ಕರಾವಳಿಯಲ್ಲಿ ಜು. 12ರಿಂದ 5 ದಿನ ಆರೆಂಜ್ ಅಲರ್ಟ್; ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ಶಾಲೆಗಳಿಗೆ ರಜೆ ಇಲ್ಲ
![ಕರಾವಳಿಯಲ್ಲಿ ಜು. 12ರಿಂದ 5 ದಿನ ಆರೆಂಜ್ ಅಲರ್ಟ್; ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ಶಾಲೆಗಳಿಗೆ ರಜೆ ಇಲ್ಲ ಕರಾವಳಿಯಲ್ಲಿ ಜು. 12ರಿಂದ 5 ದಿನ ಆರೆಂಜ್ ಅಲರ್ಟ್; ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ಶಾಲೆಗಳಿಗೆ ರಜೆ ಇಲ್ಲ](https://www.varthabharati.in/sites/default/files/images/articles/2022/07/11/342019-1657553279.jpg)
ಫೈಲ್ ಫೋಟೊ
ಉಡುಪಿ : ಉಡುಪಿ ಸೇರಿದಂತೆ ಕರ್ನಾಟಕ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಜು.೧೨ರಿಂದ ೧೬ರವರೆಗೆ ಆರೆಂಜ್ ಅಲರ್ಟ್ನ್ನು ಘೋಷಿಸಲಾಗಿದೆ. ಈ ಅವಧಿಯಲ್ಲಿ ೧೧೫.೬ಮಿ.ಮೀ.ನಿಂದ ೨೦೪.೪ಮಿ.ಮೀ. ನಷ್ಟು ಭಾರೀ ಮಳೆ ಸುರಿಯುವ ನಿರೀಕ್ಷೆ ಇದೆ ಎಂದು ಬೆಂಗಳೂರಿನ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಈ ದಿನಗಳಂದು ಕರ್ನಾಟಕ ಕರಾವಳಿ ತೀರದುದ್ದಕ್ಕೂ ಗಂಟೆಗೆ ೪೫ರಿಂದ ೫೫ ಕಿ.ಮೀ. ವೇಗದ ಗಾಳಿಯು ಬೀಸುವ ಸಂಭವವಿದೆ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ಮೀನುಗಾರಿಕೆಗೆ ತೆರಳದಂತೆ ಎಚ್ಚರಿಸಲಾಗಿದೆ. ಅಲ್ಲದೇ ಅರಬಿ ಸಮುದ್ರದಲ್ಲಿ ೩.೫ರಿಂದ ೪ಮೀ. ಎತ್ತರದ ತೆರೆಗಳು ದಡವನ್ನು ಅಪ್ಪಳಿಸುವ ಸಾಧ್ಯತೆಯೂ ಇದೆ ಎಂದು ಹವಾಮಾನ ಮುನ್ಸೂಚನೆಯಲ್ಲಿ ತಿಳಿಸಲಾಗಿದೆ.
ಶಾಲೆಗಳಿಗೆ ರಜೆ ಇಲ್ಲ: ಕಳೆದ ಒಂದು ವಾರದ ಭಾರೀ ಮಳೆಯ ಹಿನ್ನೆಲೆಯಲ್ಲಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ನೀಡಲಾಗಿದ್ದ ರಜೆ ಇಂದಿಗೆ ಮುಕ್ತಾಯ ಗೊಂಡಿದೆ. ನಾಳೆಯಿಂದ ಜಿಲ್ಲೆಯ ಯಾವದೇ ತಾಲೂಕಿನಲ್ಲಿ ಅಂಗನವಾಡಿ, ಶಾಲಾ-ಕಾಲೇಜು ಮುಂತಾದ ಶೈಕ್ಷಣಿಕ ಸಂಸ್ಥೆಗಳಿಗೆ ರಜೆ ಇರುವುದಿಲ್ಲ. ತರಗತಿಗಳು ಎಂದಿನಂತೆ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ತಾಲೂಕುಗಳ ತಹಶೀಲ್ದಾರರು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ವರದಿಯನ್ನು ಪರಿಗಣಿಸಿ ನಾಳೆಯಿಂದ ಶಾಲಾ-ಕಾಲೇಜುಗಳಿಗೆ ರಜೆ ನೀಡದಿರಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಆದರೆ ವಿದ್ಯಾರ್ಥಿಗಳ ಹಾಜರಾತಿಯನ್ನು ಕಡ್ಡಾಯಗೊಳಿಸದಂತೆ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ ಹಾಗೂ ಸಂಬಂಧಪಟ್ಟವರಿಗೆ ಸೂಚನೆಗಳನ್ನು ನೀಡಲಾಗಿದೆ. ಶಾಲೆಯ ಹೆಚ್ಚಿನ ವಿದ್ಯಾರ್ಥಿಗಳು ನೆರೆಬಾಧಿತ ಪ್ರದೇಶ ಗಳಿಂದ ಬರುವವರಾದರೆ ಶಾಲೆಗೆ ಸ್ಥಳೀಯವಾಗಿ ರಜೆ ಘೋಷಿಸಲು ಅವಕಾಶ ಕಲ್ಪಿಸಲಾಗಿದೆ.
ಕಳೆದೊಂದು ವಾರದಿಂದ ಮಳೆಗಾಗಿ ರಜೆಯನ್ನು ನೀಡಿ ಉಂಟಾಗಿರುವ ಕಲಿಕಾ ಸಮಯದ ನಷ್ಟವನ್ನು ಶನಿವಾರ ಅಪರಾಹ್ನ ಹಾಗೂ ರವಿವಾರಗಳಂದು ಹೆಚ್ಚುವರಿ ತರಗತಿಗಳನ್ನು ನಡೆಸುವ ಮೂಲಕ ಸರಿದೂಗಿಸುವಂತೆ ತಿಳಿಸಲಾಗಿದೆ.