ದೇಶದ ಅಭಿವೃದ್ಧಿ ಹಿನ್ನೆಡೆಗೆ ದ್ವೇಷ, ಅಸೂಯೆ ಕಾರಣ: ಡಾ.ರಹಮತ್ ತರೀಕೆರೆ
ಡಾ.ರಹಮತ್ ತರೀಕೆರೆ
ರಾಯಚೂರು, ಜು.3: ಒಗ್ಗಟ್ಟಿನ ಮೂಲಕ ಕಟ್ಟಬೇಕಾದ ದೇಶವನ್ನು ಇಂದು ದ್ವೇಷದ ಮೂಲಕ ಕಟ್ಟುವ ಪ್ರಯತ್ನಗಳು ನಡೆಯುತ್ತಿವೆ. ದ್ವೇಷ ಮತ್ತು ಅಸೂಯೆ ಇದೇ ರೀತಿಯಾಗಿ ಮುಂದುವರೆದರೆ ದೇಶದ ಅಭಿವೃದ್ಧಿಗೆ ಹಿನ್ನೆಡೆಯಾಗುತ್ತದೆ ಎಂಬುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕೆಂದು ಕನ್ನಡ ವಿವಿ ಪ್ರಾಧ್ಯಾಪಕ, ಹಿರಿಯ ಸಾಹಿತಿ ಡಾ.ರಹಮತ್ ತರೀಕೆರೆ ಹೇಳಿದ್ದಾರೆ.
ರವಿವಾರ ರಾಯಚೂರು ನಗರದ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಕರ್ನಾಟಕ ಜನಶಕ್ತಿ 3ನೆ ರಾಜ್ಯ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜನರ ಸಂಬಂಧಗಳನ್ನು ಕದಡಿ ದೇಶ ಕಟ್ಟುವ ಕಾರ್ಯ ನಮ್ಮ ಎದುರುಗಡೆ ನಡೆಯುತ್ತಿದೆ. ಈ ಸಮಸ್ಯೆಗಳನ್ನು ಹೆದರಿಸಿ ಪ್ರೇಮದ ಭಾರತವನ್ನು ಅಭಿವೃದ್ಧಿಪಡಿಸುವ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು.
ಅನ್ಯಾಯದ ವಿರುದ್ಧ ಹೋರಾಟ ನಡೆಸುವವರಿಂದು ಬಂಧನಕ್ಕೆ ಒಳಗಾಗಿ ಕಾರಾಗೃಹಕ್ಕೆ ಹೋಗುತ್ತಿದ್ದಾರೆ. ಬುದ್ಧಿಜೀವಿಗಳು, ಪತ್ರಕರ್ತರು, ಹೋರಾಟಗಾರರನ್ನು ಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಹತ್ಯೆ ಬೆದರಿಕೆ ಹಾಕುವಂಥ ಕಾಲದಲ್ಲಿ ನಾವು ಬದುಕುತ್ತಿದ್ದೇವೆ ಎಂದರು.