ಬಂಟ್ವಾಳ: ಮನೆಯ ಮೇಲೆ ಗುಡ್ಡ ಕುಸಿತ
ಮೂವರು ಕಾರ್ಮಿಕರಿಗೆ ಶೋಧ, ಓರ್ವನ ರಕ್ಷಣೆ
ಬಂಟ್ವಾಳ, ಜು.6: ಮನೆಯ ಮೇಲೆ ಗುಡ್ಡ ಕುಸಿದು ಮೂವರು ಕಾರ್ಮಿಕರು ಮಣ್ಣಿನಡಿಯಲ್ಲಿ ಸಿಲುಕಿರುವ ಘಟನೆ ತಾಲೂಕಿನ ಪಂಜಿಕಲ್ಲಿನಲ್ಲಿ ಬುಧವಾರ ರಾತ್ರಿ ಸಂಭವಿಸಿದೆ.
ಮನೆಯ ಮೇಲೆ ಗುಡ್ಡ ಕುಸಿತದಿಂದ ನಾಲ್ವರು ಮಣ್ಣಿನಡಿಯಲ್ಲಿ ಸಿಲುಕಿದ್ದು ಆ ಪೈಕಿ ಓರ್ವ ನನ್ನು ರಕ್ಷಣೆ ಮಾಡಲಾಗಿದೆ. ಉಳಿದ ಮೂವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಈ ನಾಲ್ವರು ಕೇರಳ ಮೂಲದವರಾಗಿದ್ದು ರಬ್ಬರ್ ಟ್ಯಾಪಿಂಗ್ ಕಾರ್ಮಿಕರು ಎನ್ನಲಾಗಿದೆ. ಹೆನ್ರಿ ಕಾರ್ಲೊ ಎಂಬವರಿಗೆ ಸೇರಿದ ಮನೆಯ ಹೊರಗಿರುವ ಕೊಠಡಿಗೆ ಗುಡ್ಡ ಜರಿದು ಬಿದಿದೆ. ನಾಲ್ವರು ಅದರಲ್ಲಿ ವಾಸವಿದ್ದರು ಎಂದು ತಿಳಿದು ಬಂದಿದೆ.
ನಾಲ್ವರು ಕಾರ್ಮಿಕರು ಅನೇಕ ವರ್ಷಗಳಿಂದ ಹೆನ್ರಿ ಕಾರ್ಲೊ ಅವರ ತೋಟದ ಕೆಲಸ ಮಾಡುತ್ತಿದ್ದಾರೆ. ಜೆಸಿಬಿ ಬಳಸಿ ಮಣ್ಣು ತೆರವು ಗೊಳಿಸುವ ಕೆಲಸ ನಡೆಯುತ್ತಿದೆ.
ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದುಬರಬೇಕಿದೆ.