ಉಡುಪಿ ಜಿಲ್ಲೆಯಲ್ಲಿ ಮುಂದುವರಿದ ಮಳೆ; ನೆರೆ ಭೀತಿ
ನಾವುಂದದಲ್ಲಿ ಸತತ ಐದನೇ ದಿನವೂ ಜಲದಿಗ್ಭಂಧನ

ಉಡುಪಿ/ಕುಂದಾಪುರ : ಉಡುಪಿ ಜಿಲ್ಲೆಯಲ್ಲಿ ಸತತ ಮಳೆ ಸುರಿಯುತಿದ್ದರೂ, ಬೈಂದೂರು ತಾಲೂಕನ್ನು ಹೊರತು ಪಡಿಸಿ ಉಳಿದೆಡೆ ಪರಿಸ್ಥಿತಿ ನಿಯಂತ್ರಣ ದಲ್ಲಿದೆ. ಹವಾಮಾನ ಇಲಾಖೆಯ ರೆಡ್ ಅಲರ್ಟ್ ಮುನ್ಸೂಚನೆ ನಾಳೆಯೂ ಮುಂದುವರಿದಿರುವುದರಿಂದ ಜಿಲ್ಲಾಡಳಿತ ಯಾವುದೇ ಪರಿಸ್ಥಿತಿಯನ್ನು ಎದುರಿ ಸಲು ಸನ್ನದ್ಧವಾಗಿ ಕಟ್ಟೆಚ್ಚರದಲ್ಲಿದೆ.
ಆದರೆ ಕಳೆದ ಐದಾರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಯಿಂದಾಗಿ ಬೈಂದೂರು ತಾಲೂಕಿನ ನಾವುಂದ ಗ್ರಾಪಂ ವ್ಯಾಪ್ತಿಯ ಸಾಲ್ಬುಡ, ಭಾಂಗಿನ್ ಮನೆ, ಕಂಡಿಕೇರಿ, ಕೆಳಬದಿ ಪರಿಸರ ನಿವಾಸಿಗಳು ನೀರಿನ ನಡುವೆ ಐದನೇ ದಿನ ಕಾಲಕಳೆದಿದ್ದಾರೆ. ಮನೆಗಳ ಸುತ್ತಲೂ ನೀರು ಆವರಿಸಿಕೊಂಡರೂ, ಸ್ಥಳ ಬಿಟ್ಟು ಕದಲದ ಇಲ್ಲಿನ ನಿವಾಸಿಗಳು ಅಪಾಯದ ನಡುವೆ ದಿನ ಕಳೆಯುತ್ತಿದ್ದಾರೆ.
ತಣಿಯದ ಜನರ ಆಕ್ರೋಶ: ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸೌಪರ್ಣಿಕ ನದಿ ತೀರದ ತಗ್ಗು ಪ್ರದೇಶಗಳಿಗೆ ಕಳೆದ ಎಂಟು ದಿನಗಳಿಂದ ನೀರು ನುಗ್ಗಿದೆ. ನಾವುಂದ- ಅರೆಹೊಳೆಗೆ ಸಂಪರ್ಕ ಕಲ್ಪಿಸುವ ರಸ್ತೆ ಸುಮಾರು ಎರಡು ಕಿ.ಮೀನಷ್ಟು ಮುಳುಗಡೆಯಾಗಿದ್ದು, ಜಲದಿಗ್ಭಂಧನವಿದೆ. ಈ ಭಾಗದ ಸುಮಾರು ಎಂಭತ್ತಕ್ಕೂ ಮಿಕ್ಕಿ ಮನೆಗಳು ನೀರಿನಿಂದ ಆವೃತವಾಗಿವೆ. ಕ್ಷಣಕ್ಷಣಕ್ಕೂ ನೆರೆಯ ಪ್ರಮಾಣ ಏರಿಕೆ ಯಾಗುತ್ತಿದ್ದರೂ ಜನರ ಸುರಕ್ಷತೆಗಾಗಿ ಎನ್ಡಿಆರ್ಎಫ್ ತಂಡವನ್ನೂ ಕರೆಸಿ ಕೊಳ್ಳದ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ವಿರುದ್ದ ಇಲ್ಲಿನ ನಿವಾಸಿಗಳು ಆಕ್ರೋಶ ಹೊರಹಾಕಿದ್ದಾರೆ.
ನೆರೆ ಭೀತಿ ಹಿನ್ನೆಲೆಯಲ್ಲಿ ನಾವುಂದ ಗ್ರಾಪಂನಿಂದ ನಾಲ್ಕು ದೋಣಿಗಳನ್ನು ನೀಡಲಾಗಿದ್ದು, ಇದರಲ್ಲಿ ಒಂದು ದೋಣಿಯನ್ನು ರಿಪೇರಿಗೆ ಕಳುಹಿಸಲಾಗಿದೆ. ಉಳಿದಂತೆ ಎರಡು ದೊಡ್ಡ ಹಾಗೂ ಒಂದು ಸಣ್ಣ ದೋಣಿಗಳನ್ನೇ ಇಲ್ಲಿನ ಜನರು ಬಳಸುತ್ತಿದ್ದು. ಮೂರು ದೋಣಿಗಳಿದ್ದರೂ ಸಕಾಲದಲ್ಲಿ ಅದು ಜನರಿಗೆ ನೆರವಾಗುತ್ತಿಲ್ಲ.
ಕುಡಿಯುವ ನೀರು, ದಿನಸಿಗೆ ದೋಣಿ: ಶುಕ್ರವಾರ ಪಂಚಾಯತ್ನಿಂದ ಕುಡಿಯುವ ನೀರಿನ ವ್ಯವಸ್ಥೆಗಾಗಿ ಒಂದು ದೋಣಿ ಉಪಯೋಗಿಸಲಾಗುತ್ತಿದ್ದು, ಸ್ಥಳೀಯ ನಿವಾಸಿಗಳಿಗೆ ಎರಡೇ ದೋಣಿ ಇರುವುದರಿಂದ ದಿನಸಿ ಇನ್ನಿತರ ಸಾಮಗ್ರಿ ತರಲು ಗಂಟೆಗಟ್ಟಲೆ ದೋಣಿಗಾಗಿ ನಿಲ್ಲಬೇಕಾದ ಅನಿವಾರ್ಯತೆ ಯಿದೆ. ದೋಣಿಗಾಗಿ ಕಾದು ಕಾದು ಸುಸ್ತಾದ ಜನರು ಎದೆಯ ಮಟ್ಟದಲ್ಲಿರುವ ನೆರೆ ನೀರಿನಲ್ಲೇ ನಡೆದುಕೊಂಡು ಹೋದ ಪ್ರಸಂಗವೂ ಶುಕ್ರವಾರ ನಡೆದಿದೆ. ಹೀಗಾಗಿ ಇನ್ನೂ ಹೆಚ್ಚಿನ ದೋಣಿಗಳನ್ನು ನೀಡಬೇಕು ಹಾಗೂ ದೋಣಿ ನಡೆಸುವವರನ್ನೂ ನಿಯೋಜಿಸಬೇಕು ಎಂದು ಆಗ್ರಹಿಸುತಿದ್ದಾರೆ.
ಗುರುವಾರ ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಶುಕ್ರವಾರ ತಾಲೂಕು ಆಡಳಿತ, ಪಂಚಾಯತ್ ಸದಸ್ಯರು, ಸ್ಥಳೀಯ ಯುವಕರು ಬಿಟ್ಟರೆ ಸಂಜೆ ಮೂರು ಗಂಟೆಯ ತನಕವೂ ಯಾವ ತಂಡವೂ ಬಂದಿಲ್ಲ. ನೆರೆ ನೀರು ದಿನದಿಂದ ದಿನಕ್ಕೆ ಅಧಿಕವಾಗುತ್ತಿದ್ದು, ತೀವ್ರ ಗಾಳಿ ಬಂದರೆ ಮತ್ತೆ ಹೆಚ್ಚಾಗುವ ಸಾಧ್ಯತೆ ಇದೆ. ಮಧ್ಯರಾತ್ರಿ ನೆರೆ ನೀರು ಮನೆಗಳಿಗೆ ನುಗ್ಗಿ ಸಂಪೂರ್ಣ ಮನೆಗಳು ಮುಳುಗಿದರೆ ಜನರನ್ನು ಸಾಗಾಟ ಮಾಡಲು ಯಾವ ಮುಂಜಾಗೃತ ಕ್ರಮಕೈಗೊಳ್ಳಲಾಗಿಲ್ಲ.
ನೆರೆ ಸಂತ್ರಸ್ತ ಮನೆಗೆ ನೀರು ಪೂರೈಕೆ: ಸಾಲ್ಬುಡ, ಬಾಂಗಿನ್ಮನೆ, ಕಂಡಿಕೇರಿ, ಕೆಳಬದಿ ಸುತ್ತಮುತ್ತಲಿನ ಪ್ರದೇಶದ ನೆರೆ ನೀರಿನಿಂದಾವೃತವಾದ ಮನೆಗಳಿಗೆ ಶುಕ್ರವಾರ ಕುಡಿಯುವ ನೀರನ್ನು ಪೂರೈಸಲಾಗಿದೆ. ನೆರೆ ಬಂದು ಬಾವಿ ನೀರು ಸಂಪೂರ್ಣ ಕಲುಷಿತಗೊಂಡಿದ್ದು, ತುರ್ತು ಅಗತ್ಯಕ್ಕಾಗಿ ನೀರನ್ನು ನೀಡಲಾಗಿದೆ. ತಹಶೀಲ್ದಾರ್ ಕಿರಣ್ ಗೌರಯ್ಯ ಅವರ ನೇತೃತ್ವದಲ್ಲಿ ನೀರು ಪೂರೈಕೆ ಕಾರ್ಯ ನಡೆಯುತ್ತಿದೆ. ನಾವುಂದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ಪುನರ್ವಸತಿ ಕೇಂದ್ರ ತೆರೆಯಲಾಗಿದ್ದು, ಜನರು ಮನೆ ಬಿಟ್ಟು ಬರದ ಕಾರಣ ಪ್ರಯೋಜನಕ್ಕೆ ಬಾರದಂತಾಗಿದೆ. ಉಳಿದಂತೆ ಸಕಾಲದಲ್ಲಿ ಜಾನುವಾರು ಶೆಡ್ ತೆರೆಯದೇ ವಿಳಂಬವಾದ ಕಾರಣ ನೆರೆ ಸಂತ್ರಸ್ತರಿಗೆ ಪ್ರಯೋಜನವಿಲ್ಲದಂತಾಗಿದೆ. ಸುರಕ್ಷಿತ ಮನೆಗಳಲ್ಲಿ ಜಾನುವಾರು ಗಳನ್ನು ಕಟ್ಟಿ ಹಾಕಿದ್ದರಿಂದ ಜಾನುವಾರಗಳಿಗೆ ಮೇವು ಹಾಕಲು ಹೋಗದ ಪರಿಸ್ಥಿತಿ ತಲೆದೋರಿದೆ.
ಗದ್ದೆಯಲ್ಲಿ ಕೃಷಿ ನಾಶ: ನಾವುಂದ ಗ್ರಾಮದ ಸುಮಾರು 30 ಹೆಕ್ಟೇರ್ ನಾಟಿ ಮಾಡಿದ ಕೃಷಿ ಗದ್ದೆಗಳು ಸಂಪೂರ್ಣವಾಗಿ ನೆರೆ ನೀರಿನಲ್ಲಿ ಮುಳುಗಡೆಯಾಗಿದೆ. ಅದರಲ್ಲೂ ಕೆಲವೆಡೆ ವಾರದ ಹಿಂದಷ್ಟೇ ನಾಟಿ ಮಾಡಲಾಗಿದ್ದು, ವಾರದಿಂದ ಗದ್ದೆಗಳಲ್ಲಿ ನೀರು ನಿಂತ ಪರಿಣಾಮ ಪೈರು ಕೊಳೆಯುವ ಸ್ಥಿತಿ ಇದೆ.
ರಾ.ಹೆದ್ದಾರಿಯಲ್ಲಿ ಸಂಚಾರ ಸಮಸ್ಯೆ: ಇನ್ನು ಕೊಲ್ಲೂರು, ಕುಂದಾಪುರ, ಹಾಲಾಡಿ ಸಹಿತ ಮಲೆನಾಡು ತಪ್ಪಲು ಭಾಗದಲ್ಲಿ ಶುಕ್ರವಾರ ಬೆಳಗಿನಿಂದ ಮಳೆಯಾಗುತ್ತಿದ್ದರೂ ಕೂಡ ಅಂತಹ ಸಮಸ್ಯೆ ಸೃಷ್ಟಿಯಾಗಿಲ್ಲ. ಕುಂದಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿಯ ವಿವಿದೆಡೆ ಸರ್ವೀಸ್ ರಸ್ತೆಯಲ್ಲಿ ಕೃತಕ ಕೆರೆ ಸೃಷ್ಟಿಯಾಗಿ ವಾಹನ ಸವಾರರು ಸುಗಮ ಸಂಚಾರಕ್ಕೆ ಪರದಾಡುವಂತಾಗಿತ್ತು. ಕೋಟೇಶ್ವರ, ಗೋಪಾಡಿ, ಕುಂಭಾಸಿ, ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿಯೂ ಮಳೆ ನೀರು ನಿಂತು ಸವಾರರಿಗೆ ಸಮಸ್ಯೆ ಉಂಟಾಗಿತ್ತು.
ಉಳಿದಂತೆ ತಾಲೂಕಿನಲ್ಲಿ ಕೃಷಿ ಭೂಮಿಗಳು ಜಲಾವೃತಗೊಂಡಿದ್ದು ಭತ್ತದ ಕೃಷಿಗೆ ವ್ಯಾಪಕ ಹಾನಿಯಾಗಿದೆ. ಗ್ರಾಮೀಣ ಭಾಗಗಳಾದ ಮಲ್ಯಾಡಿ, ಉಳ್ತೂರು, ಕೊರವಡಿ, ಕಾಳಾವರ, ಕಟ್ಕೇರಿ ಪ್ರದೇಶದಲ್ಲಿ ನೆರೆ ಪ್ರಮಾಣ ಹೆಚ್ಚಾಗಿತ್ತು. ತೆಕ್ಕಟ್ಟೆ ಗ್ರಾಪಂ ವ್ಯಾಪ್ತಿಯ ಮಲ್ಯಾಡಿಯ ಜನತಾ ಕಾಲನಿಯಲ್ಲಿ ಕೃಷ್ಣ ಹಾಗೂ ಸುಶೀಲಾ ಎನ್ನುವರ ಮನೆ ಜಲಾವೃತವಾಗಿದ್ದು ಗ್ರಾಪಂ ಸದಸ್ಯರಾದ ಲಕ್ಷ್ಮೀ, ಸುರೇಶ ಶೆಟ್ಟಿ, ಸತೀಶ್ ದೇವಾಡಿಗ, ಪಿಡಿಒ ಸುನಿಲ್ ಕುಮಾರ್ ಭೇಟಿ ನೀಡಿ ಧೈರ್ಯ ತುಂಬಿದರು.
ಸಾಣೂರಿನಲ್ಲಿ ಭೂಕುಸಿತ: ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳಲ್ಲಿ ಮಳೆ ಮುಂದುವರಿದಿದ್ದರೂ ಯಾವುದೇ ಅಪಾಯದ ಸನ್ನಿವೇಶ ಎದುರಾಗಿಲ್ಲ. ಹೆಬ್ರಿ ತಾಲೂಕಿನ ಅಂಡಾರು ಗ್ರಾಮದಲ್ಲಿ ಒಂದು ಸಂಪರ್ಕ ಸೇತುವೆಗೆ ಹಾನಿಯಾಗಿದ್ದರೆ, ಕಾರ್ಕಳ ತಾಲೂಕಿನ ಸಾಣೂರಿನ ಸರಕಾರಿ ಪದವಿ ಪೂರ್ವ ಕಾಲೇಜಿನ ಹಿಂಭಾಗದ ಗುಡ್ಡ ಕುಸಿದಿದ್ದು, ನೀರು ಕಾಲೇಜಿನೊಳಗೆ ಹರಿದು ಬರುತ್ತಿದೆ. ತುರ್ತು ಪರಿಹಾರಕ್ಕೆ ಸಚಿವರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ತಿಳಿಸಿದ್ದಾರೆ.











