ಮ್ಯಾನ್ಮಾರ್ನಲ್ಲಿ ಇಬ್ಬರು ತಮಿಳರ ಗುಂಡಿಕ್ಕಿ ಹತ್ಯೆ
![ಮ್ಯಾನ್ಮಾರ್ನಲ್ಲಿ ಇಬ್ಬರು ತಮಿಳರ ಗುಂಡಿಕ್ಕಿ ಹತ್ಯೆ ಮ್ಯಾನ್ಮಾರ್ನಲ್ಲಿ ಇಬ್ಬರು ತಮಿಳರ ಗುಂಡಿಕ್ಕಿ ಹತ್ಯೆ](https://www.varthabharati.in/sites/default/files/images/articles/2022/07/6/341412-1657073953.jpg)
ಸಾಂದರ್ಭಿಕ ಚಿತ್ರ
ಇಂಫಾಲ: ಮಣಿಪುರದ ತೆಂಗ್ನೊಪಾಲ್ ಜಿಲ್ಲೆಯ ಮೊರೆಹ್ ಸಮೀಪ ನೆಲೆಸಿದ್ದ ಇಬ್ಬರು ತಮಿಳರನ್ನು ನೆರೆಯ ಮ್ಯಾನ್ಮಾರ್ನ ತಮು ಎಂಬಲ್ಲಿ ಮಂಗಳವಾರ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಘಟನೆಯನ್ನು ಖಂಡಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದಲ್ಲದೇ ಗಡಿಪಟ್ಟಣವನ್ನು ಬಂದ್ ಮಾಡಿದ್ದರು.
ಆಟೊ ಚಾಲಕ ಪಿ.ಮೋಹನ್ ಮತ್ತು ವ್ಯಾಪಾರಿ ಎಂ.ಅಯ್ಯನಾರ್ ಅವರ ಮೇಲೆ ಪ್ಯೂ ಶಾ ತೀ ಎಂಬ ಉಗ್ರ ಸಂಘಟನೆಯ ಸದಸ್ಯರು ದಾಳಿ ನಡೆಸಿರಬೇಕು ಎಂದು ಮೂಲಗಳು ಹೇಳಿವೆ. ಮೋಹನ್ ಕೆಲ ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಎಂದು timesofindia.com ವರದಿ ಮಾಡಿದೆ.
ಇಬ್ಬರೂ ಬೆಳಗ್ಗೆ 8.30ರ ವೇಳೆಗೆ ನಾಪತ್ತೆಯಾಗಿದ್ದರು. ಇದಾದ ಎರಡು ಗಂಟೆಗಳಲ್ಲಿ ಮೋಟರ್ ಬೈಕ್ನಲ್ಲಿ ಬಂದ ಹಂತಕರು ತಮು ಎಂಬಲ್ಲಿ ಇಬ್ಬರ ತಲೆಗೂ ಗುಂಡು ಹೊಡೆದು ಸಾಯಿಸಿದರು ಎಂಬ ಸುದ್ದಿ ಬಂತು. ಈ ಪಟ್ಟಣ ಮೊರಾಹ್ ವಲಯದ ಭಾರತ- ಮ್ಯಾನ್ಮಾರ್ ಗಡಿ ಗೇಟ್ನಿಂದ ಕೇವಲ ನಾಲ್ಕು ಕಿಲೋಮೀಟರ್ ದೂರದಲ್ಲಿದೆ. ಸ್ಥಳೀಯ ಅಧಿಕಾರಿಗಳು ಗುಂಡಿನಿಂದ ಜರ್ಜರಿತವಾಗಿದ್ದ ದೇಹಗಳನ್ನು ತಮು ಆಸ್ಪತ್ರೆಗೆ ಸಾಗಿಸಿದರು. ಈ ಹತ್ಯೆಯ ಹಿಂದಿನ ಉದ್ದೇಶದ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇನ್ನೂ ಲಭ್ಯವಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೊರೆಹ್ನಲ್ಲಿ ಸುಮಾರು 50 ಸಾವಿರ ಮಂದಿ ವಾಸವಿದ್ದು, ಇವರಲ್ಲಿ ಕೂಕಿಗಳು, ತಮಿಳರು, ಮೀಟಿಗಳು, ಪಂಜಾಬಿಗಳು, ಮಾರ್ವಾಡಿಗಳು ಹಾಗೂ ಬೆಂಗಾಲಿಗಳು ಸೇರಿದ್ದಾರೆ. ತಮಿಳು ಮೂಲದ ಜನ ವಲಸೆ ಗುಂಪಿನಲ್ಲಿ ಅತಿ ದೊಡ್ಡ ಸಮುದಾಯ ಎನಿಸಿದ್ದು, ಭಾರತ- ಮ್ಯಾನ್ಮಾರ್ ಗಡಿಯಲ್ಲಿ ವ್ಯಾಪಾರದಲ್ಲಿ ತೊಡಗಿದ್ದಾರೆ. ಮೃತರ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಕೋರಿ ವಿಭಿನ್ನ ಸಮುದಾಯಗಳ ಆರು ಸಂಘಟನೆಗಳು ಮೊರೆಹ್ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದ್ದಾರೆ.