ಸಚಿವ ಅಶೋಕ್ ಅವ್ಯವಹಾರಕ್ಕೆ ಜಿಲ್ಲಾಧಿಕಾರಿ ನೇಮಕ: ಜಿಲ್ಲಾಧಿಕಾರಿ ಜೆ.ಮಂಜುನಾಥ್ ಬಂಧನಕ್ಕೆ ಆಪ್ ಒತ್ತಾಯ
![ಸಚಿವ ಅಶೋಕ್ ಅವ್ಯವಹಾರಕ್ಕೆ ಜಿಲ್ಲಾಧಿಕಾರಿ ನೇಮಕ: ಜಿಲ್ಲಾಧಿಕಾರಿ ಜೆ.ಮಂಜುನಾಥ್ ಬಂಧನಕ್ಕೆ ಆಪ್ ಒತ್ತಾಯ ಸಚಿವ ಅಶೋಕ್ ಅವ್ಯವಹಾರಕ್ಕೆ ಜಿಲ್ಲಾಧಿಕಾರಿ ನೇಮಕ: ಜಿಲ್ಲಾಧಿಕಾರಿ ಜೆ.ಮಂಜುನಾಥ್ ಬಂಧನಕ್ಕೆ ಆಪ್ ಒತ್ತಾಯ](https://www.varthabharati.in/sites/default/files/images/articles/2022/06/26/340182-1656181932.jpg)
ಬೆಂಗಳೂರು, ಜೂ.25: ಬಿಜೆಪಿ ಸರಕಾರದ ಪ್ರಭಾವಿ ಸಚಿವ ಆರ್. ಅಶೋಕ್ ತಮ್ಮ ಅವ್ಯವಹಾರವನ್ನು ನಡೆಸಲು ಜೆ. ಮಂಜುನಾಥ್ ಅವರನ್ನು ಉದ್ದೇಶಪೂರ್ವಕವಾಗಿ ಜಿಲ್ಲಾಧಿಕಾರಿಯಾಗಿ ನೇಮಿಸಿಕೊಂಡಿದ್ದಾರೆ. ಪರಿಣಾಮವಾಗಿ ಎಸಿಬಿ ತನಿಖೆಯಿಂದ ಭೂ ವಿವಾದ ಪ್ರಕರಣದಲ್ಲಿ ಜೆ.ಮಂಜುನಾಥ್ ಅವರು ಆರೋಪಿಯಾಗಿ ಸಿಕ್ಕಿಬಿದ್ದಿದ್ದಾರೆ. ಹಾಗಾಗಿ ಭ್ರಷ್ಟ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಅವರನ್ನು ಅಮಾನತ್ತು ಮಾಡಿ, ಬಂಧಿಸಬೇಕು ಎಂದು ಎಎಪಿ ಆಗ್ರಹಿಸಿದೆ.
ಶನಿವಾರ ಪ್ರೆಸ್ಕ್ಲಬ್ನಲ್ಲಿ ಮಾತನಾಡಿದ ಎಎಪಿ ರಾಜ್ಯ ವಕ್ತಾರ ಹಾಗೂ ಮಾಜಿ ಕೆಎಎಸ್ ಅಧಿಕಾರಿ ಕೆ.ಮಥಾಯಿ, “ಆನೇಕಲ್ ತಾಲೂಕಿನ ಕೂಡ್ಲು ಗ್ರಾಮದ 38 ಗುಂಟೆ ಜಮೀನಿನ ವ್ಯಾಜ್ಯಕ್ಕೆ ಸಂಬಂಧಿಸಿ ಅರ್ಜಿದಾರರ ಪರ ತೀರ್ಪು ನೀಡಲು ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗಳು 15 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟು, ಮುಂಗಡವಾಗಿ 5 ಲಕ್ಷ ಪಡೆದಿರುವುದು ಎಸಿಬಿ ದಾಳಿಯಿಂದ ಸಾಬೀತಾಗಿದೆ. ಈ ಪ್ರಕರಣದಲ್ಲಿ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮೂರನೇ ಆರೋಪಿಯೆಂದು ಎಸಿಬಿಯು ವರದಿಯಲ್ಲಿ ಸ್ಪಷ್ಟವಾಗಿ ಹೇಳಿದೆ” ಎಂದು ತಿಳಿಸಿದರು.
“ಜಿಲ್ಲಾಧಿಕಾರಿ ಮಂಜುನಾಥ್ ಅವರು ಈ ಪ್ರಕರಣ ಮಾತ್ರವಲ್ಲದೇ, ಈ ಹಿಂದಿನ ಅನೇಕ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾರೆ. ಕಂದಾಯ ಸಚಿವ ಆರ್.ಅಶೋಕ್ ಅವರು ಅವ್ಯವಹಾರ ಮಾಡಲೆಂದೇ ಭ್ರಷ್ಟ ಅಧಿಕಾರಿಯನ್ನು ಜಿಲ್ಲಾಧಿಕಾರಿಯಾಗಿ ನೇಮಿಸಿಕೊಂಡಿದ್ದಾರೆ. ಭ್ರಷ್ಟಾಚಾರ ಸಂಬಂಧ ಎಸಿಬಿ ನೀಡಿರುವ ವರದಿ ಕುರಿತು ಆರ್.ಅಶೋಕ್ ಪ್ರತಿಕ್ರಿಯಿಸಬೇಕು. ಮಂಜುನಾಥ್ ವಿರುದ್ಧದ ಎಲ್ಲ ಆರೋಪಗಳ ಕುರಿತು ಸಮಗ್ರ ತನಿಖೆಯಾಗಬೇಕು” ಎಂದು ಒತ್ತಾಯಿಸಿದರು.
ಮಿತಿಮೀರಿದ ಭ್ರಷ್ಟಾಚಾರ
ಬಿಜೆಪಿ ಆಡಳಿತದಲ್ಲಿ ಭ್ರಷ್ಟಾಚಾರವು ಮಿತಿಮೀರಿದೆ. ಸಚಿವರು ಹಾಗೂ ಶಾಸಕರುಗಳು ಭ್ರಷ್ಟರಾಗಿರುವುದರಿಂದ ಅಧಿಕಾರಿಗಳನ್ನು ಪ್ರಶ್ನೆ ಮಾಡುವ ನೈತಿಕತೆಯನ್ನು ಅವರು ಕಳೆದುಕೊಂಡಿದ್ದಾರೆ. ಇದರಿಂದಾಗಿ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದ್ದು, ಸಣ್ಣ ಕೆಲಸಕ್ಕೂ ಲಕ್ಷಗಟ್ಟಲೆ ಲಂಚ ನೀಡಬೇಕಾಗಿದೆ. ಜಿಲ್ಲಾಧಿಕಾರಿ ಕಚೇರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದು, ಸಹಿಸಿಕೊಳ್ಳುವ ಬದಲು ಎಸಿಬಿಗೆ ದೂರು ನೀಡಿದ ಅಜಂ ಪಾಷಾ ಅವರ ನಡೆ ಶ್ಲಾಘನೀಯ.