ಬೆಳೆ ಸಮೀಕ್ಷೆ, ಬೆಳೆ ವಿಮೆ ಅವಧಿ ವಿಸ್ತರಣೆಗೆ ಉಡುಪಿ ಜಿಲ್ಲಾ ಭಾಕಿಸಂ ಮನವಿ
![ಬೆಳೆ ಸಮೀಕ್ಷೆ, ಬೆಳೆ ವಿಮೆ ಅವಧಿ ವಿಸ್ತರಣೆಗೆ ಉಡುಪಿ ಜಿಲ್ಲಾ ಭಾಕಿಸಂ ಮನವಿ ಬೆಳೆ ಸಮೀಕ್ಷೆ, ಬೆಳೆ ವಿಮೆ ಅವಧಿ ವಿಸ್ತರಣೆಗೆ ಉಡುಪಿ ಜಿಲ್ಲಾ ಭಾಕಿಸಂ ಮನವಿ](https://www.varthabharati.in/sites/default/files/images/articles/2022/06/21/339630-1655816338.jpg)
ಉಡುಪಿ: ರೈತರೇ ಸ್ವತಃ ತಮ್ಮ ಭೂಮಿಯಲ್ಲಿ ಬೆಳೆಯುವ ಬೆಳೆಯ ಸಮೀಕ್ಷೆ ನಡೆಸಿ, ಮೊಬೈಲ್ ಆ್ಯಪ್ಗಳಲ್ಲಿ ದಾಖಲಿಸಿ, ಪಹಣಿಯಲ್ಲಿ ಬೆಳೆ ನೊಂದಾಯಿಸಲು ಸರಕಾರ ಅವಕಾಶ ಕಲ್ಪಿಸಿಕೊಟ್ಟಿದೆ. ಆದರೆ ಅದಕ್ಕೆ ಜೂನ್ ೩೦ ಕೊನೇ ದಿನ ಎಂದು ಘೋಷಿಸಿರುವ ಕಾರಣ ರೈತರಿಗೆ ಅದನ್ನು ಪೂರ್ಣ ಗೊಳಿಸಲು ಸಾಧ್ಯವಾಗುವುದಿಲ್ಲ.ಬೆಳೆ ಸಮೀಕ್ಷೆ ಅವಧಿಯನ್ನು ಒಂದು ತಿಂಗಳ ಕಾಲ ವಿಸ್ತರಿಸಿ ರೈತರಿಗೆ ಅವಕಾಶ ಕಲ್ಪಿಸಬೇಕು ಎಂದು ಭಾರತೀಯ ಕಿಸಾನ್ ಸಂಘದ ಉಡುಪಿ ಜಿಲ್ಲಾ ಸಮಿತಿ ಸರಕಾರಕ್ಕೆ ಮನವಿ ಮಾಡಿದೆ.
ಇಂದು ನಡೆದ ಭಾಕಿಸಂನ ಉಡುಪಿ ಜಿಲ್ಲಾ ಸಮಿಔತಿಯ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಹಿಂದೆ ಇದ್ದ ೩ ತಾಲೂಕುಗಳು ಇಂದು ೭ ತಾಲೂಕುಗಳಾಗಿ ವಿಂಗಡಣೆಯಾಗುವಾಗ ಅನೇಕ ಗ್ರಾಮಗಳನ್ನು ಒಂದು ಹೋಬಳಿಯಿಂದ ಇನ್ನೊಂದು ಹೋಬಳಿಗೆ, ಒಂದು ತಾಲೂಕಿನಿಂದ ಇನ್ನೊಂದು ತಾಲೂಕಿಗೆ ಸೇರ್ಪಡೆಗೊಳಿಸಲಾಗಿದೆ. ಆ ಕಾರಣಕ್ಕೆ ಅಂತಹ ಗ್ರಾಮಗಳಲ್ಲಿ ಬೆಳೆ ಸಮೀಕ್ಷೆ ಮಾಡಲು ರೈತರಿಗೆ ತಾಂತ್ರಿಕತೆ ಅವಕಾಶ ಕಲ್ಪಿಸುತ್ತಿಲ್ಲ. ಈ ಕಾರಣದಿಂದ ಈವರೆಗೂ ರೈತರಿಗೆ ಬೆಳೆ ಸಮೀಕ್ಷೆ ಮಾಡಲು ಸಾದ್ಯವಾಗಿಲ್ಲ. ಹೀಗಾಗಿ ಬೆಳೆ ಸಮೀಕ್ಷೆ ಅವಧಿಯನ್ನು ಒಂದು ತಿಂಗಳುಗಳ ಕಾಲ ವಿಸ್ತರಿಸ ಬೇಕು ಎಂದು ಸಭೆ ತೀರ್ಮಾನಿಸಿತು.
ಜಿಲ್ಲಾಧ್ಯಕ್ಷ ನವೀನ್ಚಂದ್ರ ಜೈನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬೆಳೆ ಸಮೀಕ್ಷೆ ಅವಧಿಯನ್ನು ವಿಸ್ತರಿಸುವಂತೆ ಜಿಲ್ಲಾಡಳಿತವನ್ನು ಕೋರಲು ಸಭೆ ತೀರ್ಮಾನಿಸಿತು.
ಅನೇಕ ವರ್ಷಗಳಿಂದ ಅಡಿಕೆ ಹಾಗೂ ಕಾಳುಮೆಣಸಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಮಾಡಿದ್ದರೂ, ಪರಿಹಾರ ಪಾವತಿಯಾಗಿಲ್ಲ. ಅಂತಹ ರೈತರಿಗೆ ಕೂಡಲೇ ಪರಿಹಾರ ಪಾವತಿಯಾಗಬೇಕು. ತೆಂಗಿನ ಕಾಯಿ ಬೆಲೆ ಕೂಡ ಅನೇಕ ವರ್ಷಗಳಲ್ಲಿಯೇ ಅತ್ಯಂತ ಕೆಳಮಟ್ಟವನ್ನು ತಲುಪಿರುವ ಬಗ್ಗೆ ಕೂಡ ಸಭೆಯಲ್ಲಿ ಚರ್ಚಿಸಲಾಯಿತು. ತೆಂಗಿನ ಕಾಯಿಗೂ ಬೆಂಬಲ ಬೆಲೆ ಘೋಷಿಸಿ ಸರಕಾರ ಕೂಡ ರೈತರ ತೆಂಗಿನಕಾಯಿಯನ್ನು ಖರೀದಿಸಲು ಮುಂದಾಗಬೇಕು ಎಂದು ಸಭೆ ಅಭಿಪ್ರಾಯ ಪಟ್ಟಿತು.
ಸಂಕಷ್ಟದಲ್ಲಿರುವ ರೈತರ ಹಿತಾಸಕ್ತಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಸಾದ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಕೋರಲು ಸಹ ಸಭೆ ತೀರ್ಮಾನಿಸಿತು.
ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ರಾಮಚಂದ್ರ ಅಲ್ಸೆ ಬೆಳ್ವೆ, ಶ್ರೀನಿವಾಸ ಭಟ್ ಇರ್ವತ್ತೂರು, ಕೋಶಾಧಿಕಾರಿ ವಾಸುದೇವ ಶ್ಯಾನುಬಾಗ್ ಪಾಂಗಾಳ, ಜಿಲ್ಲಾ ಸಮಿತಿಯ ಸದಸ್ಯರಾದ ಸುಂದರ ಶೆಟ್ಟಿ ಮುನಿಯಾಲು, ಆಸ್ತೀಕ ಶಾಸ್ತ್ರೀ ಗುಂಡ್ಮಿ, ಮೋಹನದಾಸ ಅಡ್ಯಂತಾಯ, ಅನಂತ ಪದ್ಮನಾಭ ಉಡುಪ, ಪ್ರವೀಣ್ ಶೆಟ್ಟಿ, ದೀಪಕ್ ಪೈ, ಶಂಕರನಾರಾಯಣ ಭಟ್ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಜಪ್ತಿ ಕಾರ್ಯಕ್ರಮ ನಿರ್ವಹಿಸಿ ಕೊನೆಯಲ್ಲಿ ವಂದಿಸಿದರು.