ಅಗ್ನಿಪಥ್ ಯೋಜನೆ ವಿರುದ್ಧ ಭಾರತ ಬಂದ್ ಗೆ ಕರೆ: ಇಂದು 500ಕ್ಕೂ ಅಧಿಕ ರೈಲುಗಳ ಸಂಚಾರ ರದ್ದು
![ಅಗ್ನಿಪಥ್ ಯೋಜನೆ ವಿರುದ್ಧ ಭಾರತ ಬಂದ್ ಗೆ ಕರೆ: ಇಂದು 500ಕ್ಕೂ ಅಧಿಕ ರೈಲುಗಳ ಸಂಚಾರ ರದ್ದು ಅಗ್ನಿಪಥ್ ಯೋಜನೆ ವಿರುದ್ಧ ಭಾರತ ಬಂದ್ ಗೆ ಕರೆ: ಇಂದು 500ಕ್ಕೂ ಅಧಿಕ ರೈಲುಗಳ ಸಂಚಾರ ರದ್ದು](https://www.varthabharati.in/sites/default/files/images/articles/2022/06/20/339479-1655710279.jpg)
ಹೊಸದಿಲ್ಲಿ: ಸಶಸ್ತ್ರ ಪಡೆಗಳಿಗೆ ಕೇಂದ್ರ ಸರಕಾರದ ಅಲ್ಪಾವಧಿಯ ನೇಮಕಾತಿ ಯೋಜನೆ 'ಅಗ್ನಿಪಥ್' ಗೆ ಸಂಬಂಧಿಸಿದಂತೆ ಭಾರತ್ ಬಂದ್ ಗೆ ಕರೆ ನೀಡಿರುವ ನಡುವೆ ಸೋಮವಾರ 500 ಕ್ಕೂ ಹೆಚ್ಚು ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು NDTV ವರದಿ ಮಾಡಿದೆ.
ಕಳೆದ ಐದು ದಿನಗಳಿಂದ ಪ್ರತಿಭಟನಾಕಾರರು ಬೆಂಕಿ ಹಚ್ಚಿ ಗಲಭೆ ನಡೆಸಿದ್ದರಿಂದ ರೈಲ್ವೆ ಇಲಾಖೆಗೆ ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟವಾಗಿದೆ.
'ಅಗ್ನಿಪಥ್' ಯೋಜನೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಸಶಸ್ತ್ರ ಪಡೆಗಳ ಆಕಾಂಕ್ಷಿಗಳಿಗೆ ಬೆಂಬಲ ವ್ಯಕ್ತಪಡಿಸಲು ಕಾಂಗ್ರೆಸ್ ನಾಯಕರು ರಾಷ್ಟ್ರ ರಾಜಧಾನಿಯ ಜಂತರ್ ಮಂತರ್ನಲ್ಲಿ 'ಸತ್ಯಾಗ್ರಹ' ನಡೆಸಿದರು. ಸಂಚಾರ ಪೊಲೀಸರು ಹಲವು ರಸ್ತೆಗಳನ್ನು ಬಂದ್ ಮಾಡಿದ್ದರಿಂದ ದಿಲ್ಲಿಯ ಕೆಲವು ಭಾಗಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ದಿಲ್ಲಿ-ನೋಯ್ಡಾ ಡೈರೆಕ್ಟ್ ಫ್ಲೈವೇ ಮತ್ತು ದಿಲ್ಲಿ-ಗುರ್ಗಾಂವ್ ಎಕ್ಸ್ಪ್ರೆಸ್ವೇನಲ್ಲಿ ಭಾರೀ ಟ್ರಾಫಿಕ್ ಜಾಮ್ ಕಂಡುಬಂದಿದೆ.
ಶಾಂತಿಗೆ ಧಕ್ಕೆ ತರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ. ಪಂಜಾಬ್ನಲ್ಲಿ ಯೋಜನೆಯ ಬಗ್ಗೆ ಪ್ರಚೋದನೆ ನೀಡುವ ಮಾಹಿತಿಯನ್ನು ಸಜ್ಜುಗೊಳಿಸುವ ಅಥವಾ ಹರಡುವ ಸಾಮಾಜಿಕ ಮಾಧ್ಯಮ ಗುಂಪುಗಳ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಪೊಲೀಸರಿಗೆ ತಿಳಿಸಲಾಗಿದೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ಹರ್ಯಾಣ, ಕೇರಳ, ತೆಲಂಗಾಣ, ಪಶ್ಚಿಮ ಬಂಗಾಳ ಮತ್ತು ರಾಜಸ್ಥಾನದ ಹಲವು ಸ್ಥಳಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.