ಸುತ್ತಿನಲ್ಲಿ ಸ್ಪರ್ಧೆ ನಡೆಯಲಿದೆ.
ಹುಡುಗರು ಹಾಗೂ ಹುಡುಗಿಯವರ ವಿಭಾಗದಲ್ಲಿ ಮೊದಲ ಎರಡು ಸ್ಥಾನ ಪಡೆದವರನ್ನು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ ಮಾಡಲಾಗುತ್ತದೆ. ಈ ಸ್ಫರ್ಧಾಳುಗಳ ಶುಲ್ಕವನ್ನು ಸಂಸ್ಥೆಯೇ ಭರಿಸಲಿದೆ ಎಂದು ತಿಳಿಸಿದರು.
ಈ ಸ್ಪರ್ಧಾ ಕೂಟವು ಆಲ್ ಇಂಡಿಯಾ ಚೆಸ್ ಫೆಡರೇಶನ್, ಕರ್ನಾಟಕ ಸ್ಟೇಟ್ ಚೆಸ್ ಎಸೋಸಿಯೇಶನ್ ಹಾಗೂ ದಕ್ಷಿಣ ಕನ್ನಡ ಚೆಸ್ ಎಸೋಸಿಯೇಶನ್ನ ನಿರ್ದೇಶಾನುಸಾರ ಅಂತರಾಷ್ಟ್ರೀಯ ಚೆಸ್ ನಿರ್ಣಾಯಕರುಗಳ ಮಾರ್ಗದರ್ಶನದಲ್ಲಿ ನಡೆಯಲಿದ್ದು, ಅರ್ಹ ಸ್ಪರ್ಧಾಳುಗಳಿಗೆ ಫಿಡೆ ರೇಟಿಂಗ್ ದೊರೆಯಲಿದೆ. ಸ್ಪರ್ಧಾಳುಗಳಿಗೆ 750 ರೂ. ಶುಲ್ಕವನ್ನು ವಿಧಿಸಲಾಗುವುದು ಎಂದು ತಿಳಿಸಿದರು.
ಬೆಳಗ್ಗೆ 9.30 ಕ್ಕೆ ಸ್ಪರ್ಧೆಯ ಉದ್ಘಾಟನೆಯನ್ನು ಶಾಸಕ ಸಂಜೀವ ಮಠಂದೂರು ನೆರವೇರಿಸಲಿದ್ದಾರೆ. 10.30 ಕ್ಕೆ ಸ್ಪರ್ಧೆ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ತಾಲೂಕು ಚೆಸ್ ಎಸೋಸಿಯೇಶನ್ನ ಕಾರ್ಯದರ್ಶಿ ದಾಮೋದರ ಕಣಜಾಲು, ಟ್ರೆಜರರ್ ಸೀಮಾ ಶರ್ಮ, ಸದಸ್ಯ ಎಸ್.ಎಂ.ಪ್ರಸಾದ್, ಕೋ ಓರ್ಡಿನೇಟರ್ ದಿನೇಶ್ ಪ್ರಸನ್ನ ಉಪಸ್ಥಿತರಿದ್ದರು.