ಟೋಲ್ ಗೇಟ್ ನಿಂದ ಸೂಟ್ ಕೇಸ್ ಪಡೆದವರಿಂದಲೇ ನನ್ನ ಬಗ್ಗೆ ನಿರಾಧಾರ ಆರೋಪ: ಪ್ರತಿಭಾ ಕುಳಾಯಿ

ಪ್ರತಿಭಾ ಕುಳಾಯಿ
ಸುರತ್ಕಲ್: ಎನ್ಐಟಿಕೆ ಟೋಲ್ ಗೇಟ್ ನಿಂದ ಹಣದ ಸೂಟ್ ಕೇಸ್ ಪಡೆದವರೇ ನನ್ನ ಬಗ್ಗೆ ವೈಯಕ್ತಿಕ ನಿರಾಧಾರ ಆರೋಪ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಬಿಜೆಪಿ ನಾಯಕರ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
ಸುರತ್ಕಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಸುರತ್ಕಲ್ ಟೋಲ್ ವಿರೋಧಿ ಹೋರಾಟದಲ್ಲಿ ಪಾಲ್ಗೊಂಡಿದ್ದು, ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಟೋಲ್ ರದ್ದು ಗೊಳಿಸುವ ಕುರಿತು ಪ್ರಶ್ನಿಸಿದ್ದೆ. ಅದಕ್ಕಾಗಿ ನನ್ನನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ನುಡಿದರು.
ನಾನು ರಾಜಕೀಯಕ್ಕೆ ಬರುವಾಗ ಹೇಗಿದ್ದೆ, ಈಗ ಎಷ್ಟು ಆಸ್ತಿ ಸಂಪಾದನೆ ಮಾಡಿದ್ದೇನೆ ಎಂದು "ಬಿಜೆಪಿ ಯುವಮೋರ್ಚಾ ಮಂಗಳೂರು ಉತ್ತರ" ಹೆಸರಲ್ಲಿ ಪೋಸ್ಟರ್ ಅನ್ನು ಶೇರ್ ಮಾಡಲಾಗುತ್ತಿದೆ ಎಂದರು.
ಸುರತ್ಕಲ್ -ಬಿ.ಸಿ. ರೋಡ್ ರಸ್ತೆಯನ್ನು ನಾಲ್ಕು ಪಥದ ಟೋಲ್ ರಸ್ತೆಯನ್ನಾಗಿಸುವ ಯೋಜನೆ ರೂಪುಗೊಂಡಾಗ ಸಂಸದರಾಗಿ ಇದ್ದದ್ದು ನಳಿನ್ ಕುಮಾರ್ ಕಟೀಲ್. ಅಲ್ಲಿಂದ ಇಲ್ಲಿಯವರೆಗೂ ನಳಿನ್ ಕುಮಾರ್ ಕಟೀಲ್ ಅವರೇ ದಕ್ಷಿಣ ಕನ್ನಡ ಜಿಲ್ಲೆಯ ಸಂಸದರಾಗಿದ್ದಾರೆ. ಮೊದಲು ನವಮಂಗಳೂರು ಬಂದರು ಬಳಿ, ಆ ನಂತರ ಎನ್ಐಟಿಕೆ ಬಳಿ ಟೋಲ್ ಗೇಟ್ ನಿರ್ಮಿಸುವ ಪ್ರಸ್ಥಾಪ ಸಿದ್ಧಗೊಂಡಾಗ ಕ್ಷೇತ್ರದಲ್ಲಿ ಇದ್ದದ್ದು ಬಿಜೆಪಿ ಶಾಸಕರು. ಎನ್ಐಟಿಕೆ ಬಳಿ ಟೋಲ್ ಗೇಟ್ ಸ್ಥಾಪಿಸುವಾಗ ಮೊಯ್ದಿನ್ ಬಾವಾ ಶಾಸಕರಾಗಿ ಇದ್ದದ್ದು ಹೌದು. ಆದರೆ ಕೇಂದ್ರ ಸರಕಾರದ ಯೋಜನೆಯ ಭಾಗವಾದ ಟೋಲ್ ಗೇಟ್ ಎನ್ಐಟಿಕೆ ಬಳಿ ಸ್ಥಾಪನೆ ಆಗದಂತೆ ತಡೆಯಲು ಮೊಯ್ದಿನ್ ಬಾವಾ ಅವರು ಸ್ಥಳೀಯರೊಂದಿಗೆ ಸೇರಿ ಅವಿರತವಾಗಿ ಶ್ರಮಿಸಿದ್ದಾರೆ. ಕೊನೆಗೆ ಹೆದ್ದಾರಿ ಪ್ರಾಧಿಕಾರ ನ್ಯಾಯಾಲಯ ಹಾಗೂ ನಾಗರಿಕರಿಗೆ "ಸುರತ್ಕಲ್ ಟೋಲ್ ಗೇಟ್ ತಾತ್ಕಾಲಿಕ ನೆಲೆಯಲ್ಲಿ ಕಾರ್ಯಾಚರಿಸಲಿದೆ. ಹೆಜಮಾಡಿ ಟೋಲ್ ಕೇಂದ್ರ ಕಾರ್ಯಾರಂಭಗೊಂಡ ನಂತರ ಟೋಲ್ ಗೇಟ್ ತೆರವುಗೊಳಿಸಲಾಗುವುದು" ಎಂದು ಸ್ಪಷ್ಟವಾಗಿ ಹೇಳಿ ಟೋಲ್ ಗೇಟ್ ಕಾರ್ಯಾರಂಭ ಮಾಡಲಾಯಿತು.
ಆ ಸಂದರ್ಭದಲ್ಲಿ ಕೇಂದ್ರ ಸರಕಾರವನ್ನು ಪ್ರತಿನಿಧಿಸುವ ಸಂಸದ ನಳಿನ್ ಕುಮಾರ್ ಕಟೀಲ್ ಜನರ ಜೊತೆ ನಿಂತಿದ್ದರೆ ಸುರತ್ಕಲ್ ಟೋಲ್ ಗೇಟ್ ಸ್ಥಾಪನೆಗೊಳ್ಳಲು ಸಾಧ್ಯವೇ ಇರಲಿಲ್ಲ. ಕೇಂದ್ರ ಸರಕಾರದ ಹೆದ್ದಾರಿಗೆ ಸಂಬಂಧ ಪಟ್ಟ ವಿಷಯ ಸಂಸದರ ಜವಾಬ್ದಾರಿ ಆಗಿದ್ದರೂ ನಳಿನ್ ಕುಮಾರ್ ಕಟೀಲ್ ಜನರ ಜೊತೆ ನಿಲ್ಲದೆ ಟೋಲ್ ಗೇಟ್ ಲಾಬಿ ಜೊತೆ ನಿಂತರು. ಟೋಲ್ ಗೇಟ್ ಸ್ಥಾಪನೆಯ ವಿರುದ್ಧ ಹೋರಾಟ ಆರಂಭಿಸಿದ್ದು ಸುರತ್ಕಲ್ ನಾಗರಿಕ ಸಮಿತಿ ಹೊರತು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಅಲ್ಲ. ಅಂದು ನಾಗರಿಕ ಸಮಿತಿ ಕೈಯಿಂದ ಖರ್ಚು ಮಾಡಿ ಟೋಲ್ ಸ್ಥಾಪನೆ ತಡೆಯಲು ಕೈಲಾದ ಕೆಲಸ ಮಾಡಿದೆ. ಆ ನಂತರ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಆ ಹೋರಾಟವನ್ನು ಮುಂದುವರಿಸಿಕೊಂಡು ಬಂದಿದೆ. ಇದೆಲ್ಲದರ ಅರಿವಿಲ್ಲದೆ ಹಣಕಾಸು ವಿಚಾರದಲ್ಲಿ ಆರೋಪ ಮಾಡಿ ಶಾಸಕ ಭರತ್ ಶೆಟ್ಟಿ ತನ್ನ ಯೋಗ್ಯತೆಯನ್ನು ಬಯಲು ಮಾಡಿದ್ದಾರೆ. ಬಿಜೆಪಿ ಯುವಮೋರ್ಚಾ ನನ್ನ ಬಗ್ಗೆ ಇಲ್ಲಸಲ್ಲದ್ದನ್ನು ಹೇಳಿ ಜನರನ್ನು ಮಂಗ ಮಾಡುವ ಬದಲು ತನ್ನ ಶಾಸಕರನ್ನು ಸಂಸದರನ್ನು ಪ್ರಶ್ನೆ ಮಾಡಲಿ ಎಂದು ಪ್ರತಿಭಾ ಸವಾಲು ಹಾಕಿದರು.
"ಟೋಲ್ ಆಗಿದ್ದು ಕಾಂಗ್ರೆಸ್ ಸರಕಾರ ಆಡಳಿತದಲ್ಲಿ ಇದ್ದಾಗ ಅಲ್ಲ, ಬಿಜೆಪಿ ಸರಕಾರ ಆಡಳಿತ ಮಾಡುತ್ತಿದ್ದ ಸಂದರ್ಭ. ಟೋಲ್ ಬಿಜೆಪಿಯ ಜನಪ್ರತಿನಿಧಿಗಳ ಅಕ್ರಮದ ಕೂಸು".
- ಪ್ರತಿಭಾ ಕುಳಾಯಿ, ಕಾಂಗ್ರೆಸ್ ನಾಯಕಿ
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪೋಸ್ಟರ್ ಸಂಬಂಧ ಉತ್ತರಿಸಿದ ಅವರು, "ನಾನು ಹಿಂದೆ ಹೇಗಿದ್ದೀನೋ ಈಗಲೂ ಹಾಗೇ ಇದ್ದೇನೆ. ನನ್ನಲ್ಲಿ ಹಿಂದೆಯೂ ಮನೆ, ಕಾರು ಎಲ್ಲವೂ ಇತ್ತು. ನನ್ನ ತಂದೆ ಮಾಡಿರುವ ಅಸ್ತಿಯೂ ಇತ್ತು. ನಾನು ಹಿಂದೆಯೂ ತೆರಿಗೆ ಕಟ್ಟುತ್ತಾ ಬಂದಿದ್ದೇನೆ, ಈಗಲೂ ತೆರಿಗೆ ಕಟ್ಟುತ್ತಿದ್ದೇನೆ. ನನ್ನ ಆಸ್ತಿ ಹೆಚ್ಚಾಗಿದ್ದರೆ ಅದು ನನ್ನ ವ್ಯವಹಾರದಿಂದಲೇ ಹೊರತು ಇಲ್ಲಿನ ಶಾಸಕರಂತೆ ಟೋಲ್ ಗೇಟ್ ಕೊಡುವ ಸೂಟ್ ಕೇಸ್ ನಿಂದಲ್ಲ. ಅಕ್ರಮ ಟೋಲ್ ಗೇಟ್ ನಿಂದ ಸೂಟ್ ಕೇಸ್ ಪಡೆಯುವ ಬದಲು ಭಿಕ್ಷೆ ಬೇಡುತ್ತಿದ್ದರೆ ಇವರಿಗೆ ಮತಕೊಟ್ಟು ಗೆಲ್ಲಿಸಿದ ಮತದಾರರು ನೆಮ್ಮದಿಯಿಂದ ಇರುತ್ತಿದ್ದರು" ಎಂದು ಪ್ರತಿಭಾ ಕುಳಾಯಿ ಹೇಳಿದ್ದಾರೆ.