ರಾಜೀನಾಮೆಗೆ ನಾನು ತಯಾರಿದ್ದೇನೆ: ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಉದ್ಧವ್ ಠಾಕ್ರೆ ಭಾವನಾತ್ಮಕ ಮಾತು
![ರಾಜೀನಾಮೆಗೆ ನಾನು ತಯಾರಿದ್ದೇನೆ: ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಉದ್ಧವ್ ಠಾಕ್ರೆ ಭಾವನಾತ್ಮಕ ಮಾತು ರಾಜೀನಾಮೆಗೆ ನಾನು ತಯಾರಿದ್ದೇನೆ: ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಉದ್ಧವ್ ಠಾಕ್ರೆ ಭಾವನಾತ್ಮಕ ಮಾತು](https://www.varthabharati.in/sites/default/files/images/articles/2022/06/22/339743-1655907726.jpg)
ಹೊಸದಿಲ್ಲಿ: ಮಹಾರಾಷ್ಟ್ರದಲ್ಲಿ ತಮ್ಮ ಸರ್ಕಾರಕ್ಕೆ ಅಪಾಯ ತಂದೊಡ್ಡಿರುವ ಬಂಡಾಯದ ವಿರುದ್ಧ ಹೋರಾಡುತ್ತಿರುವ ಉದ್ಧವ್ ಠಾಕ್ರೆ ಅವರು ಮುಖ್ಯಮಂತ್ರಿ ಸ್ಥಾನಕ್ಕೆ "ಈಗಲೇ ರಾಜೀನಾಮೆ ನೀಡಲು ಸಿದ್ಧ" ಮತ್ತು ಒಬ್ಬ ಶಾಸಕರು ವಿರೋಧಿಸಿದರೂ ನಾನು ಸ್ಥಾನ ತ್ಯಜಿಸುವುದಾಗಿ ಹೇಳಿದ್ದಾರೆ.
ಭಾವನಾತ್ಮಕ ಭಾಷಣದಲ್ಲಿ, ಅವರ ಉನ್ನತ ನಾಯಕರೊಬ್ಬರು ಸೋಮವಾರ ರಾತ್ರಿ 21 ಶಾಸಕರೊಂದಿಗೆ ಮುಂಬೈ ತೊರೆದ ನಂತರ, ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ, ತಮ್ಮ ಪಕ್ಷದವರೇ ತಮ್ಮ ವಿರುದ್ಧ ತಿರುಗಿಬಿದ್ದಿದ್ದಕ್ಕಾಗಿ "ನೋವಿಗೊಳಗಾಗಿದ್ದೇನೆ" ಎಂದು ಹೇಳಿದರು. ಮಾತನಾಡುವ ಸಂದರ್ಭದಲ್ಲಿ ಅವರ ಧ್ವನಿ ಕಂಪಿಸುತ್ತಿದ್ದು, ಇದು ಅವರು ಕೋವಿಡ್ ನಿಂದ ಬಳಲುತ್ತಿರುವುದರಿಂದ ಆಗಿರಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
"ನಾನು ಈಗಲೇ ಮುಖ್ಯಮಂತ್ರಿ ಸ್ಥಾನವನ್ನು ತ್ಯಜಿಸಲು ಸಿದ್ಧನಿದ್ದೇನೆ. ಸ್ಥಾನಗಳು ಬರುತ್ತವೆ ಮತ್ತು ಹೋಗುತ್ತವೆ ... ಆದರೆ ಮುಂದಿನ ಮುಖ್ಯಮಂತ್ರಿ ಶಿವಸೇನೆಯಿಂದಲೇ ಎಂದು ನೀವು ನನಗೆ ಭರವಸೆ ನೀಡಬಹುದೇ" ಎಂದು ಉದ್ಧವ್ ಠಾಕ್ರೆ ಶಿವಸೇನೆ ಬಂಡುಕೋರರಿಗೆ ತೀಕ್ಷ್ಣವಾದ ಸಂದೇಶವನ್ನು ನೀಡಿದ್ದಾರೆ.
"ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆಂದು ನೀವು ಬಂದು ನನ್ನ ಮುಖ ನೋಡಿ ಹೇಳಿ. ನಾನು ಆ ಕೂಡಲೇ ಮುಖ್ಯಮಂತ್ರಿ ಸ್ಥಾನವನ್ನು ತ್ಯಜಿಸುತ್ತೇನೆ. ಮುಖ್ಯಮಂತ್ರಿ ಸ್ಥಾನವು ನನಗೆ ಆಕಸ್ಮಿಕವಾಗಿ ಬಂದಿತು. ಇದು ನನ್ನ ಹಂಬಲವಲ್ಲ" ಎಂದು ಠಾಕ್ರೆ ಹೇಳಿದ್ದಾರೆ.