ಸಿಎಂ ಬೊಮ್ಮಾಯಿ ಮಾನವೀಯತೆಯನ್ನು ಮರೆತಿದ್ದಾರೆ: ಶಾಸಕ ಪ್ರಿಯಾಂಕ್ ಖರ್ಗೆ
''ಚಕ್ರತೀರ್ಥನ ಮೇಲೆ ಇರುವ ಪ್ರೀತಿ, ಶಾಲಾ ಮಕ್ಕಳ ಮೇಲೆ ಏಕಿಲ್ಲ?''

ಬೆಂಗಳೂರು, ಜು.9: ಮುಖ್ಯಮಂತ್ರಿ ಮಾನವೀಯತೆಯನ್ನು ಮರೆತಿದ್ದಾರೆ. ಕೋವಿಡ್ ಸಮಯದಲ್ಲಿ ಬಡ ಕಾರ್ಮಿಕರು ತಮ್ಮ ಊರಿಗೆ ಹೋಗಬೇಕಾದರೆ, ಬಿಜೆಪಿ ಸರಕಾರ ದುಪ್ಪಟ್ಟು ಟಿಕೆಟ್ ದರ ನಿಗದಿ ಮಾಡಿತ್ತು. ಆಗ ನಾವೆಲ್ಲರೂ ಹೋಗಿ ಹಣ ಸಂಗ್ರಹಿಸಿ ಕೆಎಸ್ಸಾರ್ಟಿಸಿ ಹಾಗೂ ಬಿಎಂಟಿಸಿಗೆ ನೀಡಲು ಹೋದಾಗ ಅವರಿಗೆ ಮಾನವೀಯತೆ ಮೆರೆಯಬೇಕು ಎಂದು ಜ್ಞಾನೋದಯವಾಗಿ ನಂತರ ಉಚಿತ ಬಸ್ ಪ್ರಯಾಣ ವ್ಯವಸ್ಥೆ ಕಲ್ಪಿಸಿದರು ಎಂದು ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಹೇಳಿದರು.
ಶನಿವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲಾ ಮಕ್ಕಳಿಗೆ ಸರಕಾರದ ವತಿಯಿಂದ ನೀಡಲಾಗುವ ಪಠ್ಯಪುಸ್ತಕ, ಶೂ ಹಾಗೂ ಸಾಕ್ಸ್ ಳನ್ನು ಈ ವರ್ಷ ಇದುವರೆಗೂ ಯಾಕೆ ನೀಡಿಲ್ಲ? ಇದು ಹೊಸ ಯೋಜನೆಯೇ? ಪಠ್ಯದಲ್ಲಿ ಇತಿಹಾಸ ತಿರುಚಿ, ಮಹನೀಯರಿಗೆ ಅಪಮಾನ ಮಾಡಲು 150 ಕೋಟಿ ಖರ್ಚು ಮಾಡಲು ತಯಾರಿದ್ದೀರಿ. ಆದರೆ ಮಕ್ಕಳಿಗೆ ಶೂ ಹಾಗೂ ಸಾಕ್ಸ್ ನೀಡಲು ಸರಕಾರದ ಬಳಿ 130 ಕೋಟಿ ಹಣ ಇಲ್ಲವೇ? ಎಂದು ಪ್ರಶ್ನಿಸಿದರು.
ಬಿಜೆಪಿ ಸರಕಾರಕ್ಕೆ ಚಕ್ರತೀರ್ಥನ ಮೇಲೆ ಇರುವ ಪ್ರೀತಿ, ನಮ್ಮ ಶಾಲಾ ಮಕ್ಕಳ ಮೇಲೆ ಏಕಿಲ್ಲ? ಪ್ರತಿ ವರ್ಷ ಮಕ್ಕಳು ಪ್ರತಿಭಟನೆ ಮಾಡಿ ಸಮವಸ್ತ್ರ ಪಡೆಯಬೇಕಾ? ಪ್ರತಿ ಬಾರಿ ವಿರೋಧ ಪಕ್ಷಗಳು ಭಿಕ್ಷೆ ಬೇಡಿ ಹಣ ನೀಡಬೇಕಾ? ಸರಕಾರಕ್ಕೆ 130 ಕೋಟಿ ನೀಡುವ ಯೋಗ್ಯತೆ ಇಲ್ಲವೇ? ಎಂದು ಪ್ರಿಯಾಂಕ್ ಖರ್ಗೆ ಕಿಡಿಗಾರಿದರು.
ಮುಖ್ಯಮಂತ್ರಿಗಳು ಶೂ ಹಾಗೂ ಸಾಕ್ಸ್ ವಿತರಣೆಗೆ 132 ಕೋಟಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಇದು ಮಕ್ಕಳ ವಿಚಾರವಾಗಿದ್ದು ಸರಕಾರ ಇದರಲ್ಲಿ 40 ಪರ್ಸೆಂಟ್ ಕಮಿಷನ್ ಒಡೆಯದೇ ಇದ್ದರೆ ಒಳ್ಳೆಯದು. ಕಳೆದ 3 ವರ್ಷಗಳಿಂದ ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡಿಲ್ಲ. ಕಳೆದ ವರ್ಷ 2 ಜೊತೆ ಸಮವಸ್ತ್ರ ನೀಡಬೇಕಿದ್ದ ಸರಕಾರ ಕೇವಲ ಒಂದು ಜೊತೆ ಸಮವಸ್ತ್ರ ನೀಡಿತ್ತು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಬಿ.ಸಿ.ನಾಗೇಶ್ ಓರ್ವ ಜವಾಬ್ದಾರಿಯುತ ಶಿಕ್ಷಣ ಸಚಿವರಾಗಿದ್ದು, ನೀವು ಮಧ್ಯಾಹ್ನ ಬಿಸಿಯೂಟ ಪ್ರಾರಂಭ ಮಾಡಿದ್ದು ಯಾಕೆ ಎಂಬ ಉದ್ದೇಶವನ್ನು ತಿಳಿಯಬೇಕು. ಮಕ್ಕಳು ಶಾಲೆಯನ್ನು ಸೇರಲಿ ಎಂದು ಈ ಯೋಜನೆ ಜಾರಿಗೆ ತರಲಾಯಿತು. ನಿಮ್ಮ ಸಮೀಕ್ಷೆಗಳು ಎಲ್ಲಿವೆ? ನೀವು ಹೈಕೋರ್ಟ್ಗೆ ಸಲ್ಲಿಸಿರುವ ಸಮೀಕ್ಷೆ ವರದಿ ಪ್ರಕಾರ ಅಂಗನವಾಡಿ ಮಕ್ಕಳಿಂದ ಪ್ರೌಢ ಶಾಲೆವರೆಗೂ ರಾಜ್ಯದಲ್ಲಿ 10 ಲಕ್ಷ ಮಕ್ಕಳು ಶಾಲೆಯಿಂದ ಹೊರಗಿದ್ದಾರೆ. ಅವರನ್ನು ಶಾಲೆಗೆ ವಾಪಸ್ ಕರೆತರುವ ಯೋಗ್ಯತೆ ನಿಮಗೆ ಇಲ್ಲ ಎಂದು ಅವರು ಟೀಕಿಸಿದರು.
ಮಕ್ಕಳು ಶಿಕ್ಷಣಕ್ಕೆ ಬರುತ್ತಾರೆಯೇ ಹೊರತು ಶೂ, ಸಾಕ್ಸ್ಗಳಿಗೆ ಅಲ್ಲ ಎನ್ನುತ್ತೀರಿ. ನಿಮಗೆ ಬಡತನ ಎಂದರೆ ಗೊತ್ತಿದೆಯಾ? ಶಿವಮೊಗ್ಗದಲ್ಲಿನ ಶಾಲಾ ಮಕ್ಕಳಿಗೆ ಎಷ್ಟು ಶೂ ಸಾಕ್ಸ್ ಬೇಕಾಗಿದೆ ಎಂದು ಹೋಗಿ ಕೇಳಿ. ಮಕ್ಕಳು ನಾಲ್ಕೈದು ಕಿ.ಮೀ ನಡೆದುಕೊಂಡು ಶಾಲೆಗೆ ಬರಬೇಕಿದೆ. ಈ ಮಧ್ಯೆ ನಿಮ್ಮ ಸೈಕಲ್ ಯೋಜನೆ ಎಲ್ಲಿ ಹೋಯಿತು? ಎಂದು ಅವರು ಪ್ರಶ್ನಿಸಿದರು.
ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನಾದರೂ ನೀಡುತ್ತಿದ್ದೀರಾ? ಇಲ್ಲ. ಬಸವಣ್ಣನವರ ಬಗ್ಗೆ ಏನು ಹೇಳಿದ್ದೀರಿ, ನಾರಾಯಣಗುರುಗಳ ಪರಿಚಯ ಇಲ್ಲ, ಅಂಬೇಡ್ಕರ್, ಶಂಕರಾಚಾರ್ಯ ಕುರಿತು ಏನು ಹೇಳುತ್ತಿದ್ದೀರಲ್ಲ ಅದು ಗುಣಮಟ್ಟದ ಶಿಕ್ಷಣವೇ? ಜವಾಬ್ದಾರಿಯುತ ಸ್ಥಾನದಲ್ಲಿರುವ ತಾವು ಉದಾರವಾಗಿ ಆಲೋಚಿಸಿ ಎಂದು ಪ್ರಿಯಾಂಕ್ ಖರ್ಗೆ ಸಲಹೆ ನೀಡಿದರು.
ಶಿಕ್ಷಣ ಇಲಾಖೆ ಹಾಗೂ ನಿಗಮಗಳ ಯೋಜನೆ ಸಾಮಾಜಿಕ ಸೇವೆ ಯೋಜನೆಗಳು. ಲಾಭ ಮಾಡಿಕೊಳ್ಳುವ ಯೋಜನೆಗಳಲ್ಲ. ನೀವು ಇದರಲ್ಲೂ ಕಮಿಷನ್ ಕಾಯುತ್ತಾ ಕೂರಬೇಡಿ. ಸಮವಸ್ತ್ರ, ಗುಣಮಟ್ಟದ ಶಿಕ್ಷಣ, ಶೂ, ಸಾಕ್ಸ್ ಸೇರಿದಂತೆ ಅವರಿಗೆ ಏನೆಲ್ಲಾ ನೀಡಬೇಕೋ ಅದನ್ನು ತಲುಪಿಸಿ. ರಾಯಚೂರು, ಗುಲ್ಬರ್ಗ ಭಾಗದ ಮಕ್ಕಳಲ್ಲಿ ಅಪೌಷ್ಠಿಕತೆ ಹೆಚ್ಚುತ್ತಿದೆ. ಆ ಬಗ್ಗೆ ನಿಮ್ಮಲ್ಲಿ ಯಾವ ಯೋಜನೆ ಇದೆ? ಎಂದು ಅವರು ಪ್ರಶ್ನಿಸಿದರು.
ಪಿಎಸ್ಐ ನೇಮಕಾತಿ ಅಕ್ರಮ ವಿಚಾರ: ಪಿಎಸ್ಐ ನೇಮಕಾತಿ ಅಕ್ರಮದ ಕುರಿತು ಕಾಂಗ್ರೆಸ್ ಬಳಿ ಯಾವ ಸಾಕ್ಷ್ಯಾಧಾರಗಳಿವೆ ಎಂದು ಪ್ರಶ್ನಿಸಿರುವ ಬಿಜೆಪಿಗೆ ತಿರುಗೇಟು ನೀಡಿದ ಅವರು, ಈ ಪ್ರಕರಣದ ತನಿಖೆಯನ್ನು ನಡೆಸಲು ಸರಕಾರ ಅಸಮರ್ಥವಾಗಿದೆ ಎಂದು ಒಪ್ಪಿಕೊಳ್ಳಲಿ. ಅವರಿಗೆ ತನಿಖೆ ಮಾಡಲು ಸಾಧ್ಯವಾಗದಿದ್ದರೆ ತನಿಖೆಯ ಅಧಿಕಾರವನ್ನು ನಮ್ಮ ಕೈಗೆ ನೀಡಲಿ, ನಾವು ಮಾಡಿ ತೋರಿಸುತ್ತೇವೆ ಎಂದರು.
ಗೃಹ ಸಚಿವರು ಮಾತೆತ್ತಿದರೆ ಈ ಪ್ರಕರಣದಲ್ಲಿ ಕಾಂಗ್ರೆಸಿಗರು ಇದ್ದಾರೆ ಎನ್ನುತ್ತಾರೆ. ಈ ಪ್ರಕರಣದಲ್ಲಿ ಬಿಜೆಪಿಯವರಿಲ್ಲ, ಕಾಂಗ್ರೆಸಿಗರಿದ್ದಾರೆ ಎಂದಾದರೆ ಯಾಕೆ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡುತ್ತಿಲ್ಲ? ಇನ್ನು ಮುಖ್ಯಮಂತ್ರಿ ಕಳೆದ ಕಾಂಗ್ರೆಸ್ ಸರಕಾರದ ಅಕ್ರಮಗಳನ್ನು ತೆಗೆಯುವುದಾಗಿ ಹೇಳಿದ್ದಾರೆ. ನೀವು ಕೇವಲ 5 ವರ್ಷ ಮಾತ್ರವಲ್ಲ, ಕಳೆದ 50 ವರ್ಷಗಳ ಪ್ರಕರಣವನ್ನು ತೆಗೆಯಿರಿ ಎಂದು ಪ್ರಿಯಾಂಕ್ ಖರ್ಗೆ ಸವಾಲು ಹಾಕಿದರು.







