ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಹೋದರನ ಮನೆ ಮೇಲೆ ಸಿಬಿಐ ದಾಳಿ
ಎಲ್ಲ ಮಿತಿಗಳನ್ನು ಮೀರಿದ ಸೇಡಿನ ರಾಜಕಾರಣ: ಕಾಂಗ್ರೆಸ್

ಅಗ್ರಸೇನ್ ಗೆಹ್ಲೋಟ್, Photo: instagram
ಹೊಸದಿಲ್ಲಿ: ಭ್ರಷ್ಟಾಚಾರದ ಹೊಸ ಪ್ರಕರಣದಲ್ಲಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಸಹೋದರ ಅಗ್ರಸೇನ್ ಗೆಹ್ಲೋಟ್ ಅವರ ಮನೆ ಮೇಲೆ ಶುಕ್ರವಾರ ದಾಳಿ ನಡೆಸಿದ ಕೇಂದ್ರ ತನಿಖಾ ದಳವು (ಸಿಬಿಐ) ಶೋಧ ಕಾರ್ಯ ನಡೆಸಿದೆ.
ತನಿಖಾ ಸಂಸ್ಥೆ ತಂಡವು ಅಗ್ರಸೇನ್ ಗೆಹ್ಲೋಟ್ ಅವರ ವ್ಯವಹಾರ ಕಚೇರಿಗೂ ತೆರಳಿದೆ ಎಂದು ಮೂಲಗಳು ತಿಳಿಸಿವೆ.
ರಸಗೊಬ್ಬರ ರಫ್ತು ಪ್ರಕರಣದಲ್ಲಿ ಅವ್ಯವಹಾರ ನಡೆಸಿದ ಆರೋಪದಲ್ಲಿ ಅಗ್ರಸೇನ್ ಗೆಹ್ಲೋಟ್ ಅವರು ಈಗಾಗಲೇ ಜಾರಿ ನಿರ್ದೇಶನಾಲಯ ಅಥವಾ ಈಡಿಯ ವಿಚಾರಣೆ ಎದುರಿಸುತ್ತಿದ್ದಾರೆ . 2007 ಮತ್ತು 2009ರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗೊಬ್ಬರವನ್ನು ಅಕ್ರಮವಾಗಿ ರಫ್ತು ಮಾಡಲಾಗಿದೆ ಎಂದು ಈಡಿ ಆರೋಪಿಸಿದೆ.
“ಇದು ಎಲ್ಲ ಮಿತಿಗಳನ್ನು ಮೀರಿದ ಸೇಡಿನ ರಾಜಕಾರಣ. ಕಳೆದ ಮೂರು ದಿನಗಳಿಂದ ದಿಲ್ಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಅಶೋಕ್ ಗೆಹ್ಲೋಟ್ ಮುಂಚೂಣಿಯಲ್ಲಿದ್ದರು ಹಾಗೂ ಇದು ಮೋದಿ ಸರಕಾರದ ಲಜ್ಜೆಗೆಟ್ಟ ಪ್ರತಿಕ್ರಿಯೆಯಾಗಿದೆ. ನಾವು ಮೌನವಾಗಿರುವುದಿಲ್ಲ ”ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.
ಪಕ್ಷದ ನಾಯಕ ರಾಹುಲ್ ಗಾಂಧಿಯವರನ್ನು ಈಡಿ ಪ್ರಶ್ನಿಸಿರುವುದರ ವಿರುದ್ಧ ಕಾಂಗ್ರೆಸ್ ಪ್ರತಿಭಟನೆಯನ್ನು ಉಲ್ಲೇಖಿಸಿ ರಮೇಶ್ ಟ್ವೀಟಿಸಿದ್ದಾರೆ.







