ಚಿಕ್ಕಮಗಳೂರು: ಪತ್ನಿಯ ತಲೆಗೆ ದೊಣ್ಣೆಯಿಂದ ಹೊಡೆದು ಹತ್ಯೆ; ಆರೋಪಿ ಪರಾರಿ
ಚಿಕ್ಕಮಗಳೂರು: ಕೌಟುಂಬಿಕ ಕಲಹದಿಂದಾಗಿ ಪತಿ-ಪತ್ನಿ ನಡುವೆ ನಡೆದ ಗಲಾಟೆ ವೇಳೆ ಪತ್ನಿಯ ತಲೆಗೆ ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಜಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ನಡೆದಿದೆ.
ಜಯಪುರ ಸಮೀಪದ ತಲವಾನೆ ಎಸ್ಟೇಟ್ ನಲ್ಲಿ ಕೂಲಿ ಕಾರ್ಮಿಕಳಾಗಿದ್ದ ರಾಧಾ ಹತ್ಯೆಯಾದ ಮಹಿಳೆಯಾಗಿದ್ದು, ಪತಿ ಹಾಲಪ್ಪ ಹತ್ಯೆ ಮಾಡಿದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ತಲವಾನೆ ಎಸ್ಟೇಟ್ ಗೆ ಹಾಲಪ್ಪ ಮತ್ತು ರಾಧ ದಂಪತಿ ಕೂಲಿ ಕೆಲಸಕ್ಕೆ ಬಂದು, ಕೂಲಿ ಲೈನ್ ನಲ್ಲಿ ವಾಸವಾಗಿದ್ದರು. ಪತಿ-ಪತ್ನಿಯ ನಡುವೆ ಕೌಟುಂಬಿಕ ಕಲಹ ಇದ್ದು, ಇದೇ ವಿಚಾರಕ್ಕಾಗಿ ಗುರುವಾರ ರಾತ್ರಿ ಇಬ್ಬರ ನಡುವೆ ಜಗಳ ನೆಡೆದಿದೆ. ಜಗಳ ತಾರಕಕ್ಕೇರಿದ ಪರಿಣಾಮ ಪತಿ ಹಾಲಪ್ಪ ಪತ್ನಿಯ ತಲೆಗೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಬಳಿಕ ಆರೋಪಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
Next Story