ಆವರ್ಸೆ: ವ್ಯಕ್ತಿತ್ವ ವಿಕಸನ, ಜೀವನಮೌಲ್ಯಗಳು ಕುರಿತ ಮಾಹಿತಿ ಶಿಬಿರ
![ಆವರ್ಸೆ: ವ್ಯಕ್ತಿತ್ವ ವಿಕಸನ, ಜೀವನಮೌಲ್ಯಗಳು ಕುರಿತ ಮಾಹಿತಿ ಶಿಬಿರ ಆವರ್ಸೆ: ವ್ಯಕ್ತಿತ್ವ ವಿಕಸನ, ಜೀವನಮೌಲ್ಯಗಳು ಕುರಿತ ಮಾಹಿತಿ ಶಿಬಿರ](https://www.varthabharati.in/sites/default/files/images/articles/2022/07/5/341353-1657028879.jpg)
ಉಡುಪಿ: ಶಾಲೆಯಲ್ಲಿ ಸಂತಸದ ಕಲಿಕೆ, ಗುಣಮಟ್ಟದ ಶಿಕ್ಷಣ ಸೃಜನಶೀಲ ಚಟುವಟಿಕೆಗಳು ನಡೆಯಬೇಕು. ಸೃಷ್ಟಿ ಶೀಲ ವ್ಯಕ್ತಿತ್ವಗಳು ಬೆಳಗಬೇಕು ಎಂದು ಆವರ್ಸೆ ಗ್ರಾಮ ಪಂಚಾಯತ್ನ ಅಧ್ಯಕ್ಷೆ ಜಯಲಕ್ಷ್ಮಿ ಶೆಟ್ಟಿ ಹೇಳಿದ್ದಾರೆ.
ಹಂಗಾರಕಟ್ಟೆ ಬಾಳ್ಕುದ್ರು ಅಭಿವೃದ್ಧಿ ಸಂಸ್ಥೆ, ಗ್ರಾಮ ಪಂಚಾಯತ್ ಆವರ್ಸೆ ಮತ್ತು ಸರಕಾರಿ ಪ್ರೌಢಶಾಲೆ ಆವರ್ಸೆಯ ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಆವರ್ಸೆಯಲ್ಲಿ ಇತ್ತೀಚೆಗೆ ನಡೆದ ವ್ಯಕ್ತಿತ್ವ ವಿಕಸನ ಮತ್ತು ಜೀವನಮೌಲ್ಯಗಳು ಎಂಬ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡುತಿದ್ದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬ್ರಹ್ಮಾವರದ ಚೇತನ್ಕುಮಾರ್ ಶೆಟ್ಟಿ ಮಾತಾಡಿ ಶಾಲಾ ಪಠ್ಯದೊಂದಿಗೆ ಸಹಪಠ್ಯ ಚಟುವಟಿಕೆಗಳಿಂದ ಮಕ್ಕಳು ಸರ್ವಾಂಗೀಣ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಅಕ್ಷರ ಕಲಿಕೆ ಮಾತ್ರ ಶಿಕ್ಷಣವಲ್ಲ. ಎಳೆವೆಯಲ್ಲಿ ಸಮಗ್ರ ಮಾಹಿತಿಗಳು ಲಭ್ಯವಾದಲ್ಲಿ ಅವರಲ್ಲಿ ಏಕಾಗ್ರತೆ ಹೆಚ್ಚುತ್ತದೆ. ಸಮಯ ಪ್ರಜ್ಞೆ ಮತ್ತು ಸೂಕ್ಷ್ಮತೆ ಬೆಳೆಯುತ್ತದೆ ಎಂದರು.
ಸಭಾದ್ಯಕ್ಷತೆ ವಹಿಸಿದ್ದ ಆವರ್ಸೆ ಸರಕಾರಿ ಪ್ರೌಢ ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಶಂಕರ ಕುಲಾಲ್ ಮಾತನಾಡಿ ಇಂತಹ ಶಿಬಿರಗಳಿಂದ ನೀತಿಯ ಮೌಲ್ಯಗಳು ಅಂತರಂಗದ ನೆಲೆಗಳಾಗುತ್ತವೆ. ಅದೇ ರೀತಿ ಶಾಂತಿ, ಸಹಬಾಳ್ವೆ, ಸಹನೆ ಮನೋಧರ್ಮವಾಗಿ ನೆಲೆಯೂರ ಬೇಕೆಂಬ ಮೌಲ್ಯ ಬೆಳೆಯುತ್ತದೆ ಎಂದರು.
ಸಭೆಯಲ್ಲಿ ಆವರ್ಸೆ ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ರಮೇಶ್ ಕುಲಾಲ್, ಹಂಗಾರಕಟ್ಟೆ ಬಾಳ್ಕುದ್ರು ಅಭಿವೃದ್ಧಿ ಸಂಸ್ಥೆ ಕಾರ್ಯದರ್ಶಿ ರಮೇಶ್ ವಕ್ವಾಡಿ, ಸಂಪನ್ಮೂಲ ವ್ಯಕ್ತಿ ಕುಂದಾಪುರ ವಲಯ ಹೆಸ್ಕತ್ತೂರು ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಅಬ್ದುಲ್ ರವೂಫ್ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕ ರಮೇಶ್ ಕುಲಾಲ್ ಸ್ವಾಗತಿಸಿ, ಶಾಲಾ ದೈಹಿಕ ಶಿಕ್ಷಕ ಅಜಾದ್ ಮಹಮದ್ ನಿರೂಪಿಸಿದರು. ರಮೇಶ್ ವಕ್ವಾಡಿ ಪ್ರಾಸ್ತಾವಿಕ ಮಾತುಗಳ ನ್ನಾಡಿದರೆ, ಜಯಲಕ್ಷ್ಮೀ ಸೇರಿಗಾರ್ ಕರ್ಜೆ ವಂದಿಸಿದರು. ೧೫೩ ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು.