ಆನ್ಲೈನ್ನಲ್ಲಿ ವಾಹನ ಮಾರಾಟ, ಖರೀದಿ ನೆಪದಲ್ಲಿ ವಂಚನೆ: ಆರೋಪಿಯ ಬಂಧನ
ಬೆಂಗಳೂರು, ಜೂ.16: ಆನ್ಲೈನ್ ಮೂಲಕ ವಾಹನ ಮಾರಾಟ, ಖರೀದಿ ಮಾಡುವ ವ್ಯಕ್ತಿಗಳನ್ನು ಸಂಪರ್ಕಿಸಿ, ಹಣ ಪಡೆದು ವಂಚನೆ ಮಾಡುತ್ತಿದ್ದ ಆರೋಪದಡಿ ವ್ಯಕ್ತಿವೋರ್ವನನ್ನು ಇಲ್ಲಿನ ಈಶಾನ್ಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಕನಕಪುರದ ತಾಲೂಕಿನ ಕಡವೆಕೆರೆದೊಡ್ಡಿಯ ಮಂಜುನಾಥ ಎನ್.(30) ಬಂಧಿತ ಆರೋಪಿಯಾಗಿದ್ದಾನೆ ಎಂದು ಡಿಸಿಪಿ ಡಾ.ಅನೂಪ್ ಎ.ಶೆಟ್ಟಿ ತಿಳಿಸಿದ್ದಾರೆ.
ವಿದ್ಯಾರಣ್ಯಪುರದ ದೊಡ್ಡಬೊಮ್ಮಸಂದ್ರದ ಆದರ್ಶ ಎಂಬುವರು ಬೈಕ್ ಅನ್ನು ಮಾರಾಟ ಮಾಡುವುದಾಗಿ ಓಎಲ್ಎಕ್ಸ್ ಆ್ಯಪ್ನಲ್ಲಿ ಜಾಹೀರಾತು ಹಾಕಿದ್ದು, ಅದನ್ನು ನೋಡಿದ ಅರೋಪಿಯು ಬಂದು ಟೆಸ್ಟ್ಡ್ರೈವ್ ಮಾಡುವುದಾಗಿ ಹೇಳಿ ತೆಗೆದುಕೊಂಡುಹೋಗಿದ್ದು, ವಾಪಸ್ಸು ತಂದು ಕೊಡದೇ ಮೋಸ ಮಾಡಿದ್ದಾರೆ. ಈ ಸಂಬಂಧ ಆದರ್ಶ ನೀಡಿದ ದೂರು ದಾಖಲಿಸಿ ಕಾರ್ಯಾಚರಣೆ ಕೈಗೊಂಡ ಪೊಲೀಸರು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತನಿಂದ 3 ಕಾರುಗಳು, 1 ದ್ವಿಚಕ್ರ ವಾಹನ, ಕೃತ್ಯಕ್ಕೆ ಬಳಸುತ್ತಿದ್ದ ವಿವಿಧ ಮಾದರಿಯ 5 ಮೊಬೈಲ್ಗಳು, ವಾಹನಗಳ ನಕಲಿ ಸಂಖ್ಯಾ ಫಲಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.