ನನ್ನವರೇ ನನಗೆ ದ್ರೋಹ ಎಸಗಿದರು: ಉದ್ಧವ್ ಠಾಕ್ರೆ
![ನನ್ನವರೇ ನನಗೆ ದ್ರೋಹ ಎಸಗಿದರು: ಉದ್ಧವ್ ಠಾಕ್ರೆ ನನ್ನವರೇ ನನಗೆ ದ್ರೋಹ ಎಸಗಿದರು: ಉದ್ಧವ್ ಠಾಕ್ರೆ](https://www.varthabharati.in/sites/default/files/images/articles/2022/06/30/340713-1656570834.jpg)
ಹೊಸದಿಲ್ಲಿ: "ನನ್ನವರೇ ನನಗೆ "ದ್ರೋಹ" ಮಾಡಿದ್ದಾರೆ. ನನ್ನನ್ನು ತೊರೆಯುತ್ತಾರೆಂದು ನಿರೀಕ್ಷಿಸಿದ ಕಾಂಗ್ರೆಸ್ ಹಾಗೂ ಎನ್ ಸಿಪಿ ನಾಯಕರು ನನ್ನ ಬೆಂಬಲಕ್ಕೆ ನಿಂತಿದ್ದರು'' ಎಂದು ರಾಜೀನಾಮೆ ಮೊದಲು ಮಾಡಿದ ಭಾವನಾತ್ಮಕ ಭಾಷಣದಲ್ಲಿ ಉದ್ಧವ್ ಠಾಕ್ರೆ ಹೇಳಿದ್ದಾರೆ.
"ಬಂಡಾಯಗಾರರು ಬಯಸಿದರೆ ಕಾಂಗ್ರೆಸ್ ಸರಕಾರದಿಂದ ಹೊರಬರುತ್ತದೆ ಹಾಗೂ ಬಾಹ್ಯ ಬೆಂಬಲವನ್ನು ನೀಡುತ್ತದೆ ಎಂದು ಕಾಂಗ್ರೆಸ್ ಮುಖಂಡ ಅಶೋಕ್ ಚವ್ಹಾಣ್ ನನಗೆ ಹೇಳಿದ್ದರು. ನನ್ನನ್ನು ತೊರೆಯುತ್ತಾರೆ ಎಂದು ನಿರೀಕ್ಷಿಸಿದವರು ನನ್ನ ಬೆಂಬಲಕ್ಕೆ ನಿಂತರು. ನನ್ನವರೇ ನನ್ನನ್ನು ತೊರೆದರು’’ ಎಂದು ಅವರು ಹೇಳಿದರು.
ಬಂಡಾಯಗಾರರನ್ನು ಉಲ್ಲೇಖಿಸಿ ಮಾತನಾಡಿದ ಠಾಕ್ರೆ, "ನಿಮ್ಮ ಸಮಸ್ಯೆಗಳೇನು? ಸೂರತ್ ಹಾಗೂ ಗುವಾಹಟಿಗೆ ಹೋಗುವ ಬದಲು ನೀವು ನೇರವಾಗಿ ನನ್ನ ಬಳಿಗೆ ಬಂದು ನಿಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದಿತ್ತು... ಶಿವಸೇನೆ ಸಾಮಾನ್ಯ ಜನರ ಪಕ್ಷವಾಗಿದೆ ಹಾಗೂ ಹಲವಾರು ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿದೆ'' ಎಂದರು.
ಏಕನಾಥ್ ಶಿಂಧೆ ಅವರ ಬಂಡಾಯದಿಂದ ದೊಡ್ಡ ರಾಜಕೀಯ ಬಿಕ್ಕಟ್ಟನ್ನು ತಲೆದೋರಿದಾಗ ಠಾಕ್ರೆ ಎರಡು ಬಾರಿ ರಾಜೀನಾಮೆ ನೀಡಲು ಪ್ರಯತ್ನಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಎರಡೂ ಬಾರಿ ಎರಡು ವರ್ಷಗಳ ಹಿಂದೆ ಮೈತ್ರಿ ಮಾಡಿಕೊಂಡಿದ್ದ ಮಿತ್ರಪಕ್ಷ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ರಾಜೀನಾಮೆ ನೀಡದಂತೆ ತಡೆದಿದ್ದರು.
ಬುಧವಾರ ರಾತ್ರಿ ವೆಬ್ ಕಾಸ್ಟ್ ನಲ್ಲಿ ರಾಜೀನಾಮೆ ನಿರ್ಧಾರ ಪ್ರಕಟಿಸಿದ ಉದ್ಧವ್ ರಾಜ್ಯಪಾಲರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಿದರು. ಈ ಮೂಲಕ 8 ದಿನಗಳಿಂದ ರಾಜ್ಯದಲ್ಲಿ ಉಂಟಾದ ರಾಜಕೀಯ ಬಿಕ್ಕಟ್ಟಿಗೆ ತೆರೆ ಬಿದ್ದಿತ್ತು.
ಗುರುವಾರ ತನ್ನ ಇಬ್ಬರು ಪುತ್ರರಾದ ಆದಿತ್ಯ ಹಾಗೂ ತೇಜಸ್ ಠಾಕ್ರೆಯೊಂದಿಗೆ ದೇಗುಲಕ್ಕೆ ಭೇಟಿ ನೀಡಿದರು.
Mumbai | Uddhav Thackeray offered prayers at a temple with sons Aaditya and Tejas after submitting his resignation as Maharashtra CM to Governor Bhagat Singh Koshyari pic.twitter.com/QyMy5Ehshf
— ANI (@ANI) June 29, 2022