ಪ್ರತಿಯೊಬ್ಬರಿಗೂ ಕಾನೂನಿನ ಮಾಹಿತಿ, ಜ್ಞಾನದ ಅಗತ್ಯ: ನ್ಯಾ.ಶರ್ಮಿಲಾ

ಉಡುಪಿ : ರಾಜ್ಯ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಉಡುಪಿ ವಕೀಲರ ಸಂಘ ಮತ್ತು ಉಡುಪಿ ಸರಕಾರಿ ಬಾಲಕಿಯರ ಪ್ರೌಢಶಾಲೆ ಮತ್ತು ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಕಾನೂನು ಅರಿವು ಕಾರ್ಯಕ್ರಮ ಶನಿವಾರ ಕಾಲೇಜಿನಲ್ಲಿ ಜರಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿಯ ಹಿರಿಯ ಸಿವಿಲ್ ನ್ಯಾಯಾಧೀಶೆ ಶರ್ಮಿಲಾ ಎಸ್. ಮಾತನಾಡಿ, ಪ್ರತಿಯೊಬ್ಬರಿಗೂ ಕಾನೂನಿನ ಮಾಹಿತಿ ಮತ್ತು ಜ್ಞಾನದ ಅವಶ್ಯಕತೆ ಇದೆ. ಮಕ್ಕಳು ಇದರ ಬಗ್ಗೆ ತಿಳಿದು ಕೊಳ್ಳಬೇಕಾಗಿದೆ. ಕಾನೂನು ಸೇವಾ ಪ್ರಾಧಿಕಾರ ಈ ನಿಟ್ಟಿನಲ್ಲಿ ಎಲ್ಲ ರೀತಿಯ ಸಹಕಾರ ನೀಡುತ್ತದೆ ಎಂದು ಹೇಳಿದರು.
ಮಕ್ಕಳ ಹಕ್ಕುಗಳು ಮತ್ತು ರಕ್ಷಣೆ ಕುರಿತು ಮಾಹಿತಿ ನೀಡಿದ ವಕೀಲರ ಸಂಘದ ಅಧ್ಯಕ್ಷ ಬಿ.ನಾಗರಾಜ್, ಭ್ರೂಣಾವಸ್ಥೆಯಲ್ಲಿರುವ ಮಗುವಿನಿಂದ ಹಿಡಿದು ಮರಣದ ತನಕ ನಮ್ಮನ್ನು ಕಾನೂನು ಎಲ್ಲ ರೀತಿಯಲ್ಲೂ ಪ್ರಭಾವಿಸುತ್ತದೆ ಎಂದರು. ಮಕ್ಕಳ ಹಕ್ಕುಗಳ ರಕ್ಷಣೆ, ಫೋಕ್ಸೋ ಕಾಯಿದೆ ಬಗ್ಗೆ, ಮಕ್ಕಳ ರಕ್ಷಣೆ ನ್ಯಾಯ ವ್ಯವಸ್ಥೆ ಬಗ್ಗೆ ವಿದ್ಯಾರ್ಥಿಗಳಿಗೆ ಸವಿವರವಾಗಿ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ವಕೀಲ ಗಿರೀಶ್ ಐತಾಳ್, ಕಾಲೇಜು ಪ್ರಾಂಶುಪಾಲೆ ಜಯಲಕ್ಷ್ಮೀ ಮೊದಲಾದವರು ಉಪಸ್ಥಿತರಿದ್ದರು.