ಮಹಾರಾಷ್ಟ್ರ: ವಿಶ್ವಾಸ ಮತದ ಬಳಿಕ ಬಂದ ಇಬ್ಬರು ಕಾಂಗ್ರೆಸ್ ಶಾಸಕರು, ಕೆಲವರು ಗೈರು
![ಮಹಾರಾಷ್ಟ್ರ: ವಿಶ್ವಾಸ ಮತದ ಬಳಿಕ ಬಂದ ಇಬ್ಬರು ಕಾಂಗ್ರೆಸ್ ಶಾಸಕರು, ಕೆಲವರು ಗೈರು ಮಹಾರಾಷ್ಟ್ರ: ವಿಶ್ವಾಸ ಮತದ ಬಳಿಕ ಬಂದ ಇಬ್ಬರು ಕಾಂಗ್ರೆಸ್ ಶಾಸಕರು, ಕೆಲವರು ಗೈರು](https://www.varthabharati.in/sites/default/files/images/articles/2022/07/4/341229-1656945390.jpg)
ಮುಂಬೈ,ಜು.4: ಪ್ರಮುಖ ಕಾಂಗ್ರೆಸ್ ಶಾಸಕರಾದ ಅಶೋಕ ಚವಾಣ್ ಮತ್ತು ವಿಜಯ ವಡೆಟ್ಟಿವಾರ್ ಅವರು ಸೋಮವಾರ ಮುಖ್ಯಮಂತ್ರಿ ಏಕನಾಥ ಶಿಂದೆಯವರು ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿಶ್ವಾಸ ಮತವನ್ನು ಗೆದ್ದ ಬಳಿಕ ಸದನಕ್ಕೆ ಆಗಮಿಸಿದ್ದರೆ,ರವಿವಾರ ಸ್ಪೀಕರ್ ಚುನಾವಣೆ ವೇಳೆ ಹಾಜರಿದ್ದ ಕಾಂಗ್ರೆಸ್ನ ಝೀಶನ್ ಅಲಿ ಮತ್ತು ಧೀರಜ್ ದೇಶಮುಖ ಹಾಗೂ ಎನ್ಸಿಪಿಯ ಸಂಗ್ರಾಮ್ ಜಗತಾಪ್ ಅವರು ಗೈರುಹಾಜರಾಗಿದ್ದರು. ಇದು ಊಹಾಪೋಹಗಳನ್ನು ಹೆಚ್ಚಿಸಿದೆ. ಮತದಾನದ ವೇಳೆ ಸದನದೊಳಗೆ ತಲುಪಲು ಚವಾಣ್ ಮತ್ತು ವಡೆಟ್ಟಿವಾರ್ ಅವರಿಗೆ ಸಾಧ್ಯವಾಗಿರಲಿಲ್ಲ.
ಎನ್ಸಿಪಿಯ ನವಾಬ್ ಮಲಿಕ್,ಅನಿಲ್ ದೇಶಮುಖ್,ಡಿ.ವಿ.ಭರ್ಣೆ, ಎನ್.ಡಿ.ಲಂಕೆ, ಅಣ್ಣಾ ಬನ್ಸೋಡೆ, ಡಿ.ಡಿ.ಮೋಹಿತೆ ಮತ್ತು ಬಬನ್ ಶಿಂದೆ, ಬಿಜೆಪಿಯ ಮುಕ್ತಾ ಟಿಳಕ್ ಮತ್ತು ಲಕ್ಷ್ಮಣ ಜಗತಾಪ್, ಕಾಂಗ್ರೆಸ್ನ ಪ್ರಣೀತಿ ಶಿಂದೆ,ರಂಜಿತ್ ಕಾಂಬ್ಳೆ ಹಾಗೂ ಎಐಎಂಐಎಂ ಶಾಸಕ ಮುಫ್ತಿ ಇಸ್ಮಾಯಿಲ್ ಕಾಸ್ಮಿ ಅವರೂ ವಿವಿಧ ಕಾರಣಗಳಿಂದ ಗೈರುಹಾಜರಾಗಿದ್ದರು.
ನೂತನ ಏಕನಾಥ ಶಿಂದೆ ಸರಕಾರವು ಬಲಾಬಲ ಪರೀಕ್ಷೆಯಲ್ಲಿ 164-99 ಮತಗಳಿಂದ ಗೆಲುವು ಸಾಧಿಸುವ ಮೂಲಕ ತನ್ನ ಬಹುಮತವನ್ನು ಸಾಬೀತುಗೊಳಿಸಿದೆ. ತನ್ಮೂಲಕ ಶಿಂದೆಯವರ ಮುಖ್ಯಮಂತ್ರಿ ಪಟ್ಟ ಮತ್ತು ಶಿವಸೇನೆ ನಾಯಕ ಹುದ್ದೆ ಗಟ್ಟಿಯಾಗಿದೆ.
ರವಿವಾರ ರಾತ್ರಿ ಶಿವಸೇನೆಯ ಮುಖ್ಯ ಸಚೇತಕರಾಗಿ ಆಯ್ಕೆಯಾಗಿದ್ದ ಭರತ ಗೋಗಾವಾಲೆ ಅವರ ಸಚೇತಕಾಜ್ಞೆಯ ವಿರುದ್ಧ ಮತ ಚಲಾಯಿಸಿರುವ ಆದಿತ್ಯ ಠಾಕ್ರೆಯವರು ಅನರ್ಹತೆ ಕ್ರಮವನ್ನು ಎದುರಿಸಬೇಕಾಗಬಹುದು.