ಸಾಮಾಜಿಕ ತಾಣಗಳಲ್ಲಿ ಸುಪ್ರೀಂಕೋರ್ಟ್ ನ್ಯಾಯಾಧೀಶರ ಮೇಲೆ ವೈಯಕ್ತಿಕ ದಾಳಿ: ಜಸ್ಟಿಸ್ ಜೆ.ಬಿ ಪಡಿವಾಳ ಅಸಮಾಧಾನ
"ಇದು ಅಪಾಯಕಾರಿ ಸನ್ನಿವೇಶಕ್ಕೆ ಕಾರಣವಾಗುತ್ತದೆ"
![ಸಾಮಾಜಿಕ ತಾಣಗಳಲ್ಲಿ ಸುಪ್ರೀಂಕೋರ್ಟ್ ನ್ಯಾಯಾಧೀಶರ ಮೇಲೆ ವೈಯಕ್ತಿಕ ದಾಳಿ: ಜಸ್ಟಿಸ್ ಜೆ.ಬಿ ಪಡಿವಾಳ ಅಸಮಾಧಾನ ಸಾಮಾಜಿಕ ತಾಣಗಳಲ್ಲಿ ಸುಪ್ರೀಂಕೋರ್ಟ್ ನ್ಯಾಯಾಧೀಶರ ಮೇಲೆ ವೈಯಕ್ತಿಕ ದಾಳಿ: ಜಸ್ಟಿಸ್ ಜೆ.ಬಿ ಪಡಿವಾಳ ಅಸಮಾಧಾನ](https://www.varthabharati.in/sites/default/files/images/articles/2022/07/4/341180-1656929891.jpg)
ಹೊಸದಿಲ್ಲಿ: ಪ್ರವಾದಿ ವಿರುದ್ಧ ಹೇಳಿಕೆ ನೀಡಿದ್ದ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮ ವಿರುದ್ಧ ಇತ್ತೀಚೆಗೆ ಹರಿಹಾಯ್ದ ಸುಪ್ರೀಂ ಕೋರ್ಟ್ ಪೀಠದಲ್ಲಿದ್ದ ನ್ಯಾಯಾಧೀಶರಲ್ಲೊಬ್ಬರಾದ ಜಸ್ಟಿಸ್ ಜೆ.ಬಿ ಪಡಿವಾಳ ಅವರು ಪ್ರತಿಕ್ರಿಯಿಸಿ. ನ್ಯಾಯಾಧೀಶರ ಮೇಲೆ ನಡೆಯುವ ವೈಯಕ್ತಿಕ ದಾಳಿಗಳು ಅವರನ್ನು ನ್ಯಾಯ ಏನು ಹೇಳುತ್ತದೆ ಎನ್ನುವುದಕ್ಕಿಂತ ಹೆಚ್ಚಾಗಿ ಮಾಧ್ಯಮ ಏನು ಹೇಳುತ್ತದೆ ಎಂದು ಯೋಚಿಸುವಂತೆ ಮಾಡುತ್ತದೆ ಎಂದಿದ್ದಾರೆ. ಸಾಮಾಜಿಕ ಜಾಲತಾಣಗಳನ್ನು ಈ ನಿಟ್ಟಿನಲ್ಲಿ ನಿಯಂತ್ರಿಸುವ ಅಗತ್ಯವಿದೆ ಎಂದೂ ಅವರು ಅಭಿಪ್ರಾಯ ಪಟ್ಟರು.
"ತಮ್ಮ ತೀರ್ಪುಗಳಿಗೆ ನ್ಯಾಯಾಧೀಶರುಗಳ ಮೇಲೆ ವೈಯಕ್ತಿಕ ದಾಳಿ ಒಂದು ಅಪಾಯಕಾರಿ ಸನ್ನಿವೇಶಕ್ಕೆ ಕಾರಣವಾಗುತ್ತದೆ" ಎಂದು ರವಿವಾರ ರಾಮ್ ಮನೋಹರ್ ಲೋಹಿಯಾ ರಾಷ್ಟ್ರೀಯ ಕಾನೂನು ವಿವಿ ಮತ್ತು ನ್ಯಾಷನಲ್ ಲಾ ಯುನಿವರ್ಸಿಟಿ ಒಡಿಶಾ ಆಯೋಜಿಸಿದ್ದ ಎರಡನೇ ಜಸ್ಟಿಸ್ ಎಚ್ ಆರ್ ಖನ್ನಾ ಸ್ಮಾರಕ ವಿಚಾರಸಂಕಿರಣದಲ್ಲಿ ಭಾಗವಹಿಸಿ ಮಾತನಾಡುವ ವೇಳೆ ನ್ಯಾಯಮೂರ್ತಿ ಪಡಿವಾಳ ಮೇಲಿನಂತೆ ಹೇಳಿದರು.
ಸಾಮಾಜಿಕ ಜಾಲತಾಣಗಳಲ್ಲಿ ತೀರ್ಪುಗಳ ವಿಶ್ಲೇಷಣಾತ್ಮಕ ವಿಮರ್ಶೆಯ ಬದಲು ನ್ಯಾಯಾಧೀಶರುಗಳ ಬಗ್ಗೆ ವೈಯಕ್ತಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಬಳಸಲಾಗುತ್ತಿದೆ. ಇದು ನ್ಯಾಯಾಂಗ ಸಂಸ್ಥೆಗೆ ಹಾನಿಯುಂಟು ಮಾಡಿ ಅದರ ಘನತೆಯನ್ನು ತಗ್ಗಿಸುತ್ತದೆ. ನ್ಯಾಯಾಲಯಗಳ ತೀರ್ಪಿನ ಬಗ್ಗೆ ಅಸಮಾಧಾನವಿದ್ದರೆ ಅದಕ್ಕಾಗಿ ಉನ್ನತ ನ್ಯಾಯಾಲಯಗಳಿವೆ ಬದಲು ಸಾಮಾಜಿಕ ಜಾಲತಾಣವಲ್ಲ" ಎಂದು ಅವರು ಹೇಳಿದರು.
ಸಂವಿಧಾನದತ್ತವಾಗಿ ಕಾನೂನನ್ನು ಎತ್ತಿಹಿಡಿಯಲು ಡಿಜಿಟಲ್ ಮತ್ತು ಸಾಮಾಜಿಕ ಜಾಲತಾಣಗಳನ್ನು ನಿಯಂತ್ರಿಸಬೇಕು, ಎಂದೂ ಅವರು ಅಭಿಪ್ರಾಯ ಪಟ್ಟರು.