ಬಲಾಬಲ ಪರೀಕ್ಷೆಯಲ್ಲಿ ವಿಪ್ ಉಲ್ಲಂಘಿಸಿದ ಆದಿತ್ಯ ಠಾಕ್ರೆಗೆ ಅನರ್ಹತೆ ಭೀತಿ
![ಬಲಾಬಲ ಪರೀಕ್ಷೆಯಲ್ಲಿ ವಿಪ್ ಉಲ್ಲಂಘಿಸಿದ ಆದಿತ್ಯ ಠಾಕ್ರೆಗೆ ಅನರ್ಹತೆ ಭೀತಿ ಬಲಾಬಲ ಪರೀಕ್ಷೆಯಲ್ಲಿ ವಿಪ್ ಉಲ್ಲಂಘಿಸಿದ ಆದಿತ್ಯ ಠಾಕ್ರೆಗೆ ಅನರ್ಹತೆ ಭೀತಿ](https://www.varthabharati.in/sites/default/files/images/articles/2022/07/4/341186-1656926562.jpg)
Photo:twitter
ಮುಂಬೈ: ಇಂದು ನಡೆದ ಬಲಾಬಲ ಪರೀಕ್ಷೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರಿಗೆ ಮತ ಹಾಕಲು ನೀಡಲಾಗಿದ್ದ ವಿಪ್ ಅನ್ನು ಧಿಕ್ಕರಿಸಿದ ಶಿವಸೇನೆಯ ಶಾಸಕ ಆದಿತ್ಯ ಠಾಕ್ರೆ ಅನರ್ಹತೆಗೆ ಗುರಿಯಾಗುವ ಸಾಧ್ಯತೆ ಇದೆ.
ಎರಡು ವಾರಗಳ ಹಿಂದೆ ಆದಿತ್ಯ ಅವರ ತಂದೆ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿದ್ದರು. ಪಕ್ಷದ ಮುಖ್ಯಸ್ಥರಾಗಿ ಆಗ ಏಕನಾಥ್ ಶಿಂಧೆ ಹಾಗೂ ಇತರ ಬಂಡಾಯ ಶಾಸಕರನ್ನು ಅನರ್ಹಗೊಳಿಸಲು ನೋಟಿಸ್ ಕಳುಹಿಸಿದ್ದರು.
ಏಕನಾಥ್ ಶಿಂಧೆ ಸರಕಾರಕ್ಕೆ ಮತ ಹಾಕುವಂತೆ ಬಂಡಾಯ ಪಾಳಯದಿಂದ ಆಯ್ಕೆಯಾದ ಮುಖ್ಯ ಸಚೇತಕರು ಶಿವಸೇನೆ ಶಾಸಕರಿಗೆ ಸೂಚಿಸಿದ್ದರು.
ರವಿವಾರ ಆಯ್ಕೆಯಾಗಿದ್ದ ಸ್ಪೀಕರ್ ರಾಹುಲ್ ನಾರ್ವೇಕರ್ ಮಧ್ಯರಾತ್ರಿಯ ಸಮಯದಲ್ಲಿ ಮುಖ್ಯ ಸಚೇತಕರನ್ನು ಅನುಮೋದಿಸಿದ್ದರು.
ಕಳೆದ ವಾರ ತನ್ನ ತಂದೆಯ ಸರಕಾರವನ್ನು ಉರುಳಿಸಿದ ಏಕನಾಥ್ ಶಿಂಧೆ ವಿರುದ್ಧ ಮತ ಚಲಾಯಿಸುವ ಮೂಲಕ ಆದಿತ್ಯ ಠಾಕ್ರೆ ಆ ವಿಪ್ ಅನ್ನು ಧಿಕ್ಕರಿಸಿದ್ದಾರೆ.
ಆದಿತ್ಯ ಠಾಕ್ರೆ ಅನರ್ಹತೆಯನ್ನು ಎದುರಿಸಬಹುದು. ಆದರೆ ಮುಂದಿನ ಸೋಮವಾರ ಸುಪ್ರೀಂ ಕೋರ್ಟ್ನ ನಿರ್ಧಾರದ ಮೇಲೆ ಅದು ಅವಲಂಬಿತವಾಗಿರುತ್ತದೆ ಎಂದು ಟೀಮ್ ಠಾಕ್ರೆ ಆಶಿಸುತ್ತಿದೆ.