ಬಿ ರಿಪೋರ್ಟ್ಗಳ ಮಾಹಿತಿ ಸಲ್ಲಿಸದ ಹಿನ್ನೆಲೆ: ಎಸಿಬಿ ವಿರುದ್ಧ ಹೈಕೋರ್ಟ್ ಮತ್ತೆ ಅಸಮಾಧಾನ

ಬೆಂಗಳೂರು, ಜು.7: ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ಜೆ.ಮಂಜುನಾಥ್ ಲಂಚ ಪಡೆದ ಆರೋಪದ ವಿಚಾರಣೆ ವೇಳೆ ದಾಖಲಿಸಿಕೊಂಡ ಬಿ ರಿಪೋರ್ಟ್ಗಳನ್ನು ಸಮರ್ಪಕವಾಗಿ ನೀಡಿಲ್ಲ ಎಂದು ಎಸಿಬಿ ಎಡಿಜಿಪಿ ಸೀಮಂತ್ಕುಮಾರ್ ಸಿಂಗ್ ವಿರುದ್ಧ ಮತ್ತೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಐಎಎಸ್ ಅಧಿಕಾರಿ ಜೆ.ಮಂಜುನಾಥ್ ಲಂಚ ಪಡೆದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠ, 2022ರಲ್ಲಿ ದಾಖಲಿಸಿದ ಬಿ ರಿಪೋರ್ಟ್ಗಳನ್ನು ನೀವು ಸಮರ್ಪಕವಾಗಿ ಸಲ್ಲಿಸಿಲ್ಲ. ಕಾಟಾಚಾರಕ್ಕೆ ಬರೀ ಎರಡು ತಿಂಗಳ ಬಿ ರಿಪೋರ್ಟ್ಗಳನ್ನು ಮಾತ್ರ ಸಲ್ಲಿಸಿದ್ದೀರಿ. ಕೋರ್ಟ್ ಆದೇಶದ ಬಳಿಕ ಐಎಎಸ್ ಅಧಿಕಾರಿ ಮಂಜುನಾಥ್ ಅವರನ್ನು ಆರೋಪಿಯನ್ನಾಗಿ ಮಾಡಿ ಬಂಧಿಸಿದ್ದೀರಿ. ಈಗ ದಾಳಿ ಮಾಡಿದ್ದೀರಿ. ಈ ಮೊದಲೇ ಯಾಕೆ ದಾಳಿ ಮಾಡಲಿಲ್ಲ ಎಂದು ಎಸಿಬಿ ಪರ ವಕೀಲರನ್ನು ನ್ಯಾಯಪೀಠವು ಪ್ರಶ್ನಿಸಿತು.
ಎಸಿಬಿ ಎಡಿಜಿಪಿ ಸೀಮಂತ್ಕುಮಾರ್ ವಿರುದ್ಧ ನನಗೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ಎಸಿಬಿ ವಿರುದ್ಧ ಅನುಮಾನ ಬರಲೂ ಹಲವು ಕಾರಣಗಳಿವೆ. ನಿಮ್ಮ ಎಸಿಬಿ ಎಡಿಜಿಪಿ ಆತ್ಮಸಾಕ್ಷಿಯನ್ನು ಕೇಳಿಕೊಳ್ಳಲು ಹೇಳಿ ಎಂದು ಎಸಿಬಿಗೆ ನ್ಯಾಯಪೀಠವು ಸಂದೇಶ ರವಾನಿಸಿದೆ. ನೀವು ಗುರುವಾರ(ಇಂದು) ಕೊಟ್ಟ ವರದಿ ಸಂಪೂರ್ಣ ಸತ್ಯವಾದ ವರದಿಯಲ್ಲ, ನೀವು ಈ ರೀತಿ ಮಾಡುತ್ತೀರೆಂದು ತಿಳಿದೇ ಮಾಹಿತಿ ಪಡೆದಿದ್ದೇನೆ. ನೀವು ಈ ವರ್ಷ ಸಲ್ಲಿಸಿದ ಬಿ ರಿಪೋರ್ಟ್ಗಳ ಮಾಹಿತಿ ನೀಡಿಲ್ಲ. 819 ಸರ್ಚ್ ವಾರೆಂಟ್ಗಳನ್ನು ಪಡೆಯಲಾಗಿತ್ತು. 28 ಸರ್ಚ್ ವಾರೆಂಟ್ ಜಾರಿಗೊಳಿಸಲು ಸಾಧ್ಯವಾಗಿಲ್ಲ ಎಂದು ನ್ಯಾಯಪೀಠವು ಎಸಿಬಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತು.
ನೌಕರನಲ್ಲದ ವ್ಯಕ್ತಿ ಜಿಲ್ಲಾಧಿಕಾರಿಗೆ ಸಹಾಯಕನಾಗಲು ಹೇಗೆ ಸಾಧ್ಯ? ಡಿಸಿ ಸ್ವತಃ ಒಂದನೇಯ ಆರೋಪಿ ಜೊತೆ ಮಾತನಾಡಲು ಹೇಳಿದ್ದಾರೆ ಎಂಬ ಎಸಿಬಿ ಪರ ವಕೀಲರಿಗೆ ನ್ಯಾಯಪೀಠವು ಪ್ರಶ್ನೆಗಳನ್ನು ಕೇಳಿದೆ. ಅಲ್ಲದೆ, ನ್ಯಾಯಪೀಠವು, ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಸಲ್ಲಿಕೆ ಮಾಡಿರುವ ಬಿ ರಿಪೋರ್ಟ್ಗಳ ಮಾಹಿತಿಯನ್ನು ಸಲ್ಲಿಕೆ ಮಾಡುವಂತೆ ಹೈಕೋರ್ಟ್ ರಿಜಿಸ್ಟ್ರಾರ್ ಅವರಿಗೆ ಸೂಚಿಸಿದ ಪೀಠವು ಅರ್ಜಿ ವಿಚಾರಣೆಯನ್ನು ಜು.11ಕ್ಕೆ ಮುಂದೂಡಿತು.
ಸಿಬಿಐ ಎಸ್ಪಿಗೆ ಹಾಜರಿರಲು ಕೋರ್ಟ್ ಸೂಚನೆ: ಎಸಿಬಿ ಎಡಿಜಿಪಿ ಸೀಮಂತ್ಕುಮಾರ್ ಸಿಂಗ್ರ ಸರ್ವೀಸ್ ರೆಕಾರ್ಡ್ ದಾಖಲೆಯನ್ನು ಹೈಕೋರ್ಟ್ ಪರಿಶೀಲನೆ ನಡೆಸಿದೆ. ಸೀಮಂತ್ಕುಮಾರ್ಸಿಂಗ್ ಅವರು ಬಳ್ಳಾರಿ ಎಸ್ಪಿಯಾಗಿದ್ದಾಗ ಸಿಬಿಐ ದಾಳಿ ನಡೆಸಿದೆ. ಆದರೆ, ಯಾವುದೇ ಕ್ರಮಕ್ಕೂ ಶಿಫಾರಸ್ಸು ಆಗಿರಲಿಲ್ಲ. ಅದಿರು ಸಾಗಾಟಕ್ಕೆ ಲಂಚ ಸ್ವೀಕರಿಸುತ್ತಿದ್ದರೆಂದು ಆರೋಪಿಸಲಾಗಿದೆ. ಈ ಬಗ್ಗೆ ಸಿಬಿಐನಿಂದ ಸರಿಯಾದ ತನಿಖೆ ನಡೆದಿಲ್ಲ. ರಾಜ್ಯ ಸರಕಾರ ಸಿಬಿಐಗೆ ತನಿಖೆಗೆ ಸೂಚಿಸಿತ್ತು. ಆ ತನಿಖೆಯ ವರದಿಯನ್ನು ಸಲ್ಲಿಸಲು ಸಿಬಿಐ ವಕೀಲರಿಗೆ ನ್ಯಾಯಪೀಠವು ಸೂಚನೆ ನೀಡಿದೆ. ಇಲ್ಲವಾದರೆ ಸಿಬಿಐ ಎಸ್ಪಿ ಹಾಜರಿರುವಂತೆ ನ್ಯಾ.ಎಚ್.ಪಿ.ಸಂದೇಶ್ ಕೋರ್ಟ್ ಆದೇಶಿಸಿದೆ.
ಹೈಕೋರ್ಟ್ ಮೆಟ್ಟಿಲೇರಿದ ಎಸಿಬಿ ಎಡಿಜಿಪಿ
ಎಸಿಬಿ ಎಡಿಜೆಪಿ ಸೀಮಂತ್ಕುಮಾರ್ ಸಿಂಗ್ ವಿರುದ್ಧ ನ್ಯಾ. ಎಚ್.ಪಿ.ಸಂದೇಶ್ ಅವರ ಟೀಕೆ ಹಿನ್ನೆಲೆಯಲ್ಲಿ ಟೀಕೆಗೆ ನಿರ್ಬಂಧ ಕೋರಿ ಎಸಿಬಿ ಎಡಿಜಿಪಿ ಸೀಮಂತ್ಕುಮಾರ್ ಸಿಂಗ್ ಹೈಕೋರ್ಟ್ ಮೊರೆ ಹೋಗಿದ್ದಾರೆ. ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಸರ್ವೀಸ್ ರೆಕಾರ್ಡ್ ಹೇಳಿರುವ ಹೈಕೋರ್ಟ್ ಆದೇಶ ರದ್ದುಪಡಿಸಬೇಕು, ತಮ್ಮ ವಿರುದ್ಧ ಟೀಕೆ ಮಾಡದಂತೆ ನಿರ್ಬಂಧ ಹೇರಬೇಕು ಹಾಗೂ ಆದೇಶದಲ್ಲಿ ನ್ಯಾ.ಸಂದೇಶ್ ಅವರ ಮೌಖಿಕ ಅಭಿಪ್ರಾಯ ತೆಗೆಯುವಂತೆ ಮನವಿ ಮಾಡಿದ್ದಾರೆ.







