ದೌರ್ಜನ್ಯದ ವಿರುದ್ಧ ಎದ್ದು ನಿಲ್ಲಿ: ಜನರಿಗೆ ಮೆಹಬೂಬಾ ಮುಫ್ತಿ ಕರೆ
"ಕೇಂದ್ರ ಸರಕಾರ ಕಾಶ್ಮೀರದಲ್ಲಿ ಪ್ಯಾಲೆಸ್ತೀನ್ ನಂತಹ ಸ್ಥಿತಿ ನಿರ್ಮಿಸುತ್ತಿದೆ"

ಶ್ರೀನಗರ, ಜೂ. 25: ದೌರ್ಜನ್ಯದ ವಿರುದ್ಧ ಎದ್ದು ನಿಲ್ಲುವಂತೆ ಜಮ್ಮು ಹಾಗೂ ಕಾಶ್ಮೀರದ ಪೀಪಲ್ಸ್ ಡೆಮಾಕ್ರೆಟಿಕ್ ಪಾರ್ಟಿ (ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ಆಗ್ರಹಿಸಿದ್ದಾರೆ.
ಕೇಂದ್ರ ಸರಕಾರ ಕಾಶ್ಮೀರದಲ್ಲಿ ಪ್ಯಾಲೆಸ್ತೀನ್ನಂತಹ ಸ್ಥಿತಿಯನ್ನು ನಿರ್ಮಾಣ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
‘‘ಭರವಸೆ ಹಾಗೂ ಧೈರ್ಯ ಕಳೆದುಕೊಳ್ಳಬೇಡಿ ಎಂಬುದು ಜನರಲ್ಲಿ ನನ್ನ ಮನವಿ. ನೀವು ಎಲ್ಲವನ್ನೂ ಮೌನವಾಗಿ ಸ್ವೀಕರಿಸಿದರೆ, ನಮ್ಮ ಪರಿಸ್ಥಿತಿ ಗಾಝಾದಲ್ಲಿರುವವರಿಗಿಂತ ಹದಗೆಡುತ್ತದೆ’’ ಎಂದು ಮುಫ್ತಿ ಹೇಳಿದ್ದಾರೆ.
ಭಯೋತ್ಪಾದನೆಯಿಂದ ದೂರವಿರಿ ಹಾಗೂ ಪ್ರಾಣಗಳನ್ನು ಉಳಿಸಿ ಎಂದು ಹೇಳಿದ ಅವರು, ಭಯೋತ್ಪಾದಕರನ್ನು ಹತ್ಯೆಗೈಯಲು ಭದ್ರತಾ ಪಡೆಗಳ ಯೋಧರು ಉತ್ತೇಜಕಗಳನ್ನು ಪಡೆಯುತ್ತಾರೆ ಎಂದರು.
‘‘ಮೂರು ಅಥವಾ ನಾಲ್ಕು ಯುವಕರು ಹತ್ಯೆಯಾಗುವ ಬಗ್ಗೆ ನಾನು ಪ್ರತಿ ದಿನ ಕೇಳುತ್ತಿರುತ್ತೇನೆ. ಭಯೋತ್ಪಾದನೆಗೆ ಸ್ಥಳೀಯ ನೇಮಕಾತಿ ಹೆಚ್ಚಾಗಿದೆ ಎಂಬುದು ಇದರ ಅರ್ಥ’’ ಎಂದು ಶ್ರೀನಗರದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮುಫ್ತಿ ಹೇಳಿದರು.
‘‘ಜೀವ ರಕ್ಷಿಸಿಕೊಳ್ಳುವಂತೆ ಹೆತ್ತವರು ಹಾಗೂ ಮಕ್ಕಳಲ್ಲಿ ನಾನು ಮನವಿ ಮಾಡಿಕೊಳ್ಳುತ್ತೇನೆ. ಯಾಕೆಂದರೆ, ಹತ್ಯೆಗೆ ಅವರು (ಭದ್ರತಾ ಸಿಬ್ಬಂದಿ) ಉತ್ತೇಜಕಗಳನ್ನು ಪಡೆಯುತ್ತಾರೆ. ಅವರು ಹಣ ಹಾಗೂ ಬಡ್ತಿಯನ್ನು ಕೂಡ ಪಡೆಯುತ್ತಾರೆ’’ ಎಂದು ಮುಫ್ತಿ ಹೇಳಿದ್ದಾರೆ.