ಪ್ರತಿಭಟನಾಕಾರರ ಪೋಸ್ಟರ್ ಅಳವಡಿಸಿದ್ದ ಪೊಲೀಸರಿಗೆ ಶೋಕಾಸ್ ನೋಟೀಸ್ ನೀಡಿದ ಜಾರ್ಖಂಡ್ ಮುಖ್ಯ ಕಾರ್ಯದರ್ಶಿ

File Photo: PTI
ರಾಂಚಿ: ಉಚ್ಛಾಟಿತ ಬಿಜೆಪಿ ನಾಯಕಿ ನೂಪುರ್ ಶರ್ಮ ಅವರು ಪ್ರವಾದಿ ಕುರಿತು ಮಾಡಿದ ನಿಂದನಾತ್ಮಕ ಹೇಳಿಕೆಯನ್ನು ವಿರೋಧಿಸಿ ಜೂನ್ 10 ರಂದು ಜಾರ್ಖಂಡ್ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ 33 ʻಶಂಕಿತರʼ ಚಿತ್ರಗಳುಳ್ಳ ಪೋಸ್ಟರ್ಗಳನ್ನು ಪೊಲೀಸರು ಮಂಗಳವಾರ ಹಾಕಿದ ಮರುದಿನವೇ ರಾಜ್ಯದ ಹೇಮಂತ್ ಸೊರೇನ್ ಸರಕಾರದ ಮುಖ್ಯ ಕಾರ್ಯದರ್ಶಿ ರಾಜೀವ್ ಅರುಣ್ ಎಕ್ಕಾ ಅವರು ರಾಂಚಿಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸುರೇಂದ್ರ ಝಾ ಶೋಕಾಸ್ ನೋಟಿಸ್ ನೀಡಿ ಪೋಸ್ಟರ್ ಹಾಕಿದ ಕ್ರಮದ ಕುರಿತು ಸ್ಪಷೀಕರಣ ಕೇಳಿದ್ದಾರೆ.
ಜಾರ್ಖಂಡ್ ರಾಜ್ಯಪಾಲ ರಮೇಶ್ ಬಾಯಿಸ್ ಅವರ ಸೂಚನೆಯ ಮೇರೆಗೆ ಪೊಲೀಸರು ಆರೋಪಿಗಳ ಚಿತ್ರ, ಹೆಸರು, ವಿಳಾಸಗಳನ್ನೊಳಗೊಂಡ ಪೋಸ್ಟರ್ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸಿದ್ದರು. ಆದರೆ ಅದೇ ದಿನ ʻತಾಂತ್ರಿಕ ಕಾರಣಗಳನ್ನುʼ ಮುಂದೊಡ್ಡಿ ಅವುಗಳನ್ನು ತೆಗೆದುಹಾಕಲಾಗಿತ್ತು.
ರಾಜ್ಯದ ಗೃಹ ಕಾರ್ಯದರ್ಶಿಯೂ ಆಗಿರುವ ಎಕ್ಕ ಅವರು ಝಾ ಗೆ ಬರೆದ ಪತ್ರದಲ್ಲಿ ಒಂದು ಪಿಐಎಲ್ಗೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ಮಾರ್ಚ್ 9, 2020ರಂದು ಹೊರಡಿಸಿದ ಆದೇಶದಲ್ಲಿ ವೈಯಕ್ತಿಕ ಮಾಹಿತಿಯಿರುವ ಪೋಸ್ಟರ್ಗಳನ್ನು ಅಳವಡಿಸುವುದು ಅಕ್ರಮ ಎಂದು ಹೇಳಿರುವುದನ್ನು ಉಲ್ಲೇಖಿಸಿದ್ದಾರೆ.







