ಮಣ್ಣಿನ ಸಂರಕ್ಷಣೆ ಬಗ್ಗೆ ಪಠ್ಯ ಪುಸ್ತಕದಲ್ಲಿ ಸೇರ್ಪಡೆ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್

ಬೆಂಗಳೂರು, ಜೂ. 19: ‘ಭೂಮಿ ಮೇಲಿನ ಜೀವ ಸಂಕುಲದ ಉಳಿವಿಗೆ ಅತ್ಯಗತ್ಯವಾಗಿರುವ ಮಣ್ಣು ಹಾಗೂ ‘ಮಣ್ಣಿನ ಸಂರಕ್ಷಣೆ’ಯ ಮಹತ್ವದ ಕುರಿತು ಶಾಲಾ ಪಠ್ಯದಲ್ಲಿ ಮುಂಬರುವ ವರ್ಷಗಳಲ್ಲಿ ಪಾಠವನ್ನು ಸೇರ್ಪಡೆ ಮಾಡಲು ಪ್ರಯತ್ನಿಸಲಾಗುವುದು' ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.
ರವಿವಾರ ಈಶ ಫೌಂಡೇಶನ್ವತಿಯಿಂದ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ‘ಮಣ್ಣು ಉಳಿಸಿ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಅತಿಯಾದ ಕೀಟನಾಶಕ, ರಸಾಯನಿಕಗಳ ಬಳಕೆಯಿಂದ ದಿನದಿಂದ ದಿನಕ್ಕೆ ಮಣ್ಣು ಹಾಳಾಗುತ್ತಿದೆ. ಹೀಗಾಗಿ, ಜೀವ ಸಂಕುಲದ ಉಳಿವಿಗೆ ಮಣ್ಣಿನ ಅಗತ್ಯತೆ ಕುರಿತು ದೇಶ-ವಿದೇಶಗಳಲ್ಲಿ ಜಾಗೃತಿ ಮೂಡಿಸುವ ಮಹತ್ವದ ಕಾರ್ಯವನ್ನು ಸದ್ಗುರು ಜಗ್ಗಿ ವಾಸುದೇವ್ ಮಾಡುತ್ತಿದ್ದಾರೆ' ಎಂದು ಹೇಳಿದರು.
‘ವಾಸುದೇವ್ ಅವರು ಮಣ್ಣು ಸಂರಕ್ಷಣೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ನಮ್ಮ ಜವಾಬ್ದಾರಿಯನ್ನು ಇಡೀ ಜಗತ್ತಿಗೆ ಜ್ಞಾಪಿಸುವ ಪ್ರಯತ್ನವನ್ನು ಸದ್ಗುರು ಮಾಡುತ್ತಿದ್ದಾರೆ. ನೆಲ, ಜಲ ಸಂರಕ್ಷಣೆಯ ಭಾಗವಾಗಿ ಮಣ್ಣಿನ ಸಂರಕ್ಷಣೆಯು ಪ್ರತಿಯೊಬ್ಬರು ಜವಾಬ್ದಾರಿಯಾಗಿದೆ. ಇತರ ಎಲ್ಲ ದೇಶಗಳಿಗಿಂತ ನಮ್ಮ ಭಾರತ ವಿಭಿನ್ನ ಮತ್ತು ವಿಶೇಷವಾದ ರಾಷ್ಟ್ರವಾಗಿದೆ' ಎಂದು ನುಡಿದರು.
‘ಪಂಚಭೂತಗಳು ದೇವರು ಎಂದು ನಂಬಿರುವ ದೇಶ ನಮ್ಮದು. ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದಾಗ ಸಾವಯವ ಕೃಷಿಗೆ ಉತ್ತೇಜನ ನೀಡಿದ್ದರು. ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರವು ಮಣ್ಣಿನ ಫಲವತ್ತತೆ ಉಳಿಸಿಕೊಳ್ಳುವುದು ಹಾಗೂ ಸಾವಯವ ಕೃಷಿಗೆ ಉತ್ತೇಜನ ನೀಡುತ್ತಿದೆ’ ಎಂದು ನಾಗೇಶ್ ಹೇಳಿದರು.
‘ನೆಲ, ಜಲ, ಪರಿಸರ ಸಂರಕ್ಷಣೆ, ಮಣ್ಣಿನ ಮಹತ್ವವನ್ನು ಮಕ್ಕಳಿಗೆ ತಿಳಿಸುವ ಪ್ರಯತ್ನಗಳು ಆಗಬೇಕೆಂದು ಸದ್ಗುರು ಅಭಿಪ್ರಾಯಪಟ್ಟಿದ್ದರು. ಪರಿಸರ ಮಾಲಿನ್ಯ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಮಣ್ಣಿಗೆ ಹೆಚ್ಚಿನ ಮಹತ್ವ ನೀಡಬೇಕಿದೆ. ಮುಂಬರುವ ವರ್ಷಗಳಲ್ಲಿ ಪಠ್ಯ ಪುಸ್ತಕದಲ್ಲಿ ಮಣ್ಣಿನ ಸಂರಕ್ಷಣೆ ಕುರಿತು ಪಾಠವನ್ನು ಸೇರಿಸುವ ಪ್ರಯತ್ನ ಮಾಡಲಾಗುವುದು’ ಎಂದು ನಾಗೇಶ್ ನುಡಿದರು.







