ರಾಷ್ಟ್ರಗೀತೆ ಹಾಡಲು ಒತ್ತಾಯಿಸಿ ಹಲ್ಲೆಗೈದ ಆರೋಪಿ ಪೊಲೀಸರನ್ನು ಗುರುತಿಸಲು 2 ವರ್ಷದ ಬಳಿಕ ನಗದು ಬಹುಮಾನ ಘೋಷಣೆ
ಹೊಸದಿಲ್ಲಿ: ರಾಜಧಾನಿಯ ಈಶಾನ್ಯ ಭಾಗದಲ್ಲಿ ಫೆಬ್ರವರಿ 2020 ರಲ್ಲಿ ನಡೆದ ಹಿಂಸಾಚಾರ ವೇಳೆ ವಂದೇ ಮಾತರಂ ಮತ್ತು ರಾಷ್ಟ್ರಗೀತೆ ಹಾಡಿ ಎಂದು ಪೊಲೀಸರು ನೆಲದಲ್ಲಿ ಗಾಯಗೊಂಡು ಬಿದ್ದಿದ್ದ ಯುವಕರಿಗೆ ಬಲವಂತಪಡಿಸುತ್ತಿರುವ ವೀಡಿಯೋ ಸಾಕಷ್ಟು ಸುದ್ದಿ ಮಾಡಿತ್ತು. ಈ ವೀಡಿಯೋದಲ್ಲಿ ಕಾಣಿಸಿಕೊಂಡಿದ್ದ ಯುವಕರಲ್ಲೊಬ್ಬನಾದ 23 ವರ್ಷದ ಫೈಝಾನ್ ಮೃತಪಟ್ಟು ಎರಡು ವರ್ಷಗಳು ಸಂದ ನಂತರ ಈ ಪ್ರಕರಣದಲ್ಲಿ ಶಾಮೀಲಾಗಿರುವ ಪೊಲೀಸ್ ಸಿಬ್ಬಂದಿಯ ಕುರಿತು ಮಾಹಿತಿ ನೀಡಿದವರಿಗೆ ರೂ. 1 ಲಕ್ಷ ಬಹುಮಾನ ನೀಡಲು ದಿಲ್ಲಿ ಪೊಲೀಸರ ಕ್ರೈಂ ಬ್ರ್ಯಾಂಚ್ ನಿರ್ಧರಿಸಿದೆ ಎಂದು indianexpress.com ವರದಿ ಮಾಡಿದೆ.
ಆರೋಪಿಗಳ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲು ಪೊಲೀಸರು ವಿಫಲರಾದ ನಂತರದ ಬೆಳವಣಿಗೆ ಇದಾಗಿದೆ.
ಫೈಝಾನ್ ಮತ್ತು ಇತರ ನಾಲ್ಕು ಮಂದಿಯನ್ನು ಪೊಲೀಸರು ಠಾಣೆಗೆ ಕರೆಸಿ ಅಲ್ಲಿ ಹಲ್ಲೆ ನಡೆಸಿದ್ದಾರೆನ್ನಲಾಗಿದ್ದು ಬಿಡುಗಡೆಗೊಳಿಸಿದ ಮರುದಿನವೇ ಫೈಝಾನ್ ಆಸ್ಪತ್ರೆಯಲ್ಲಿ ಫೆಬ್ರವರಿ 26, 2020ರಂದು ಮೃತಪಟ್ಟಿದ್ದ.
ಈ ಸಂಬಂಧ ಕ್ರೈಂ ಬ್ರ್ಯಾಂಚ್ ಸುಮಾರು 250 ಪೊಲೀಸ್ ಸಿಬ್ಬಂದಿಯನ್ನು ಪ್ರಶ್ನಿಸಿ ಹಲವಾರು ದಾಖಲೆಗಳನ್ನು,ಸಿಬ್ಬಂದಿಯ ಡ್ಯುಟಿ ಚಾರ್ಟ್ಗಳನ್ನು ಪರಿಶೀಲಿಸಿದ್ದರೂ ಪ್ರಯೋಜನವಾಗಿರಲಿಲ್ಲ.
ಅಂತಿಮವಾಗಿ ದಿಲ್ಲಿ ಸಶಸ್ತ್ರ ಪೊಲೀಸ್ ಪಡೆಯ ಹೆಡ್ ಕಾನ್ಸ್ಟೇಬಲ್ ಒಬ್ಬನನ್ನು ಗುರುತಿಸಿ ಪ್ರಶ್ನಿಸಲಾಯಿತಾದರೂ ಆತ ತನ್ನ ಶಾಮೀಲಾತಿಯನ್ನು ನಿರಾಕರಿಸಿದ್ದ. ಆತನ ಪಾಲಿಗ್ರಾಫ್ ಪರೀಕ್ಷೆ ಕೂಡ ನಡೆಸಲಾಯಿತು, ಅದರಿಂದಲೂ ಪ್ರಯೋಜನವಾಗಲಿಲ್ಲ, ಕೊನೆಗೆ ಆತನ ಧ್ವನಿ ಸ್ಯಾಂಪಲ್ ಸಂಗ್ರಹಿಸಿ ಲ್ಯಾಬ್ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹಿಂಸಾಚಾರ ಕುರಿತ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳನ್ನು ಬದಲಾಯಿಸಬೇಕೆಂಬ ಸೂಚನೆ ಹಿನ್ನೆಲೆಯಲ್ಲಿ ಈ ಪ್ರಕರಣದ ತನಿಖಾಧಿಕಾರಿಯನ್ನೂ ಬದಲಾಯಿಸಲಾಗಿದೆ. ಹೊಸ ತನಿಖಾಧಿಕಾರಿಯು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯ ತನಕ 95 ಪೊಲೀಸ್ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ.