ಭಾರೀ ಮಳೆಗೆ ಕೊಚ್ಚಿ ಹೋದ ಅದ್ಯಪಾಡಿ-ಕೈಕಂಬ ರಸ್ತೆ
ಬಜ್ಪೆ, ಜು.7: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇ ಬಳಿಯಿಂದಾಗಿ ಅದ್ಯಪಾಡಿಗೆ ತೆರಳುವ ರಸ್ತೆ ಭಾರೀ ಮಳೆಗೆ ಕೊಚ್ಚಿ ಹೋಗಿದೆ.
ಇದು ಅದ್ಯಪಾಡಿ-ಕೈಕಂಬ ಸಂಪರ್ಕಿಸುವ ರಸ್ತೆಯಾಗಿದ್ದು, ಕೆಲ ದಿನಗಳ ಹಿಂದೆಯೇ ಇಲ್ಲಿ ಮೋರಿ ಕುಸಿದಿತ್ತು. ಆ ಬಳಿಕ ರಸ್ತೆಯ ಎರಡೂ ಬದಿಗಳಲ್ಲಿ ಬ್ಯಾರಿಕೇಡ್ ಗಳನ್ನು ಅಳವಡಿಸಿ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.
ಈ ಕುರಿತು ಸ್ಪಷ್ಟನೆ ನೀಡಿರುವ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ, ವಿಮಾನ ನಿಲ್ದಾಣದ ಹೊರಭಾಗದಲ್ಲಿ ಸುತ್ತುವರಿದ ರಸ್ತೆಯಲ್ಲಿ ಭೂ ಕುಸಿತವಾಗಿದ್ದು ವಿಮಾನದ ರನ್ ವೇಗೆ ಯಾವುದೇ ಅಪಾಯವಾಗಿಲ್ಲ. ವಿಮಾನ ನಿಲ್ದಾಣದಲ್ಲಿ ಚಟುವಟಿಕೆಗಳು ದೈನಂದಿನಂತೆ ನಡೆಯುತ್ತಿದೆ. ಸದ್ಯ ರಸ್ತೆ ದುರಸ್ತಿಯ ಕಾರ್ಯಾಚರಣೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದೆ.
ರಸ್ತೆ ಕುಸಿಯಲು ವಿಮಾನ ನಿಲ್ದಾಣದ ರನ್ ವೇ ಯಿಂದ ನೀರು ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿರುವುದು ಮುಖ್ಯ ಕಾರಣ. ಈ ಹಿಂದೆ ಅಲ್ಪ ಪ್ರಮಾಣದಲ್ಲಿ ಭೂ ಕುಸಿತವಾಗಿದ್ದ ವೇಳೆ ದುರಸ್ತಿ ಕಾರ್ಯ ನಡೆಸಿದ್ದರೆ ಇಂತಹಾ ಅನಾಹುತ ನಡೆಯುತ್ತಿರಲಿಲ್ಲ ಎಂದು ನಾಗರಿಕರು ಆರೋಪಿಸಿದ್ದಾರೆ.