ಅಮರನಾಥ ಮೇಘಸ್ಫೋಟ:15,000 ಜನರ ರಕ್ಷಣೆ,40 ಜನರು ಇನ್ನೂ ನಾಪತ್ತೆ
![ಅಮರನಾಥ ಮೇಘಸ್ಫೋಟ:15,000 ಜನರ ರಕ್ಷಣೆ,40 ಜನರು ಇನ್ನೂ ನಾಪತ್ತೆ ಅಮರನಾಥ ಮೇಘಸ್ಫೋಟ:15,000 ಜನರ ರಕ್ಷಣೆ,40 ಜನರು ಇನ್ನೂ ನಾಪತ್ತೆ](https://www.varthabharati.in/sites/default/files/images/articles/2022/07/9/341875-1657389004.jpeg)
ಹೊಸದಿಲ್ಲಿ,ಜು.9: ಪವಿತ್ರ ಅಮರನಾಥ ಮಂದಿರದ ಬಳಿ ಶುಕ್ರವಾರ ಮೇಘಸ್ಫೋಟದಿಂದಾಗಿ ಉಂಟಾದ ದಿಢೀರ್ ಪ್ರವಾಹಕ್ಕೆ ಸಿಲುಕಿ ಸಾವನ್ನಪ್ಪಿದವರ ಸಂಖ್ಯೆ ಕನಿಷ್ಠ 16ಕ್ಕೇರಿದ್ದು,40ಕ್ಕೂ ಅಧಿಕ ಜನರು ಈಗಲೂ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.ಶುಕ್ರವಾರ ಸಂಜೆಯಿಂದ ಮಂದಿರ ಪ್ರದೇಶದ ಬಳಿ ಸಿಕ್ಕಿಹಾಕಿಕೊಂಡಿದ್ದ ಹೆಚ್ಚಿನ ಯಾತ್ರಿಗಳನ್ನು ಅಮರನಾಥ ಯಾತ್ರೆಯ ಮೂಲಶಿಬಿರವಾಗಿರುವ ಪಂಚತರ್ನಿಗೆ ಸ್ಥಳಾಂತರಿಸಲಾಗಿದೆ. ಗಾಯಗೊಂಡಿರುವ 21 ಜನರನ್ನು ಶನಿವಾರ ಬೆಳಿಗ್ಗೆ ಹೆಲಿಕಾಪ್ಟರ್ ಮೂಲಕ ಬಲ್ತಾಲ್ಗೆ ಸಾಗಿಸಲಾಗಿದೆ.
16 ಜನರು ಮೃತಪಟ್ಟಿರುವುದು ದೃಢಪಟ್ಟಿದೆ. ಸುಮಾರು 40 ಜನರು ಈಗಲೂ ನಾಪತ್ತೆಯಾಗಿದ್ದಾರೆ. ಯಾವುದೇ ಭೂಕುಸಿತ ವರದಿಯಾಗಿಲ್ಲ. ಧಾರಾಕಾರ ಮಳೆ ಮುಂದುವರಿದಿದೆಯಾದರೂ ಅದು ರಕ್ಷಣಾ ಕಾರ್ಯಾಚರಣೆಗಳಿಗೆ ಅಡ್ಡಿಯನ್ನುಂಟು ಮಾಡಿಲ್ಲ. 100ಕ್ಕೂ ಅಧಿಕ ಸಿಬ್ಬಂದಿಗಳನ್ನು ಒಳಗೊಂಡಿರುವ ಎನ್ಡಿಆರ್ಎಫ್ನ ನಾಲ್ಕು ತಂಡಗಳು ರಕ್ಷಣಾ ಕಾರ್ಯಾಚರಣೆಗಳಲ್ಲಿ ತೊಡಗಿವೆ. ಜೊತೆಗೆ ಭಾರತೀಯ ಸೇನೆ,ಎಸ್ಡಿಆರ್ಎಫ್,ಸಿಪಿಆರ್ಎಫ್ ಮತ್ತು ಇತರರಿಂದ ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿವೆ ಎಂದು ಎನ್ಡಿಆರ್ಎಫ್ನ ಮಹಾ ನಿರ್ದೇಶಕ ಅತುಲ್ ಕರ್ವಾಲ್ ಅವರನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.
ಚಿನಾರ್ ಕಾರ್ಪ್ಸ್ ಕಮಾಂಡರ್ ಲೆ.ಜ.ಎಡಿಎಸ್ ಔಜ್ಲಾ ಅವರು ಪರಿಸ್ಥಿತಿಯ ಅವಲೋಕನಕ್ಕಾಗಿ ಮೇಘಸ್ಫೋಟ ಬಾಧಿತ ಪ್ರದೇಶದಲ್ಲಿದ್ದಾರೆ. ಕಾಶ್ಮೀರದ ಐಜಿಪಿ ವಿಜಯಕುಮಾರ ಮತ್ತು ವಿಭಾಗಾಧಿಕಾರಿಗಳು ರಕ್ಷಣಾ ಕಾರ್ಯಾಚರಣೆಗಳ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
ಮೇಘಸ್ಫೋಟದಿಂದಾಗಿ ಉಂಟಾದ ಪ್ರವಾಹವು ಕೆಸರು ಮತ್ತು ಬಂಡೆಗಲ್ಲುಗಳೊಂದಿಗೆ ಡೇರೆಗಳು ಮತ್ತು ಸಮುದಾಯ ಪಾಕಶಾಲೆಗಳನ್ನು ಆವರಿಸಿಕೊಂಡ ಭೀಕರ ಅನುಭವಗಳನ್ನು ಪೀಡಿತ ಪ್ರದೇಶಗಳಿಂದ ಸುರಕ್ಷಿತವಾಗಿ ಸ್ಥಳಾಂತರಗೊಂಡಿರುವ ಯಾತ್ರಿಕರು ಹಂಚಿಕೊಂಡಿದ್ದಾರೆ. ಮೇಘಸ್ಫೋಟ ಸಂಭವಿಸಿದ್ದ ಸ್ಥಳದಿಂದ ಎರಡು ಕಿ.ಮೀ.ದೂರದಲ್ಲಿದ್ದ ಮಂಟಪಗಳೂ ಹಾನಿಗೀಡಾಗಿವೆ ಎಂದು ಅವರು ತಿಳಿಸಿದರು.
ಮೇಘಸ್ಫೋಟ ಸಂಭವಿಸಿದ್ದ ಹತ್ತೇ ನಿಮಿಷಗಳಲ್ಲಿ ಎಂಟು ಸಾವುಗಳು ಸಂಭವಿಸಿದ್ದವು. ಪ್ರವಾಹದ ನೀರು ಭಾರೀ ಸಂಖ್ಯೆಯಲ್ಲಿ ಕಲ್ಲುಗಳನ್ನು ಹೊತ್ತು ತಂದಿತ್ತು. ಅಲ್ಲಿ ಸುಮಾರು 15,000 ಯಾತ್ರಿಗಳಿದ್ದರು. ಭಾರೀ ಮಳೆಯಾಗುತ್ತಿದ್ದರೂ ಯಾತ್ರಿಗಳ ಆಗಮನ ಮುಂದುವರಿದೇ ಇತ್ತು ಎಂದು ಯಾತ್ರಿಕರೋರ್ವರು ಹೇಳಿದರು.
ನೂಕುನುಗ್ಗಲಿನಂತಹ ಪರಿಸ್ಥಿತಿ ಉಂಟಾಗಿತ್ತಾದರೂ ಸೇನೆಯು ಸಾಕಷ್ಟು ನೆರವಾಗಿತ್ತು. ಯಾತ್ರಿಗಳಿಗಾಗಿ ಹಾಕಲಾಗಿದ್ದ ಹಲವಾರು ಮಂಟಪಗಳು ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ ಎಂದು ಉತ್ತರ ಪ್ರದೇಶದ ಹರ್ದೋಯಿ ನಿವಾಸಿ ದೀಪಕ ಚೌಹಾಣ ತಿಳಿಸಿದರು.
ಪರಿಸ್ಥಿತಿ ನಿಯಂತ್ರಣದಲ್ಲಿದೆ. ಈಗಲೂ ಮಳೆಯಾಗುತ್ತಿದೆ. ಪ್ರದೇಶವು ಜಲಾವೃತಗೊಂಡಿರುವುದರಿಂದ ಅಪಾಯವನ್ನು ಗಮನದಲ್ಲಿಟ್ಟುಕೊಂಡು ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಐಟಿಬಿಪಿ ವಕ್ತಾರ ವಿವೇಕಕುಮಾರ ಪಾಂಡೆ ತಿಳಿಸಿದರು.
ಶುಕ್ರವಾರ ಸಂಜೆ 5:30ರ ಸುಮಾರಿಗೆ ಮೇಘಸ್ಫೋಟದಿಂದಾಗಿ ಉಂಟಾಗಿದ್ದ ದಿಢೀರ್ ಪ್ರವಾಹವು ಮಂದಿರದ ಹೊರಗಿನ ಮೂಲಶಿಬಿರಗಳಿಗೆ ಅಪ್ಪಳಿಸಿತ್ತು. 25 ಡೇರೆಗಳು ಮತ್ತು ಯಾತ್ರಿಗಳಿಗೆ ಆಹಾರವನ್ನು ಒದಗಿಸುತ್ತಿದ್ದ ಮೂರು ಸಮುದಾಯ ಪಾಕಶಾಲೆಗಳಿಗೆ ಹಾನಿಯುಂಟಾಗಿತ್ತು. ಮಂದಿರದಲ್ಲಿರುವ ಸ್ವಯಂಚಾಲಿತ ಹವಾಮಾನ ಕೇಂದ್ರದ ಮಾಹಿತಿಯಂತೆ ಈ ಪ್ರದೇಶದಲ್ಲಿ ಸಂಜೆ 4:30ರಿಂದ 6:30ರ ನಡುವೆ 31 ಮಿ.ಮೀ. ಮಳೆಯಾಗಿತ್ತು.
ಈ ದುರಂತದಲ್ಲಿ ಸಂಭವಿಸಿರುವ ಸಾವುಗಳಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ದುಃಖ ವ್ಯಕ್ತಪಡಿಸಿದ್ದಾರೆ. ತ್ವರಿತ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳುವಂತೆ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಕೇಂದ್ರೀಯ ಪಡೆಗಳು ಮತ್ತು ಜಮ್ಮು-ಕಾಶ್ಮೀರ ಆಡಳಿತಕ್ಕೆ ನಿರ್ದೇಶ ನೀಡಿದ್ದಾರೆ. ಜನರು ಘಟನೆಯ ಕುರಿತು ಮಾಹಿತಿಗಳನ್ನು ಪಡೆದುಕೊಳ್ಳಲು ಜಮ್ಮು-ಕಾಶ್ಮೀರ ಆಡಳಿತವು ಸಹಾಯವಾಣಿಗಳನ್ನು ಸ್ಥಾಪಿಸಿದೆ.ಮೂರು ವರ್ಷಗಳ ವಿರಾಮದ ಬಳಿಕ 43 ದಿನಗಳ ಅಮರನಾಥ ಯಾತ್ರೆಯು ಜೂ.30ರಂದು ಆರಂಭಗೊಂಡಿತ್ತು.