ಉದ್ಧವ್ ಠಾಕ್ರೆ ರಾಜೀನಾಮೆ: ಶೀವಸೇನೆಯನ್ನು ಟೀಕಿಸಿದ ನಟಿ ಕಂಗನಾ ರಣಾವತ್
ಮುಂಬೈ, ಜೂ. 30: ಮಹಾರಾಷ್ಟ್ರದ ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್ ಠಾಕ್ರೆ ಅವರು ರಾಜೀನಾಮೆ ನೀಡಿದ ಒಂದು ದಿನದ ಬಳಿಕ ಶಿವಸೇನೆಯನ್ನು ಟೀಕಿಸಿರುವ ಬಾಲಿವುಡ್ ನಟಿ ಕಂಗನಾ ರಣಾವತ್, ಪ್ರಜಾಪ್ರಭುತ್ವದ ನಂಬಿಕೆಯನ್ನು ಮುರಿಯುವ ಜನರ ಗರ್ವ ಭಂಗವಾಗಲೇ ಬೇಕು ಎಂದು ಗುರುವಾರ ಹೇಳಿದ್ದಾರೆ.
ಉದ್ಧವ್ ಠಾಕ್ರೆ ಅವರ ಮಹಾ ವಿಕಾಸ ಅಘಾಡಿ ಸರಕಾರದೊಂದಿಗೆ ಬಿಕ್ಕಟ್ಟು ಹೊಂದಿದ್ದ ರಣಾವತ್, ಇನ್ಸ್ಟಾಗ್ರಾಂನಲ್ಲಿ ವೀಡಿಯೊ ಪೋಸ್ಟ್ ಮಾಡಿ, 1975ರ ಬಳಿಕ ದೇಶ ಅತ್ಯಂತ ಮಹತ್ವದ ಸಮಯಕ್ಕೆ ಸಾಕ್ಷಿಯಾಗಿದೆ ಎಂದಿದ್ದಾರೆ.
‘‘1975ರಲ್ಲಿ ಜೆ.ಪಿ. ನಾರಾಯಣ ಅವರು ಗದ್ದುಗೆಗೆ ಸವಾಲು ಹಾಕಿದ್ದರು. ಗದ್ದುಗೆ ಉರುಳಿತ್ತು. 2020ರಲ್ಲಿ ನಾನು ಪ್ರಜಾಪ್ರಭುತ್ವ ಎಂದರೆ ನಂಬಿಕೆ. ಅಧಿಕಾರದ ಮದದಿಂದ ಈ ನಂಬಿಕೆಯನ್ನು ಯಾರು ಮುರಿಯುತ್ತಾರೆಯೋ ಅವರ ಅಹಂಕಾರ ಮುಂದೊಂದು ದಿನ ಛಿದ್ರವಾಗುವುದು ನಿಶ್ಚಿತ ಎಂದು ಹೇಳಿದ್ದೆ’’ ಎಂದು ಕಂಗನಾ ರಣಾವತ್ ತಿಳಿಸಿದ್ದಾರೆ.
ವೀಡಿಯೊಗೆ ನೀಡಿದ ಶೀರ್ಷಿಕೆಯಲ್ಲಿ ರಣಾವತ್, ದುಷ್ಟರು ವಶಪಡಿಸಿಕೊಂಡಾಗ ವಿನಾಶವು ಸನ್ನಿಹಿತವಾಗುತ್ತದೆ. ಅನಂತರ ಮತ್ತೆ ಸೃಷ್ಟಿ ನಡೆಯುತ್ತದೆ. ಜೀವನದ ಕಮಲ ಅರಳುತ್ತದೆ ಎಂದು ಹೇಳಿದ್ದಾರೆ.
‘‘ನನಗೆ ಚಲಚಿತ್ರದ ಮಾಫಿಯಾಕ್ಕಿಂತ ಮುಂಬೈಯ ಪೊಲೀಸರ ಬಗ್ಗೆ ಭಯವಾಗುತ್ತದೆ’’ ಎಂದು ಕಂಗನಾ ರಣಾವತ್ ಹೇಳಿದ ಬಳಿಕ ಹಾಗೂ ಮಹಾರಾಷ್ಟ್ರ ರಾಜಧಾನಿಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ನಂಟು ಕಲ್ಪಿಸಿದ ಬಳಿಕ 2020 ಸೆಪ್ಟಂಬರ್ನಲ್ಲಿ ಶಿವಸೇನೆ ಹಾಗೂ ಕಂಗನಾ ರಣಾವತ್ ಅವರ ನಡುವೆ ಬಿಕ್ಕಟ್ಟು ಉದ್ಭವಿಸಿತ್ತು.